Tuesday 21 August, 2007

ಕೊಡಚಾದ್ರಿ-3



ಮೂಕಾಂಬಿಕ ಅಭಯಾರಣ್ಯದ ಒಂದು ಚಿತ್ರ

ಎಲ್ಲಿದ್ದೇವೆ ಮತ್ತು ರಸ್ತೆಯಿಂದ ಎಷ್ಟು ದೂರದಲ್ಲಿದ್ದೇವೆ ಎನ್ನುವುದನ್ನು ತಿಳಿದುಕೊಳ್ಳಲು ಕಾತುರಾಗಿದ್ದೆವು. ರಾಘವೇಂದ್ರ ಸ್ಪಯ್ಸ್ ನಲ್ಲಿ ಕೆಲಸ ಮಾಡುವ ತನ್ನ ಸ್ನೇಹಿತನಿಂದ ನಾವು ಎಲ್ಲಿದ್ದೇವೆ ಎಂದು ತಿಳಿದುಕೊಳ್ಳಲು ಮಾಡಿದ ಪ್ರಯತ್ನ ವ್ಯರ್ಥವಾಗಿತ್ತು. ಈಗ ನಾವು ಎಲ್ಲಿದ್ದೇವೆ? ಎಷ್ಟು ದೂರ ನೆಡೆದರೆ ರಸ್ತೆ ಸಿಕ್ಕಬಹುದು ಎಂದು ಯೋಚಿಸತೊಡಗಿದೆವು. ಕತ್ತಲು ಆವರಿಸತೊಡಗಿತು. ಬ್ಯಾಗಿನಲ್ಲಿದ್ದ ಟಾರ್ಚ್, ಬ್ಯಾಟರಿಗಳನ್ನ ಕೈಗೆತ್ತಿಕೊಂಡೆವು, ನಮ್ಮ ಬಳಿ ಆರು ಇಲ್ಲವೇ ಏಳು ಟಾರ್ಚ್ ಇದ್ದವು. ಬ್ಯಾಗ್ ಪ್ಯಾಕ್ ಮಾಡಿಕೊಂಡು ಟಾರ್ಚ್ ಬೆಳಕಿನಲ್ಲಿ ಮುಂದೆ ನೆಡೆಯೋಣ ಎನ್ನುವುದು ನಮ್ಮ ನಿರ್ಧಾರವಾಗಿತ್ತು. ಇಲ್ಲಿಂದ ಮುಂದೆ ಎಲ್ಲರೂ ಒಂದೇ ಗುಂಪಿನಲ್ಲಿ ನೆಡೆಯ ಬೇಕು, ಯಾರೂ ಹಿಂದು ಮುಂದಾಗಬಾರದು ಎಂದು ನಿಶ್ಚಯಿಸಿದೆವು. ಹನ್ನೆರಡು ಜನರ ಗುಂಪಿನ ಮುಂದಾಳುಗಳಾಗಿ ಮಚ್ಚು ಹಿಡಿದಿದ್ದ ಹರೀಶ ಮತ್ತು ಟಾರ್ಚ್ ಹಿಡಿದಿದ್ದ ಮಿಲ್ಟ್ರಿ ಇದ್ದರು. ಅವರನ್ನು ಹಿಂಬಾಲಿಸಿಕೊಂಡು ಉಳಿದ ನಾವುಗಳೆಲ್ಲರೂ ನೆಡೆಯತೊಡಗಿದೆವು. ರಸ್ತೆ ಇಲ್ಲಿಯವರೆಗೆ ನಾವು ನೆಡೆದುಬಂದಿದ್ದಕ್ಕಿಂತ ಏನೂ ಬೇರೆಯಾಗಿರಲಿಲ್ಲ. ತರಗೆಲೆಗಳು, ಏರಿಳಿತ, ಅಕ್ಕ ಪಕ್ಕ ಎತ್ತರದ ಮರಗಳು. ಈ ರಸ್ತೆಯನ್ನು ಬೆಳಗಿನಿಂದಲೂ ನೋಡಿ ನಮಗೆಲ್ಲಾ ಇದು ಆಗಲೇ ಚಿರಪರಿಚಿತವಾದಂತನಿಸುತಿತ್ತು.

ಇಷ್ಟರಲ್ಲಾಗಲೇ ಕತ್ತಲು ಆವರಿಸಿತ್ತು. ಕೈಯಲ್ಲಿ ಬ್ಯಾಟರಿ ಹಿಡಿದು ಎದುರಿಗೆ ಅಂದಾಜಿನಲ್ಲಿ ಕಾಣುವ ದಾರಿಯಲ್ಲಿ ಒಂದರ ಹಿಂದೆ ಒಂದು ಹೋಗುವ ಕುರಿಗಳಂತೆ ಹೆಜ್ಜೆ ಹಾಕಿದೆವು. ಆಗಲೇ ಗಿರಿಶ, ಜಯಂತ ಮತ್ತು ಷಿರೀಶ ಈ ಮೂವರೂ ನಿತ್ರಾಣರಾಗಿದ್ದರು. ಎಲ್ಲರೂ ನೆಡೆಯುತ್ತಿದ್ದರಿಂದ ಅವರೂ ನಡೆಯ ತೊಡಗಿದರು. ಒಂದು ಕೈಯಲ್ಲಿ ಉದ್ದನೆಯ ದೊಣ್ಣೆಯನ್ನು ನೆಲಕ್ಕೆ ಊರಿಕೊಂಡು ಅರ್ಧ ಭಾರ ಅದರ ಮೇಲೆ ಹಾಕಿ ಇನ್ನೊಂದು ಕೈಯನ್ನು ಪಕ್ಕದಲ್ಲಿ ಬರುತ್ತಿರುವವನ ಹೆಗಲಿಗೆ ಹಾಕಿ ಅವನ ಮೇಲೆ ಉಳಿದರ್ಧ ಭಾರ ಹೇರಿ ಹೆಜ್ಜೆ ಇಡ ತೊಡಗಿದರು. ಆ ಕತ್ತಲು ದಾರಿಯಲ್ಲಿ ಅಲ್ಲೊಂದು ಇಲ್ಲೊಂದು ಬಿದ್ದಿದ್ದ ಮರಗಳನ್ನು ಹತ್ತಿ, ಹಾರಿದೆವು. ಮುಂದಿದ್ದ ಹರೀಶ ರಸ್ತೆಗೆ ಅಡ್ಡವಾಗಿದ್ದ ಸಣ್ಣ ಪುಟ್ಟ ಮುಳ್ಳು ಗಿಡಗಳನ್ನು ಸವರುತ್ತಾ ಮುಂದೆ ನೆಡೆದೆದಹಾಗೆ ಉಳಿದವರು ಅವನನ್ನು ಹಿಂಬಾಲಿಸಿದೆವು. ಕತ್ತಲಲ್ಲಿ ನೆಡೆಯುತ್ತಲೇ ಎಲ್ಲಿಯಾದರೂ ವಾಹನಗಳ ಸದ್ದು ಕೇಳುವುದೇ ಎಂದು ಕಿವಿ ಅಗಲಿಸಿಕೊಂಡೇ ನೆಡೆಯುತಿದ್ದೆವು.

ಒಂದು ಇಳಿಜಾರುನ್ನು ಇಳಿದಮೇಲೆ ಸ್ವಲ್ಪ ಸಮತಟ್ಟಾದ ಹಾದಿಗೆ ಬಿದ್ದೆವು. ಇಷ್ಟರಲ್ಲಾಗಲೇ ನಮ್ಮ ಕಷ್ಟಗಳನ್ನು ನೋಡಲಾಗದೆ ಸೂರ್ಯ ಕತ್ತಲೆ ಮನೆಗೆ ಹೋಗಿದ್ದ. ಹತ್ತು ಹೆಜ್ಜೆ ಇಡುವುದರಲ್ಲಿ ದಾರಿ ಹಸಿಯಾಯಿತು. ಕಾಲಿನ ಕೆಳಗೆ ಪಚ-ಪಚ ಎನ್ನುವಷ್ಟು ಕೆಸರು. ಮಳೆಗಾಲದಲ್ಲಿ ಹರಿದು ಈಗ ಬೇಸಿಗೆಯಲ್ಲಿ ಬತ್ತಿ ಹೋಗಿರುವಂತಹ ಒಂದು ಸಣ್ಣ ಝರಿಯಿದು, ನೀರು ಹರಿಯದಿದ್ದರೂ ನೆಲ ಇನ್ನೂ ಹಸಿಯಾಗೇ ಇತ್ತು. ಇಲ್ಲಿ ಸ್ವಲ್ಪ ಮುಳ್ಳಿನ ಗಿಡಗಳೂ ಹೆಚ್ಚಾದವು. ಒಂದು ದೊಡ್ಡ ಮರ ಅಡ್ಡ ಬಿದ್ದಿತ್ತು. ಮುಳ್ಳು ಸವರಿ ಮರದ ದಿಣ್ಣೆಯನ್ನು ಹಾರಿ ಮುಂದಡಿಯಿಟ್ಟೆವು. ಕತ್ತಲಾಗಿದ್ದರಿಂದಲೂ ಮತ್ತು ಬೆಳಗಿನಿಂದ ನೆಡೆದು ಸುಸ್ತಾಗಿದ್ದರಿಂದಲೂ ನಮ್ಮ ನೆಡಿಗೆಯ ವೇಗ ಕ್ಷೀಣಿಸಿತ್ತು. ಈ ಕೆಸರಿನ ಜಾಗದಿಂದ ೫ ನಿಮಿಷ ಮುಂದೆ ನೆಡೆದ ಮೇಲೆ ದಾರಿ ಸೀಳಾಗಿ ಎರಡಾದಂತಿತ್ತು. ಇಲ್ಲಿಂದ ಮುಂದೆ ಯಾವ ದಾರಿಯನ್ನು ಹಿಡಿಯುವುದು? ನಾವೊಂದು ನಾಲ್ಕು ಜನ ಈ ಬಗ್ಗೆ ಯೋಚಿಸುತ್ತಿರಬೇಕಾದರೆ ಇಲ್ಲಿಂದ ಮ್ಮುಂದೆ ಎಲ್ಲಿಗೂ ಹೋಗುವುದೂ ಬೇಡ ಇಲ್ಲೇ ರಾತ್ರಿ ಕಳೆದು ಬೆಳಗಾದ ಮೇಲೆ ಯಾವ ದಾರಿ ಹಿಡಿಯ ಬೇಕು ಎಂದು ನೋಡಿದರಾಯಿತು ಎಂದು ಷಿರೀಶ, ಗಿರೀಶ ಮತ್ತು ಜಯಂತರೆಂದರು. ಈ ವಾದವನ್ನು ನಾವುಗಳು ಒಪ್ಪುವ ಹಾಗೆ ಇರಲಿಲ್ಲ 'ಹತ್ತಿರದಲ್ಲೇ ಜಾಗ ತಣ್ಣಗಿದೆ. ಬೇಸಿಗೆಯಲ್ಲಿ ಹಾವುಗಳಿಗೆ ಇರಲು ಇದಕ್ಕಿಂದ ಬೆಸ್ಟ್ ಜಾಗ ಇನ್ನೊಂದಿರೊಲ್ಲ, ನಾವು ಇಲ್ಲಿ ಇರೋ ಹಾಗೆ ಇಲ್ಲ' ಎಂದ ಮಿಲ್ಟ್ರಿಯ ಮಾತನ್ನು ಎಲ್ಲರೂ ಒಪ್ಪಿದರು. ಸುಸ್ತಾಗಿದ್ದ ಎಲ್ಲರಿಗೂ ಜಯಂತ ಮಥುರಾ ಪೇಡ ತಿನ್ನಿಸಿದ. ಸಿಹಿ ತಿಂಡಿ ಬಾಯಿಗೆ ಬಿದ್ದಕೂಡಲೇ ಮೈಯಲ್ಲಿ ಗ್ಲೂಕೋಸ್ ಹರಿದು ಎಲ್ಲರೂ ಮತ್ತೆ ನೆಡೆಯಲು ಸಜ್ಜಾದೆವು.

ಮತ್ತದೇ ನಿಧಾನ ಗತಿಯಲ್ಲಿ ಕಾಲುಗಳನ್ನು ಎಳೆದು ಕೊಂಡು ನೆಡೆಯತೊಡಗಿದೆವು. ಈಗ ಸಮಯ ರಾತ್ರಿಯ ಎಂಟು ಗಂಟೆಯಾಗಿತ್ತು. ಇಲ್ಲಿಯವರೆಗೆ ನೆಡೆಯುತ್ತಿದ್ದ ದಾರಿಯಲ್ಲಿ ಶಾಮಿಯಾನ ಹಾಕಿದ ಹಾಗೆ ಮರಗಳು ತಲೆಯ ಮೇಲಿದ್ದವು. ನಾವು ಈಗ ತಲುಪಿದ್ದ ಜಾಗದಲ್ಲಿ ನಮ್ಮ ತಲೆಯ ಮೇಲೆ ಈ ಮರಗಳ ಶಾಮಿಯಾನ ಇರದೇ ಸ್ವಚ್ಚ ಆಕಾಶ ಕಾಣತೊಡಗಿತು. ಈ ಸ್ಥಳ ಒಂದು ಸಣ್ಣ ಬಯಲಿನಂತೆಯೇ ಇತ್ತು. ಒಂದು ಬದಿಗೆ ನಾವು ನೆಡೆದು ಬರುತ್ತಿದ್ದ ದಾರಿ. ಇಲ್ಲಿ ದಾರಿ ಮಟ್ಟಸವಾಗಿತ್ತು. ದಾರಿಯ ಇದುರಿಗೆ ಸಣ್ಣ ಸಣ್ಣ ಕುರುಚಲು ಗಿಡಗಳು. ಅದರ ಆಚೆಗೆ ಕೋಟೆಯಂತೆ ಕಾಣುತಿದ್ದ ಎತ್ತರದ ಮರಗಳು. ನಾವು ರಾತ್ರಿ ಕ್ಯಾಂಪ್ ಮಾಡಲು ಈ ಜಾಗ ಪ್ರಶಸ್ತವಾಗಿತ್ತು. ಸುಮಾರು ದೂರದವರೆಗೂ ನಮಗೆ ನೀರಿನ ತೊರೆ ಕಾಣಿಸಿರಲಿಲ್ಲ ಆದ್ದರಿಂದ ರಾತ್ರಿಯಲ್ಲಿ ಬೇಡದ ಕಾಡಿನ ಅಥಿತಿಗಳು ಈ ಕಡೆಗೆ ಬರುವು ಕಡಿಮೆಯೇ. ಸ್ವಲ್ಪ ಬಯಲಿದ್ದಿದ್ದರಿಂದ ಯಾವುದಾದರೂ ಪ್ರಾಣಿಗಳು ಬಂದರೆ ನಮಗೆ ಕಾಣುತ್ತವೆ ಎಂದು ಕೊಂಡೆವು. ತಲೆಯ ಮೇಲೆ ಮರಗಳಿರದ ಕಾರಣ ರಾತ್ರಿ ಸ್ವಲ್ಪ ಹೊತ್ತಾದ ಮೇಲೆ ಬೆಳದಿಂಗಳು ಆರಾಮವಾಗಿ ನೆಲದ ಮೇಲೆ ಬೀಳುವುದರಿಂದ ಒಳ್ಳೆಯ ಬೆಳಕೂ ಆಗುವುದು ಎಂದು ಎಣಿಸಿದೆವು.

ಇಷ್ಟರಲ್ಲಾಗಲೇ ಘಾಟಿ ರಸ್ತೆಯನ್ನು ಸೇರಿ ಅಲ್ಲಿಂದ ಲಾರಿಯನ್ನೋ ಬಸನ್ನೋ ಹಿಡಿಯುವ ಪ್ಲಾನನ್ನು ಕೈಬಿಟ್ಟಿದ್ದೆವು. ನಾವು ಈ ರಾತ್ರಿಯನ್ನು ಇಲ್ಲೇ ಕಾಡಲ್ಲೇ ಕಳೆಯಬೇಕು ಎನ್ನುವುದು ಖಾತ್ರಿಯಾಗಿತ್ತು. ಆದರೆ ಹರೀಶ, ಚಂದ್ರ ಮಹೇಶ ಹಾಗೂ ಜಗದೀಶ ಘಾಟಿ ರಸ್ತೆ ಸೇರುವ ಆಸೆಯನ್ನು ಇನ್ನೂ ಬಿಟ್ಟಿರಲಿಲ್ಲ. ಇವರ ಜೊತೆಗೆ ಮಥುರಾ ಪೇಡಾ ತಿಂದು ಫಾರ್ಮಿಗೆ ಬಂದಿದ್ದ ರಾಘವೇಂದ್ರನೂ ಸೇರಿಕೊಂಡ, 'ಇಲ್ಲೇನು ನಾವು ಎಂಟೂವರೇಗೆ ಈ-ಟಿ.ವಿ. ನ್ಯೂಸ್ ನೋಡ ಬೇಕಾಗಿಲ್ಲ, ಹತ್ತು ಗಂಟೆವರೆಗೆ ಎಷ್ಟು ದೂರ ಆಗುತ್ತೋ ಅಷ್ಟು ನೆಡೆಯೋಣ ಅಷ್ಟರಲ್ಲಿ ಎಲ್ಲಾದರೂ ನಾವು ಘಾಟಿ ರಸ್ತೆ ಸೇರ ಬಹುದು, ಸೇರದಿದ್ದರೆ ಹತ್ತು ಗಂಟೆಗೆ ನೆಡೆಯುವುದನ್ನ ನಿಲ್ಲಿಸಿ ಆ ಹೊತ್ತಿನಲ್ಲಿ ಎಲ್ಲಿ ಇರುತ್ತೇವೋ ಅಲ್ಲೇ ಠಿಕಾಣಿ ಹೂಡಿದರಾಯಿತು' ಎಂದ. ಸರಿಯಪ್ಪ ಇವರು ಹೇಳಿದಂಗೇ ಆಗಲಿ ಅಂದ್ವಿ. ಅಲ್ಲಿಂದ ೫-೧೦ ನಿಮಿಷ ನೆಡೆದಿಲ್ಲ ಅಷ್ಟರಲ್ಲಿ ಗಿರೀಶ ಕೂತೇ ಬಿಟ್ಟ. 'ಗುರುಗಳೇ ನನ್ನ ಕೈಯಲ್ಲಿ ಇನ್ನು ಮುಂದಕ್ಕೆ ನೆಡೆಯೋಕೆ ಆಗೊಲ್ಲ ನನ್ನನ್ನ ಮಾತ್ರ ಇಲ್ಲಿಂದ ಮುಂದಕ್ಕೆ ಕರೀ ಬೇಡಿ' ಎಂದ. ಒಂದು ದೊಡ್ಡ ಗುಂಪಿನಲ್ಲಿ ಒಬ್ಬ ಕೂತರೂ ಕತೆ ಮುಗಿದಂತೆ. ಅವನನ್ನು ಬಿಟ್ಟು ಯಾರೂ ಎಲ್ಲೂ ಹೋಗುವಂತಿರುವುದಿಲ್ಲ. ಗಿರೀಶ ಕೂತಿದ್ದರಿಂದ ಇನ್ನು ಮುಂದೆ ಹೋಗುವಂತೆಯೇ ಇರಲಿಲ್ಲ. ೫ ನಿಮಿಷಗಳ ಹಿಂದೆ ನಾವು ನೋಡಿದ್ದ ಬಯಲಿನಂತಹ ಜಾಗಕ್ಕೆ ವಾಪಸ್ಸು ಹೋಗಿ ಅಲ್ಲಿ ರಾತ್ರಿ ಕಳೆಯುವುದೆಂದು ನಿರ್ಧರಿಸಿದೆವು.

ಹಿಂತಿರುಗಿ ೫ ನಿಮಿಷಗಳಷ್ಟು ನೆಡೆದು ಈ-ಟೀ.ವಿ. ನ್ಯೂಸ್ ಶುರುವಾಗುವ ಹೊತ್ತಿಗೆ ಆ ಬಯಲನ್ನು ತಲುಪಿದೆವು. ಆ ಹೊತ್ತಿನಲ್ಲೂ 'ಲೋ ಮಕ್ಕಳ ಈ ರಾತ್ರಿ ಹುಶಾರಾಗಿ ಒಬ್ಬರಾದ ಮೇಲೆ ಒಬ್ಬರು ಕಾವಲು ಕಾಯಬೇಕು ಕಣ್ರೋ, ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ನಾವೆಲ್ಲಾ ನ್ಯೂಸ್ ನಲ್ಲಿ ಬಂದುಬಿಡ್ತೀವಿ' ಎಂದು ನಗೆ ಚಟಾಕಿ ಹಾರಿಸಿದರು. ನಮ್ಮ ಚಾರಣಗಳಲ್ಲಿ ಹುಡುಗರು ಹೊಡೆಯೋ ಡೈಲಾಗುಗಳು, ಹಾರಿಸೋ ಚಟಾಕಿಗಳನ್ನೆಲ್ಲಾ ಇಲ್ಲಿ ಬರೀತಾ ಹೋದರೆ ಇದು ಒಂದು ಕಾದಂಬರಿನೇ ಆಗಬಹುದು. ಅದನ್ನೆಲ್ಲಾ ಇನ್ನೋದುಸಾರಿಗೆ ಇಟ್ಟು ಕೊಳ್ಳೋಣ. ನಾವೆಲ್ಲರೂ ಆ ಸಣ್ಣ ಬಯಲಿನ ಒಂದು ಬದಿಯಲ್ಲಿ ಇದ್ದ ರಸ್ತೆಯ ಮೇಲೆ ಮಲಗುವುದೆಂದು ತೀರ್ಮಾನಿಸಿದೆವು. ಹತ್ತು ಹದಿನೈದು ನಿಮಿಷಗಳಲ್ಲಿ ಇಡೀ ರಾತ್ರಿ ಬೆಂಕಿ ಉರಿಸಲು ಬೇಕಾಗುವಷ್ಟು ಸೌದೆ ಗುಡ್ಡೆ ಹಾಕಿದೆವು. ಮಿಲ್ಟ್ರಿ ಮತ್ತು ಜಗದೀಶರು ಅವನ್ನು ಬೆಂಕಿಗೆ ಕೊಡಲು ಸುಲಭವಾಗುವಂತೆ ಸಣ್ಣಗೆ ಕಡಿದರು. ಇಡೀ ರಾತ್ರಿ ಉರಿದರೂ ಮುಗಿಯದಂತಹ ಒಂದು ದೊಡ್ಡ ದಿಮ್ಮಿಯನ್ನು ಮೂರುಜನ ಸೇರಿ ಎಳೆದು ಕೊಂಡು ಬಂದೆವು. ಇಷ್ಟರಲ್ಲಾಗಲೆ ಸಾಕಾಗುವಷ್ಟು ತರಗೆಲೆಗಳನ್ನು ಗುಡ್ಡೇ ಹಾಕಲಾಗಿತ್ತು. ಜಗದೀಶ ೨ ಕ್ಷಣದಲ್ಲಿ ಬೆಂಕಿಮಾಡಿದ. ಪೇಪರಿನ ಜೊತೆಗೆ ಸ್ವಲ್ಪ ತರಗೆಲೆಗಳನ್ನು ಹಾಕಿ ಮೊದಲು ಹಚ್ಚಿದ, ಆಮೇಲೆ ಸಣ್ಣಗೆ ಕಡಿದಿದ್ದ ಸೌದೆಯನ್ನು ಅದರ ಸುತ್ತಾ ಇಡುತ್ತಾ ಬಂದ. ಅದೆಲ್ಲಾ ಉರಿಯಲು ಶುರುವಾದ ಮೇಲೆ ಮರದ ದಿಮ್ಮಿಯ ಒಂದು ತುದಿಯನ್ನು ಉರಿಯಮೇಲೆ ಬರುವಂತೆ ಎಳೆದು ನಿಲ್ಲಿಸಿ, ಅದು ಬೀಳದಂತೆ ಒಂದು ದಪ್ಪ ಕಲ್ಲನ್ನು ದಿಮ್ಮಿಗಿ ಆನಿಸಿ ಅದು ನಿಲ್ಲುವಂತೆ ಮಾಡಿದ. ಹತ್ತೇ ನಿಮಿಷದಲ್ಲಿ ದಿಮ್ಮಿ ಹತ್ತಿ ಕೊಂಡಿತು.

ಇದ್ದ ಹನ್ನೆರಡು ಜನ ೩-೩ ಜನರ ನಾಲ್ಕು ತಂಡಗಳಾಗಬೇಕು, ಎರಡು ಗಂಟೆಯ ಒಂದು ಸರತಿಯಂತೆ ಒಂದು ತಂಡವಾದ ಮೇಲೆ ಒಂದು ತಂಡ ನಿದ್ದೆ ಮಾಡದೆ ಕಾಯಬೇಕು. ಆ ೨ ಗಂಟೆಗಳಲ್ಲಿ ಅವರು ಮಾಡಬೇಕಾಗಿದ್ದೇನೆಂದರೆ, ಬೆಂಕಿ ಕೆಡಬಾರದು ಮತ್ತು ತೀರಾ ಜೋರಾಗಿಯೂ ಉರಿಯ ಬಾರದು ಹಾಗೆ ನೋಡಿಕೊಳ್ಳಬೇಕು. ಕೈಯಲ್ಲಿ ಟಾರ್ಚ್ ಹಿಡಿದೇ ಕೂತಿರಬೇಕು. ಟಾರ್ಚ್ ಬೆಳಕನ್ನು ಸುತ್ತಲೂ ಬಿಟ್ಟು ಯಾವುದಾದರೂ ಹುಳ, ಹಾವುಗಳು ಕಾಣುತ್ತವೆಯೇ ನೋಡುವುದು. ರಸ್ತೆಯ ಆಚೆಗಿದ್ದ ಪೊದೆಗಳಕಡೆಗೆ ಟಾರ್ಚ್ ಬಿಟ್ಟು ಏನಾದರೂ ತೊಂದರೆಗಳು ಆ ಕಡೆಯಿಂದ ಬರುತ್ತಿವೆಯೇ ನೋಡುವುದು. ನಾವು ತಂಗಿದ್ದ ಜಾಗ ನೀರಿನ ತೊರೆಗಳಿಗೆ ದೂರ ಇದ್ದಿದ್ದರಿಂದ ಕಾಡು ಪ್ರಾಣಿಗಳು ಈ ಕಡೆಗೆ ಬರುವುದಿಲ್ಲ ಎನ್ನುವ ಒಂದು ರೀತಿಯ ಧೈರ್ಯ ನಮ್ಮಲ್ಲಿತ್ತು. ಹೀಗೆ ಎರಡು ಗಂಟೆಗಳ ಕಾಲ ಒಂದೊಂದು ತಂಡವೂ ಮಾತಾಡುತ್ತಾ ನಿದ್ದೆಗೆ ಶರಣಾಗದೆ ಉಳಿದವರ ಕ್ಷೇಮವನ್ನು ನೋಡಿಕೊಳ್ಳೂವುದು ಎಂದು ನಿರ್ಧರಿಸಿದೆವು. ಸುಸ್ತಾಗಿದ್ದ ಗಿರೀಶ ಮತ್ತು ಜಯಂತ ಇಬ್ಬರೂ ನಮಗೆ ರಾತ್ರಿ ತಡವಾದ ಸರತಿಯಲ್ಲಿ ನಿದ್ದೆಗೆಟ್ಟು ಇರಲಾಗುವುದಿಲ್ಲ ಎಂದು ಹೇಳಿದಾಗ ಅವರಿಬ್ಬರ ಜೊತೆಗೆ ರಾಘವೇಂದ್ರನನ್ನು ಸೇರಿಸಿ ಹತ್ತರಿಂದ ಹನ್ನೆರಡರವರೆಗೆ ಕಾಯುವ ಮೊದಲ ತಂಡವನ್ನಾಗಿ ಮಾಡಿದೆವು. ಇದು ಮೊದಲ ಸರದಿಯಗಿದ್ದರಿಂದ ಈ ಮೂವರಲ್ಲದೆ ನಿದ್ದೆ ಬರದ ಇನ್ನೂ ಯಾರಾದರು ಇದ್ದೇ ಇರುತ್ತೇವೆ, ಆದ್ದರಿಂದ ಮೊದಲ ಸರದಿಯೇ ಸುಲಭದ್ದೆಂದು ಇದನ್ನು ಇವರಿಗೆ ಕೊಟ್ಟೆವು. ಅಶೋಕ, ಸಂಗಮೇಶ ಮತ್ತು ಚಂದ್ರ ರಾತ್ರಿ ಹನ್ನೆರಡರಿಂದ ಎರಡರವರೆಗಿನ ಸರತಿಯನ್ನು ಆರಿಸಿಕೊಂಡರು. ನನಗೆ, ಮಿಲ್ಟ್ರಿಗೆ ಮತ್ತು ಷಿರೀಶನಿಗೆ ಎರಡರಿಂದ ನಾಲ್ಕರವರೆಗಿನ ಸರದಿಯಾದರೆ ಕೊನೆಯ ಸರದಿ ಅಂದರೆ ಬೆಳಗಿನಜಾವ ನಾಲ್ಕರಿಂದ ಆರರವರೆಗಿನ ಸರದಿಯಲ್ಲಿ ಹರೀಶ, ಚಂದ್ರ ಮಹೇಶ ಮತ್ತು ಜಗದೀಶರಿದ್ದರು.

ಸರತಿಯ ಬಟವಾಡೆ ಆಗುವುದರೊಳಗೆ ರಾತ್ರಿ ಒಂಬತ್ತೂವರೆಯ ಮೇಲಾಗಿತ್ತು. ಇನ್ನು ನಮ್ಮ ಹತ್ತಿರ ಎಷ್ಟು ನೀರು ಮತ್ತು ಊಟ ಉಳಿದಿದೆ ಎಂದು ನೋಡಿಕೊಳ್ಳತೊಡಗಿದೆವು.

2 comments:

Harisha - ಹರೀಶ said...

ಉಫ್.... ಮತ್ತೆ ಸಸ್ಪೆನ್ಸ್...

ಕೊಡಚಾದ್ರಿ ತಲುಪಿದ್ದನ್ನು ಓದಲು ಕಾಯುತ್ತಿದ್ದೇನೆ :)

raghavendra C.V. said...

Anisutihedye yako indu...... nena e Blog bardevanedu??? Ah!!!!

Ajja nenu Aaa thara!!!!

Tumba great agebettye kan ajja.

Namma A dinagallu Nenna wordsnalli super....