Tuesday 20 November, 2007

2007 ಕರ್ನಾಟಕದ ರಾಜಕೀಯ

ಗೆಳೆಯರೆ,

youtube ನೋಡುತ್ತಿದ್ದಾಗ ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಒಂದು ವೀಡಿಯೋ ನೋಡಿದೆ. ಇದು ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನದ ವೀಡಿಯೊ ರೂಪ. ಬರೆದು ಪ್ರಸ್ತುತ ಪಡಿಸುವವರು ರವಿ ಕೃಷ್ಣ ರೆಡ್ಡಿ. ಈ ಲೇಖನಗಳನ್ನು ಅವರ ಬ್ಲಾಗಿನಲ್ಲಿಯೂ ನೋಡಬಹುದು. ಅವರ ಬ್ಲಾಗಿನ ಹಾದಿ ಕೆಳಗಿದೆ.

ಬ್ಲಾಗ್ - ಅಮೇರಿಕಾದಿಂದ ರವಿ

Thursday 8 November, 2007

ಕೊಡಚಾದ್ರಿ -6


ಚಿತ್ರ: ನಾವು ಚಾರಣ ಆರಂಭಿಸಿ, ಮುಕ್ತಾಯಗೊಳಿಸಿದ ಮಹಾದ್ವಾರ.


ಕೊಡಚಾದ್ರಿಗೆ ದಾರಿ ತೋರಿಸುತೇನೆ, ಬನ್ನಿ ಎಂದು ನಮಗೆ ಕೊಟ್ಟ ಆಹ್ವಾನ ಸ್ವೀಕರಿಸದೆ ನಾವು ಕೊಲ್ಲೂರಿನ ಕಡೆಗೆ ಹೊರಟೆವು. ಅಯ್ಯೋ ದಾರಿ ಇನ್ನೂ ಮುಗಿಲಿಲ್ಲ... ಇನ್ನೂ ಮುಗಿಲಿಲ್ಲ... ಎಂದುಕೊಂಡು ಒಂದೂವರೆ ಗಂಟೆ ನೆಡೆದು ಹಿಂದಿನ ದಿನ ಬಸ್ಸಿನಿಂದ ಇಳಿದಿದ್ದ -ಕೊಲ್ಲೂರಿಗೆ ಹೋಗುವ- ಟಾರ್ ರಸ್ತೆ ಸೇರಿದೆವು. ಎರಡು ದಿನಗಳು ಸತತವಾಗಿ ನೆಡೆದು ಸುಸ್ತಾಗಿದ್ದ ನಮಗೆಲ್ಲ ಸಧ್ಯ ಎರಡನೇ ದಿನ ಹೆಚ್ಚಿಗೆ ತೊಂದರೆಗೆ ಒಳಗಾಗದೆ ಕೊನೆ ಮುಟ್ಟಿದ್ದಕ್ಕೆ ಸಂತೋಷವಾಗಿತ್ತು. ಆದರೆ ಅಂದು ಕೊಂಡಹಾಗೆ ಕೊಡಚಾದ್ರಿ ಗುಡ್ಡವನ್ನು ನೋಡದೆ ಇದ್ದುದ್ದಕ್ಕೆ ಬೇಸರವೂ ಇತ್ತು.

ಇಲ್ಲಿಂದ ಕೊಲ್ಲೂರಿಗೆ ೧ ರಿಂದ ೨ ಕಿ.ಮೀ. ಕೆಲವರು ನೆಡೆದು ಹೊಗೋಣ ಎಂದರು, ಇನ್ನು ಕೆಲವರು ಬಸ್ಸಿಗೆ ಕಾಯೋಣ ಅಂದು ಅಲ್ಲೇ ರಸ್ತೆ ಪಕ್ಕ ಕೂತರು. ನೆಡೆಯೋದು, ಬಸ್ಸಿಡಿಯೋದು ಎಲ್ಲಾ ಬಿಟು ಆಟೋ ಹಿಡಿದು ಕೊಲ್ಲೂರಿನ ಕಡೆ ಹೊರಟೆವು. ನಮಗಿಂತ ಮುಂಚೆ ಹೋಗಿದ್ದವರು ಕೊಲೂರಿನಲ್ಲಿ ಹರಿಯುವ ಸೌಪರ್ಣಿಕ ನದಿಯ ಬಳಿ ಇರುವುದಾಗಿ ಹೇಳಿದ್ದರು. ಅಲ್ಲಿ ಹೋಗಿ ಅವರನ್ನು ಸೇರಿಕೊಂಡೆವು. ನಮಗೆ ಭೇಟಿಯಾಗಿದ್ದವನು ಹೇಳಿದ್ದನ್ನು ಅವರಿಗೆ ಹೇಳಿದೆವು. ಎಲ್ಲರೂ ನದಿಯಲ್ಲಿ ಮುಳುಗಾಕಿ ಸ್ನಾನ ಮಾಡಿದೆವು. ದೇವಿಯ ದರ್ಶನ ಮಾಡಿ ದೇವಸ್ತಾನದ ಹತ್ತಿರದಲ್ಲೇ ಇದ್ದ ಹೋಟೆಲ್ ಒಂದಕ್ಕೆ ಊಟಕ್ಕೆ ನುಗ್ಗಿದೆವು. ಅಲ್ಲಿ ಇದ್ದುದ್ದನ್ನೆಲ್ಲಾ ತಿಂದು ಬಸ್ಸು ಹಿಡಿಯಲು ಹೊರಟೆವು.

ಕೊಲ್ಲೂರಿನಿಂದ ಬಸ್ಸು ೮ ಗಂಟೆಗೆ ಹೊರಟಾಗ ಸಂತೋಷ, ದುಖಃ ಎರಡು ನಮ್ಮನ್ನು ಆವರಿಸಿಕೊಂಡಿದ್ದವು. ತೊಂದರೆ ಇಲ್ಲದೆ ವಾಪಸ್ಸು ಬಂದಿದ್ದು ಸಂತೋಷಕ್ಕೆ ಕಾರಣವಾದರೆ, ಕೊಡಚಾದ್ರಿಯ ತುದಿ ತಲುಪದೆ ಹಿಂದಿರುಗಿದ್ದಕ್ಕೆ ಬೇಸರವೂ ಇತ್ತು. ಆದರೂ ನಮಗಾದ ಅನುಭವ ಅಗಾಧವಾಗಿದ್ದದಾಗಿತ್ತು.

ಇಲ್ಲಿಗೆ ನಮ್ಮ ಕೊಡಚಾದ್ರಿಯ ಅನುಭವವನ್ನು ಮುಗಿಸೋಣ. ಇದನ್ನೆಲ್ಲಾ ಓದಿ ನಿಮಗೂ ಎಲ್ಲಾದರೂ ಚಾರಣಕ್ಕೆ ಹೋಗಬೇಕು, ಇಲ್ಲವೇ ಪ್ರಕೃತಿಯ ತೆಕ್ಕೆಗೆ ಬೀಳಬೇಕು ಎನ್ನಿಸಿರಬೇಕು. ಚಾರಣಕ್ಕೆ ಹೊರಟಿರುವವರಿಗೆಲ್ಲಾ ನಮ್ಮ ತಂಡದ ಕಡೆಯಿಂದ ಒಂದೆರೆಡು ಮಾತುಗಳು.

ಅಗತ್ಯವಾಗಿ ಮಾಡಬೇಕಾಗಿದ್ದು:

1. ಸಾಕಾಗುವಷ್ಟು ಊಟ ಮತ್ತು ನೀರು.
2. ಬೇಕಿದ್ದಷ್ಟು Electoral, Glucose Powder, First Aid Kit ಮತ್ತು ಅಗತ್ಯವಿದ್ದ ಔಷಧಗಳು.
3. ಕಾಡು ಮತ್ತು ಗುಡ್ಡಗಳಲ್ಲಿ ತಿರುಗಲು ಮಳೆಗಾಲ ಸೂಕ್ತವಲ್ಲ.
4. ಬೆಂಕಿ ಪೊಟ್ಟಣ ನೀರಿಗೆ ಬಿದ್ದರೆ ಉಪಯೋಗಕ್ಕೆ ಬರುವುದಿಲ್ಲ ಆದರಿಂದ lighter ಇರಲಿ. ಚಾಕು, ಮೇಣದ ಬತ್ತಿಗಳು ಮತ್ತು ಬ್ಯಾಟರಿ ಅಗತ್ಯ.
5. ಹೊರಟಿರುವ ಸ್ತಳದ ಬಗ್ಗೆ ಸಂಪೂರ್ಣ ಮಾಹಿತಿ ಇರಲಿ. ಸಾಧ್ಯವಾದಲ್ಲಿ ಸ್ತಳೀಯರನ್ನ ಮಾರ್ಗದರ್ಶಕರನ್ನಾಗಿ ಮಾಡಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮೊಳಗೇ ಮುಂಚೆ ಆ ಜಾಗಕ್ಕೆ ಹೋಗಿ ಬಂದವರಿದ್ದರೆ ಒಳ್ಳೆಯದು.
6. ಜಿಗಣೆಗಳ ಕಾಟಕ್ಕೆ ತಕ್ಕ ಮುಂಜಾಗ್ರತೆ ಮತ್ತು ಔಷಧಿ ಅಗತ್ಯ.
7. ಅಗತ್ಯ ಇಲ್ಲದ್ದನ್ನೆಲ್ಲಾ ತುಂಬಿಸಿ ಬ್ಯಾಗುಗಳನ್ನು ಹೊರಲಾರದ ಹಾಗೆ ಮಾಡಿಕೊಳ್ಳ ಬೇಡಿ. ಏನಾದ್ರು ಹೆಚ್ಚಿಗೆ ತೆಗೆದುಕೊಂಡು ಹೋಗಬೇಂದಿದ್ದಲ್ಲಿ, ಊಟ ಮತ್ತು ನೀರಿಗೆ ಆದ್ಯತೆ ಕೊಡಿ.

ಅಗತ್ಯವಾಗಿ ತಪ್ಪಿಸಬೇಕಾದುದ್ದು -ಮಾಡಬಾರದ್ದು:

1. ಸಿಗರೇಟು ಮತ್ತು ಮಧ್ಯಪಾನ ಬೇಡ.
2. ಕಾಡಿನಲ್ಲಿ ಬೆಂಕಿಯ ಬಗ್ಗೆ ಎಚ್ಚರ ಇರಲಿ. ಎಲ್ಲೆಂದರಲ್ಲಿ ಬೆಂಕಿ ಹಾಕಬೇಡಿ.
3. ದಾರಿಗಳನ್ನು ಬಿಟ್ಟು ಬೇರೆಡೆ ಹೋಗಬೇಡಿ. ಸಾಧ್ಯವಾದಷ್ಟು ಇರುವ ದಾರಿಗಳನ್ನೇ ಬಳಸಿ.
4. ರಾತ್ರಿಗಳಲ್ಲಿ ಕಾಡಿನಲ್ಲಿ ಉಳಿಯುವಂತಹ ಪ್ರಸಂಗ ತಂದುಕೊಳ್ಳಬೇಡಿ. ಉಳಿದರೂ ನೀರು ಇರುವ ಕಡೆ ಉಳಿಯ ಬೇಡಿ.
5. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯಬೇಡಿ. ನೀವು ಮಾಡಿದ ಕಸವನ್ನು ನಿಮ್ಮ ಜೊತೆಯಲ್ಲಿಯೇ ವಾಪಸ್ಸು ತನ್ನಿ.
6. ಕಾಡುಗಳು ಮತ್ತು ನಿರ್ಜನವಾದ ಜಾಗಗಳಲ್ಲಿ ಕೂಗಾಡುವುದು, ಅಬ್ಬರದ ಸಂಗೀತ ಹಾಕುವುದು ಬೇಡ.
7. Heroism ಇಂದ ದೂರ ಇರಿ. ಗೊತ್ತಿಲ್ಲದ/ ಪರಿಚಯವಿಲ್ಲದ ನೀರಿನ ಜಾಗದಲ್ಲಿ ಈಜಲು ಹೋಗಬೇಡಿ.

Friday 19 October, 2007

ಕೊಡಚಾದ್ರಿ -5

--- **** ---
ಕನ್ನಡದಲ್ಲಿ ಬಹಳಷ್ಟು ಬ್ಲಾಗುಗಳ ಕತೆ ’ಅಗಸ ಹೊಸತರಲ್ಲಿ...’ ಎನ್ನುವಂತೆ ಆಗಿವೆ ಅನ್ನೊ ಒಂದು ಆಪಾದನೆ ಇದೆ. ಕಾಡು ಹರಟೆನೂ ಅದೇ ಪಟ್ಟಿಗೆ ಸೇರಿಕೊಂಡಿತೇನೋ ಎಂದು ನೀವು ಅಂದುಕೊಂಡಿರಬಹುದು. ಕೆಲಸದ ಹೆಚ್ಚಿದ್ದರಿಂದ ಸ್ವಲ್ಪ ದಿನ ಬರೆಯಲು ಆಗಲಿಲ್ಲ. ಕೊಡಚಾದ್ರಿಯ ಐದನೇ ಭಾಗ ಇಲ್ಲಿದೆ, ಆರನೆಯ ಹಾಗು ಕೊನೆಯ ಭಾಗವನ್ನೂ ಸಹ ಸದ್ಯದಲ್ಲೇ ಹಾಕುತ್ತೇನೆ.

ಕಾದಿದ್ದಕ್ಕೆ ಥ್ಯಾಂಕ್ಸ್.
--- **** ---

ಬಿಸಿಲೇರೋ ಮೊದಲು ಆದಷ್ಟು ದೂರ ನೆಡೆಯಬೇಕೆಂದುಕೊಂಡು ಬೇಗ ಬೇಗನೇ ಹೆಜ್ಜೆ ಹಾಕತೊಡಗಿದೆವು. ನಾವು ೧ ಗಂಟೆಗಳಷ್ಟು ವೇಳೆ ನೆಡೆಯುವುದರೊಳಗೆ ಮೊದಲನೆಯ ತೊರೆಯನ್ನು ಸಮೀಪಿಸಿದೆವು. ಇನ್ನು ಅರ್ಧ ಗಂಟೆ ನೆಡೆದರೆ ಇನ್ನೊಂದು ತೊರೆ ಸಿಗುತ್ತದೆಂದು ಗೊತ್ತಿದ್ದರಿಂದ ಇಲ್ಲಿ ಹೆಚ್ಚು ಸಮಯ ಕಳೆಯದೆ ಮುಂದೆ ನೆಡೆದೆವು. ಸಮಯ ಬೆಳಗಿನ ಎಂಟುಗಂಟೆಯನ್ನು ದಾಟಿತ್ತು. ಆಗಲೆ ಬಿಸಿಲೇರಿ ಬೆವರು ಕೀಳತೊಡಗಿತ್ತು. ಆದರೂ ಜಯಂತ ತನ್ನ ಜಾಕೆಟ್ ಹಾಕಿಕೊಂಡೇ ನೆಡೆಯುತ್ತಿದ್ದ. 'ಯಾಕೋ ಕಂದ ನಿನಗೆ ಶಕೆಯಾಗುತ್ತಿಲ್ಲವೇ?' ಎಂದು ಕೇಳಿದರೆ, 'ಮಗ ಇದುನ್ನ ಬಿಚ್ಚಿ ಬ್ಯಾಗಿಗೆ ಹಾಕಿದರೆ ಬ್ಯಾಗ್ ಭಾರ ಆಗಿ ನೆಡೆಯೋದು ಕಷ್ಟ ಆಗುತ್ತೆ' ಎಂದ! ಅಯ್ಯೋ ಇವನಾ... ಎಂದು ಅವನ ಜಾಕೆಟ್ ತೆಗೆದುಕೊಂಡು ನನ್ನ ಬ್ಯಾಗಿಗೆ ತುರುಕಿದೆ.

ವಾಪಸ್ ನೆಡೆಯುತ್ತಾ ಅತ್ತ ಇತ್ತ ಹಾದಿ ನೋಡುತ್ತಿರುವಾಗ 'ಅಬ್ಬ ನೆನ್ನೆ ರಾತ್ರಿ ಕತ್ತಲೆಯಲ್ಲಿ ಎಂತಾ ಕಷ್ಟದ ದಾರಿ ಸವೆಸಿದ್ದೇವೆ' ಎಂದುಕೊಂಡೆವು. ಕೆಲವು ಕಡೆಗಳಲ್ಲಿ ದಾರಿಯೇ ಇರಲಿಲ್ಲ, ಇನ್ನು ಕೆಲವು ಕಡೆ ದೊಡ್ಡ ದೊಡ್ಡ ಮರಗಳು ಅಡ್ಡ ಬಿದ್ದಿದ್ದರೆ ಒಂದೆರೆಡುಕಡೆ ಭೂಮಿ ಜರುಗಿ ದೊಡ್ಡ ಕಂದಕಗಳೇ ಆಗಿದ್ದವು. ಚೆನ್ನಾಗಿ ಬೆಳಕಿರುವಾಗ ಈ ದಾರಿಗೆ ಬಂದಿದ್ದರೆ ಖಂಡಿತವಾಗಿಯೂ ಮುಂದೆ ಹೋಗದೆ ಹಿಂತಿರುಗುತ್ತಿದ್ದೆವು.

ಎರಡನೇ ತೊರೆ ಬೆಳಗ್ಗೆ ೮-೩೦ರ ಸುಮಾರಿಗೆ ಸಿಕ್ಕಿತು. ನೆನ್ನೆಯಿಂದ ಒಂದೇ ಸಮನೆ ನೆಡೆದು ಸುಸ್ತಾಗಿದ್ದೆ. ಬೆವರು ಧಾರಳವಾಗಿ ಹರಿದು ಮೈ ನೆನೆದು, ಬಿಸಿಲಿಗೆ ಒಣಗಿ ಮತ್ತೆ ನೆನೆದು ಸಣ್ಣಗೆ ವಾಸನೆ ಬರಲು ಶುರುವಾಗಿತ್ತು. ಹೇಗಿದ್ದರು ತೊರೆಯಲ್ಲಿ ಅಲ್ಲೊಂದು ಇಲ್ಲೊಂದು ಸೊಂಟದೆತ್ತರದ ಗುಂಡಿಗಳಿದ್ದವು. ನಾನು ಮೊದಲು ತಲುಪಿದ್ದರಿಂದ ಹಿಂದಿನವರು ಬಂದು ಕೂಡಿಕೊಳ್ಳುವುದರೊಳಗೆ ಸ್ನಾನ ಮಾಡೋಣವೆಂದು ಸೋಪು ಹಿಡಿದು ಸ್ವಲ್ಪ ಕೆಳಗೆ ನೆಡೆದೆ. ಬೇಸಿಗೆಯಲ್ಲೂ ನೀರು ತಣ್ಣಗೆ ಕೊರೆಯುತ್ತಿತ್ತು. ನೀರಿಗೆ ಬಿದ್ದು ಎಮ್ಮೆಯಂತೆ ಉರುಳಾಡಿ ಸ್ನಾನ ಪೂರೈಸುವುದರೊಳಗೆ ಎಲ್ಲರೂ ಆ ತೊರೆಯನ್ನು ಬಂದು ಸೇರಿದರು. ನನ್ನನ್ನು ನೋಡಿ ಉತ್ತೇಜಿತರಾದ ಕೆಲವರು ಸ್ನಾನಮಾಡಿದರೆ, ಉಳಿದವರು ಕೈ ಕಾಲು ಮುಖ ತೊಳೆದೇ ಸಂತುಷ್ಟರಾದರು.

ಒಬ್ಬೊಬ್ಬರು ೬-೬ ಪಾರ್ಲೇಜಿಗಳನ್ನು ತಿಂದು ತಿಂಡಿಯ ಶಾಸ್ತ್ರವನ್ನು ಪೂರೈಸಿದೆವು. ಇಲ್ಲಿಂದ ಹೊರಟಾಗ ಸಮಯ ೯ ದಾಟಿತ್ತು. ಸುಮಾರು ೧೨-೩೦ರ ಸುಮಾರಿಗೆ ಹಿಂದಿನ ದಿನ ಬಂದು ತಲುಪಿದ್ದ ಕೊಡಚಾದ್ರಿಯ ಪಕ್ಕಕ್ಕಿದ್ದ ಗುಡ್ಡವನ್ನು ಬಂದು ಸೇರಿದೆವು. ಹಿಂದಿನ ಸಂಜೆ ೧ ಗಂಟೆಯಲ್ಲಿ ಇಳಿದಿದ್ದ ಇಳಿಜಾರನ್ನು ಮತ್ತೆ ಹತ್ತಲು ಇಂದು ನಮಗೆ ೩ ಗಂಟೆಗೂ ಹೆಚ್ಚಿನ ಸಮಯ ಹಿಡಿದಿತ್ತು. ಬೊಳು ನೆತ್ತಿಯನ್ನು ಸಮೀಪಿಸುತ್ತಿದ್ದಂತೆ ಮರಗಳು ಕಡಿಮೆಯಾಗಿ ಮಧ್ಯಾನ್ಹದ ಬಿಸಿಲಿನ ಹೊಡೆತಕ್ಕೆ ಸಿಕ್ಕಿ ತತ್ತರಿಸಿದ್ದೆವು. ಅಲ್ಲೊಂದು ಇಲ್ಲೊಂದು ಇದ್ದ ಮರದ ನೆರಳಿನಲ್ಲಿ ಕಾಲು ಚಾಚಿದೆವು. ಸ್ವಲ್ಪ ವಿಶ್ರಮಿಸಿ, ಪಾರ್ಲೇಜೀ ತಿಂದು ನೀರು ಕುಡಿದೆವು. ಇಲ್ಲಿಂದ ಹಿಂದಿನ ದಿನ ನಾವು ಬಸ್ಸಿನಿಂದ ಇಳಿದಿದ್ದ ಟಾರ್ ರಸ್ತೆ ಸೇರಲು ಸುಮಾರು ೬ ಗಂಟೆಗಳು ಬೇಕಾಗಬಹುದು ಎಂದುಕೊಂಡೆವು.

೧ ಗಂಟೆಯ ಊಟದ ವಿರಾಮ ಮುಗಿಸಿ, ೧:೩೦ರ ಸುಮಾರಿಗೆ ಬೆಟ್ಟ ಇಳಿಯಲು ಸಜ್ಜಾದೆವು. ಇಲ್ಲಿಂದ ಮುಂದೆ ಬರೀ ಇಳಿಜಾರು. ವಿಶ್ರಾಂತಿಯ ನಂತರ ಶಕ್ತಿ ವೃದ್ದಿಸಿಕೊಂದಿಡ್ಡರಿಂದ ಧಡ ಧಡನೆ ಇಳಿಯ ತೊಡಗಿದೆವು. ಕಡಿದಾದ ಈ ಇಳಿಜಾರನ್ನು ನೋಡಿದಾಗ ನಾವುಗಳು ಹಿಂದಿನ ದಿನ ಹೇಗೆ ಈ ದಾರಿಯನ್ನು ಹತ್ತಿ ಹೋಗಿದ್ದೆವೋ ಎಂದು ಕೊಂಡೆ. ಇದಕ್ಕೂ ಮುಂಚೆ ನಾನು ನೋಡಿದ್ದ ಕಡಿದಾದ ಬೆಟ್ಟ ಎಂದರೆ ಚಿಕ್ಕಮಗಳೂರು ಜಿಲ್ಲೆಯ ದೇವೀರಮ್ಮನ ಬೆಟ್ಟ. ದೇವಿರಮ್ಮನ ಬೆಟ್ಟದ ಏರನ್ನು ಸತತವಾಗಿ ೪೫ ನಿಮಿಷಗಳಷ್ಟು ಹತ್ತಿದರೆ ತುದಿ ತಲುಪುತ್ತೇವೆ. ಆದರೆ ಈ ಬೆಟ್ಟದ ಏರನ್ನು ಅರ್ಧ ದಿನಕ್ಕೂ ಹೆಚ್ಚಿಗೆ ಹತ್ತಿದ್ದೆವು.

ಇಳಿಜಾರನ್ನು ನಾವು ಅಂದುಕೊಂಡಿದ್ದಕಿಂತಲೂ ಬೇಗನೆ ಇಳಿಯ ತೊಡಗಿದ್ದೆವು. ಹಿಂದಿನ ದಿನ ನಾವು ನೋಡಿದ್ದ ಝರಿಯ ಬಳಿಗೆ ಒಬ್ಬೊಬ್ಬರಾಗಿ ಬಂದು ವಿಶ್ರಮಿಸಿ ಕೊಳ್ಳತೊಡಗಿದೆವು. ಎರಡು ದಿನಗಳವರೆಗೆ ಸತತವಾಗಿ ನೆಡೆದು ಕಾಲುಗಳು ರಾಗ ಹಾಡುತ್ತಿರುವಾಗ ತಣ್ಣಗೆ ಕೊರೆಯುವ ನೀರಿನಲ್ಲಿ ಕಾಲು ಮುಳುಗಿಸಿಕೊಂಡು ಕೂತರೆ ದೊರೆಯುವ ಆನಂದ... ಆ.. ಹಾ.. ಎನ್ನುವಂತಹುದು... ಅನುಭವಿಸಿದವರಿಗೇ ಅದು ಗೊತ್ತು. ಉಳಿದಿದ್ದ ಬ್ರಿಟಾನಿಯ ಕೇಕು ಮತ್ತು ಸ್ವಲ್ಪ ಬಿಸ್ಕೆಟ್ ತಿಂದು ಆಗುವಷ್ಟು ನೀರು ಕುಡಿದು ಮತ್ತೆ ಹೊರಡಲು ತಯಾರಾದೆವು. ಹರೀಶ, ಜಗದೀಶ, ಮಿಲ್ಟ್ರಿ ಇವರೆಲ್ಲಾ "ನಾವು ಮುಂದೆ ಮುಂದೆ ಹೊಗುತ್ತೇವೆ. ನೀವು ಟಾರ್ ರಸ್ತೆ ಬಂದು ಸೇರುವುದು ತಡ ಆದರೆ ನಾವು ನಿಮಗೆ ಕಾಯದೆ ಕೊಲ್ಲೂರಿಗೆ ಹೊಗಿರುತ್ತೇವೆ. ಅಲ್ಲಿ ಸೀದ ನದಿಗೆ ಬನ್ನಿ ನಾವು ಅಲ್ಲೇ ಇರುತ್ತೇವೆ" ಎಂದು ಹಿಂದೆ ಬೀಳುವ ಗ್ಯಾಂಗಿಗೆ ಹೇಳಿ ಹೊರಟರು.

ನಾವು ಒಂದು ಆರು ಜನ ಇನ್ನೂ ಸ್ವಲ್ಪ ಹೂತ್ತು ನೀರಿನಲ್ಲಿ ಕಾಲಾಡಿಸುತ್ತ ಕೂತಿದ್ದೆವು. ಇಲ್ಲಿಂದ ಮುಂದೆ ನಮಗೆ ಸಿಗುತ್ತಿದ್ದ ಮುಖ್ಯ ಜಾಗಗಳೆಂದರೆ ಹಿಂದಿನ ದಿನ ಅರಿಶಿನಗುಂಡಿ ಫಾಲ್ಸಿಗೆ ಹೊಗಲು ಹಿಡಿದಿದ್ದ ಕಾಲುದಾರಿ, ಅಲ್ಲಿಂದ ೧ ಗಂಟೆಯ ದೂರಕ್ಕೆ ಟಾರ್ ರಸ್ತೆ. ಸಂಜೆ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಅರಿಶಿನಗುಂಡಿಯ ಕಡೆಗೆ ತಿರುಗುವ ಕಾಲು ದಾರಿಯ ಬಳಿ ಬಂದೆವು. ಅಲ್ಲಿ ನಮಗೆ ಇನ್ನೋಂದು ಚಾರಣ ತಂಡ ಸಿಕ್ಕಿತು. ಅವರೊಟ್ಟಿಗೆ ಅವರಿಗೆ ಮಾರ್ಗದರ್ಶಕನಾಗಿ ಬಂದಿದ್ದ ಸ್ತಳೀಯನೊಬ್ಬ ಇದ್ದ. ನಾನು ಅವನೊಟ್ಟಿಗೆ ಮಾತಿಗೆ ಇಳಿದೆ.

ನಾನು- 'ನೀವು ಅರಿಶಿನಗುಂಡಿ ಫಾಲ್ಸ್ ಕಡೆಯಿಂದ ಬಂದ್ರ?'

ಸ್ತಳೀಯ - 'ಹೌದು, ಕೊಡಚಾದ್ರಿಯಿಂದ ಹೊರಟು ಅರಿಶಿನಗುಂಡಿ ಫಾಲ್ಸಿಗೆ ಬಂದು ಅಲ್ಲಿಂದ ಈಗ ಇಲ್ಲಿಗೆ ಬಂದಿದ್ದೀವಿ. ಇವರೆಲ್ಲ ನನಗೆ ಕೊಡಚಾದ್ರಿಯಲ್ಲಿ ಸಿಕ್ಕಿದ್ರು, ದಾರಿ ತೊರಿಸ್ಲಿಕ್ಕೆ ಇವರೊಟ್ಟಿಗೆ ಬಂದೆ, ಈಗ ತಿರುಗಿ ಹೊರಟೆ'

'ಅರಿಶಿನಗುಂಡಿಯಿಂದ ಸೀದ ನೆಡೆದು ಹೋದರೆ ಕೊಡಚಾದ್ರಿ ತುದಿಗೆ ಹೋಗಬಹುದ?'

'ಹೌದು, ಈ ಕಾಲು ದಾರಿ ಅರಿಶಿನಗುಂಡಿಗೆ ಹೊಗುತ್ತಲ್ಲ, ಇದೇ ಕಾಲುದಾರಿಲಿ ಮುಂದೆ ಹೋದರೆ ಸಂತೋಷ್ ಹೋಟೆಲ್ಲಿಗೆ ಹೋಗಿ ಅಲ್ಲಿಂದ ಬೆಟ್ಟದ ತುದಿಗೆ ಹೋಗ ಬಹುದು'

ನನಗೆ ಈಗ ಹಿಂದಿನ ದಿನ ನಾವು ಎಲ್ಲಿ ದಾರಿ ತಪ್ಪಿದ್ದೀವಿ ಎಂದು ಹೋಳೀತು. ಅರಿಶಿನಗುಂಡಿಗೆ ಹೋಗಿದ್ದ ನಾವು, ಅದೇ ಕಾಲುದಾರಿಯಲ್ಲಿ ಮುಂದೆ ಹೋಗದೆ ಮತ್ತೆ ಹಿಂದೆ ಬಂದು ಮುಖ್ಯ ರಸ್ತೆಯಂತಿದ್ದ ಈ ರಸ್ತೆಗೆ ಬಂದು ತಪ್ಪು ಮಾಡಿದ್ದೆವು.

ನೆನ್ನೆ ಹೀಗೀಗಾಯಿತು, ನಾವು ದಾರಿ ತಪ್ಪಿ ಎಲ್ಲೆಲ್ಲೋ ಅಲೆದು ಇವತ್ತು ವಾಪಸ್ ಬರ್ತಿದೀವಿ ಎಂದು ಅವನಿಗೆ ಹೇಳಿದೆ.

'ನೀವು ದಾರಿ ತಪ್ಪೀದ್ದೀರಿ' ಎಂದು ಅವನು ಶಾಂತವಾಗಿ ಹೇಳಿದ. ಅವನ ಮಾತಿಗಿಂತ ಅವನ ಭಂಗಿ ಮತ್ತು ಹೇಳಿದ ರೀತಿ ಬಹಳಷ್ಟು ವಿಷಯಗಳನ್ನು ತಿಳಿಸುವಂತಿತ್ತು. ಅವನು 'ದಡ್ಡ ಬಡ್ಡೀ ಮಕ್ಕಳ ದಾರಿ ಗೊತ್ತಿಲ್ಲದೇ ಎಲ್ಲೆಲ್ಲೋ ಅಲೆದಾಡಿದಿರಲ್ಲೋ' ಅಂದನೇನೋ ಎಂದು ನಮಗೆಲ್ಲ ಅನಿಸಿತ್ತು.

'ಹೋದ ತಿಂಗಳು ಹೀಗೆ ೩ ಜನ ದಾರಿ ತಪ್ಪಿ ಎಲ್ಲೆಲ್ಲೋ ತಿರುಗಿದ್ದಾರೆ. ೨ ದಿನ ಕಾಡೊಳೊಗೇ ಸಿಕ್ಕಿ ಹಾಕಿ ಕೊಂಡಿದ್ದಾರೆ. ಆಮೇಲೆ ಕಾಡಿನಲ್ಲಿ ಯಾರೋ ಫಾರೆಸ್ಟ್ ಗಾರ್ಡುಗಳಿಗೆ ಸಿಕ್ಕಿ, ಅವರ ಜೊತೆ ಬಂದಿದ್ದಾರೆ. ಅವರುಗಳು ಒಂದು ದಿನ ಪೂರ್ತಿ ಊಟನೇ ಮಾಡಿರಲಿಲ್ಲವಂತೆ' ಎಂದು ಹೇಳಿ ನಮ್ಮನ್ನು ಇನ್ನಷ್ಟು ಹೆದರಿಸಿದ.

ಈ ಮನುಷ್ಯ ಹೇಳುತ್ತಿದ್ದ ಮಾತಿನ ಸತ್ಯಾಸತ್ಯತೆಯನ್ನು ನಮಗೆ ಪರೀಕ್ಷಿಸಲು ಆಗದಿದ್ದರೂ ನಾವು ನೋಡಿದ್ದ ಕೆಲವು ದ್ರುಶ್ಯಗಳಿಗೆ ಇದನ್ನು ತಾಳೆ ಹಾಕಬಹುದಿತ್ತು. ನಾವು ತಲುಪಿದ್ದ ಕೊಡಚಾದ್ರಿಯ ಪಕ್ಕದ ಬೋಳು ನೆತ್ತಿಯಿಂದ ಸ್ವಲ್ಪ ಕೆಳಗೆ ಇಳಿದೊಡನೆ ಸೌದೆಗಳನ್ನು ಉರಿಸಿ ಬೆಂಕಿಮಾಡಿ ನಂತರ ಆರಿಸಿದ್ದ ಗುರುತಿತ್ತು. ಅದೇ ಇಳಿಜಾರಿನಲ್ಲಿ ಇದಕ್ಕೂ ಸ್ವಲ್ಪ ಮುಂಚೆ, ಒಂದು ಕಲ್ಲಿನ ಮೇಲೆ ಸಣ್ಣಗೆ ನೀರು ಜಿನುಗುತ್ತಿತ್ತು. ಸಣ್ಣಗೆ ಜಿನುಗುತ್ತಿದ್ದ ಈ ನೀರನ್ನು ಬಾಟಲಿಗೆ ತುಂಬಿಸಲು ಚಿಕ್ಕ ಮತ್ತು ಅಶೋಕ ತಮ್ಮೆಲ್ಲಾ ಇಂಜಿನಿಯರಿಂಗ್ ತಲೆ ಉಪಯೋಗಿಸಿ, ಒಂದು ದೊಡ್ಡ ಎಲೆಯ ತೊಟ್ಟಿನ ಭಾಗವನ್ನು ನೀರಿಗೆ ತಾಕಿಸಿ ಇನ್ನೊಂದು ತುದಿಯನ್ನು ಬಾಟಲಿಯ ಬಾಯಿಗೆ ಇಟ್ಟು ನೀರು ಹಿಡಿದಿದ್ದರು. ಈ ಜಾಗ ಬೆಟ್ಟದ ತುದಿಯಲ್ಲಿದ್ದು ಇಲ್ಲಿ ಹತ್ತಿರದಲ್ಲೆಲ್ಲೂ ನೀರು ಹರಿಯುತ್ತಿರಲಿಲ್ಲ. ನೀರಿನ ಒರತೆಯನ್ನು ತಲುಪಬೇಕಿದ್ದಲ್ಲಿ ಇಳಿಜಾರನ್ನು ಇಳಿದು ಕಣಿವೆಯನ್ನು ತಲುಪುಪುದು ಅನಿವಾರ್ಯವಾಗಿತ್ತು. ಆದ್ದರಿಂದ ಕಳೆದು ಹೋಗಿದ್ದ ಆ ಮೂರೂ ಜನ ಕಣಿವೆಗೆ ಇಳಿಯದೆ ಅಲ್ಲೇ ಬೆಟ್ಟದ ತುದಿಯಲ್ಲೆಲ್ಲೋ ತಿರುದಿದ್ದರೆ ಅವರಿಗೆ ನೀರು ಸಿಗುವುದು ಸಾಧ್ಯವಿರಲಿಲ್ಲ. ಅದ್ದರಿಂದ ಅವರುಗಳು ನೀರು ಸಿಗದೆ ಒದ್ದಾಡಿರುವ ಸಾಧ್ಯತೆಗಳಿದ್ದವು. ಇದೆಲ್ಲಕ್ಕಿಂತಲೂ ಹೆಚ್ಚಿನ ಆತಂಕಕಾರಿ ಸಂಗತಿಯೆಂದರೆ, ಸಣ್ಣಗೆ ನೀರು ಜಿನುಗುತ್ತಿದ್ದ ಈ ಜಾಗದ ಎದುರಿಗಿದ್ದ ಒಂದು ಸಣ್ಣ ಬಂಡೆಕಲ್ಲಿನ ಮೇಲೆ ಬಳಪದ ಕಲ್ಲಿನಿಂದ ಗೀಚಿ ಮೂಡಿಸಿದ್ದ ಅಕ್ಷರಗಳು "I want to come back alive" ಎಂದಿತ್ತು. ಇದನ್ನು ಯಾರು ಬರೆದಿರ ಬಹುದು ಎಂದು ಕೊಂಡಿದ್ದ ನಮಗೆ, ಈತ ಹೇಳಿದ ಕತೆ ಕೇಳಿದ ಮೇಲೆ ಆ ಮೂವರೇ ಏಕೆ ಇದನ್ನು ಬರೆದಿರಬಾರದು ಎನ್ನಿಸಿತು. ಸಧ್ಯ ನಮಗೆ ಅಂತ ಕಷ್ಟ ಆಗಲಿಲ್ಲವಲ್ಲ ಅಂದುಕೊಂಡ್ವಿ.

'ನಾನು ಈಗ ಅರಿಶಿನಗುಂಡಿ ಮೇಲೆ ಕೊಡಚಾದ್ರಿ ಗುಡ್ಡಕ್ಕೇ ಹೊರಟಿದಿನಿ, ಬನ್ನಿ ಬೇಕಾದ್ರೆ ನನ್ನ ಜೊತೆ' ಅಂತ ನಮಗೆ ಆಹ್ವಾನ ಕೊಟ್ಟ.

ನೆಡೆದೂ ನೆಡೆದೂ ನಿತ್ರಾಣರಾಗಿದ್ದರಿಂದಲೂ, ನಮ್ಮ ಉಳಿದ ಅರ್ಧ ತಂಡ ನಮಗಿಂತ ಮುಂದೆ ಹೋಗಿದ್ದರಿಂದಲೂ ಅವನ ಆಹ್ವಾನ ಸ್ವೀಕರಿಸದೆ, ಅವನಿಗೆ ಒಂದು ಪಾರ್ಲೇಜೀ ಕೊಟ್ಟು ಟಾಟಾ ಮಾಡಿದೆವು.

Sunday 2 September, 2007

ಕೊಡಚಾದ್ರಿ -4

ಸರತಿಯ ಬಟವಾಡೆಯಾದ ಮೇಲೆ ನಮ್ಮಲ್ಲಿ ಉಳಿದಿದ್ದ ಊಟ ಎಷ್ಟು ಎಂದು ಲೆಕ್ಕಹಾಕಲು ಕೂತೆವು. ಕೆಲವು ಕಾಯಿ ಹೋಳಿಗೆ ಮತ್ತು ಚಪಾತಿಗಳು, ೨ ಇಲ್ಲವೇ ೩ ಪ್ಯಾಕ್ ಬ್ರಿಟಾನಿಯ ಕೇಕು, ಕೆಲವು ಬ್ರಿಟಾನಿಯ ಬಿಸ್ಕೆಟ್ ಪ್ಯಾಕ್ ಮತ್ತು ಸ್ವಲ್ಪ ಚಾಕೋಲೇಟುಗಳು. ಇಷ್ಟಲ್ಲದೇ ಅಶೋಕನು ತಂದಿದ್ದ ಎರಡು ದೊಡ್ಡ ಫಾಮಿಲಿ ಪ್ಯಾಕ್ ಪಾರ್ಲೇಜೀ ಬಿಸ್ಕೇಟುಗಳು ಉಳಿದಿದ್ದವು. ಇವು ಬರಿಯ ದೊಡ್ಡವು ಎಂದರೆ ಇವು ಎಷ್ಟು ದೊಡ್ಡ ಪ್ಯಾಕುಗಳು ಎಂದು ಓದುತ್ತಿರುವ ನಿಮಗೆ ತಿಳಿಯದಿರಬಹುದು. ಒಂದಂದು ಪ್ಯಾಕಿನಲ್ಲೂ ೧೪ ಇಲ್ಲವೇ ೧೬ ಬಿಸ್ಕೆಟುಗಳನ್ನೊಳಗೊಂಡ ೧೨ ಸಣ್ಣ ಸಣ್ಣ ಪ್ಯಾಕುಗಳು. ಈ ಎರಡು ಫ್ಯಾಮಿಲಿ ಪ್ಯಾಕುಗಳನ್ನು ಕೂಡಿಸಿದರೆ ಒಂದು ಸಣ್ಣ ಪ್ರೈಮರಿ ಸ್ಕೂಲಿಗೆ ಹಂಚುವಷ್ಟು ಬಿಸ್ಕೆಟ್ಟುಗಳಾಗುತ್ತಿದ್ದವು. ಇವನ್ನು ಬೆಳಗ್ಗೆಯಿಂದ ಯಾರೂ ಮುಟ್ಟಿ ನೋಡಿರಲಿಲ್ಲ. ಈಗ ನಮ್ಮಲ್ಲಿ ಉಳಿದಿದ್ದ ಊಟವನ್ನು ನೋಡಿದರೆ ನಾಳಿನ ಒಂದು ದಿನ ಪೂರ್ತಿ ಮಾಡಲು ಅಶೋಕನ ಪಾರ್ಲೇಜೀಗಳೇ ಗತಿ ಎನ್ನುವಂತಾಗಿತ್ತು. ಆದಷ್ಟು ಪ್ಯಾಕೇಜ್ ಫುಡ್ಡನ್ನು ನಾಳೆಗೆ ಉಳಿಸಿ ಕೊಂಡು, ಚಪಾತಿ ಮತ್ತು ಹೋಳಿಗೆಯನ್ನು ತಿಂದು ಮುಗಿಸಲು ಕೂತೆವು. ಸಂಜೆ ಸಿಕ್ಕಿದ್ದ ತೊರೆಯ ಹತ್ತಿರ ನೀರನ್ನು ತುಂಬಿಸಿ ಕೊಂಡ ನಂತರ ನಮಗೆ ಮತ್ತೆ ನೀರು ಸಿಕ್ಕಿರಲಿಲ್ಲ. ನಮ್ಮ ಬಾಟಲಿಗಳಲ್ಲಿದ್ದ ನೀರಿನಲ್ಲಿ ರಾತ್ರಿ ಕಳೆಯಲು ತೊಂದರೆ ಇರಲಿಲ್ಲವಾದರೂ ಬೆಳಗ್ಗೆ ಬೇಗ ನೀರಿನ ಒರತೆ ಸಿಗದಿದ್ದರೆ ನಾವುಗಳು ತೊಂದರೆಗೊಳಗಾಗುವಂತಿತ್ತು.

ಊಟವಾದ ಮೇಲೆ ಮೊದಲಿನ ಸರತಿಯವರಿಗೆ ಬೆಂಕಿಯ ಜವಾಬ್ದಾರಿಯನ್ನು ಕೊಟ್ಟು ನಾನು ಮಲಗಲು ತಯಾರಾದೆ. ನನ್ನ ಬ್ಯಾಗನ್ನು ತಲೆದಿಂಬಾಗಿ ಇಟ್ಟು, ನೆಲಕ್ಕೆ ಊರಿಂದಲೇ ತೆಗೆದು ಕೊಂಡು ಹೋಗಿದ್ದ ನ್ಯೂಸ್ ಪೇಪರನ್ನು ಹಾಸಿ ಶಾಲನ್ನು ಹೊದ್ದು ಕಾಲು ಚಾಚಿದೆ. ಬೆಳಗಿನಿಂದ ಸತತವಾಗಿ ನೆಡೆದು ಸುಸ್ತಾಗಿದ್ದ ನನಗೆ ನಿದ್ರೆ ಆವರಿಸ ತೊಡಗಿತು. ಹರೀಶ, ಜಗದೀಶ ಮತ್ತು ಚಂದ್ರ ಮಹೇಶ ನಾಳೆಯ ಬಗ್ಗೆ ಪ್ಲಾನ್ ಮಾಡುತ್ತಿದ್ದರು. ಅವರ ಮಾತುಗಳನ್ನು ಕೇಳುತ್ತಲೇ ನಿದ್ರೆಗೆ ಶರಣಾದೆ.

ನಿದ್ದೆಯ ಮಧ್ಯದಲ್ಲಿ ಯಾರದೋ ಮಾತುಗಳನ್ನು ಕೇಳಿ ಎಚ್ಚರವಾಯಿತು. 'ನೋಡ್ರಪ್ಪ ಯೊಚನೆ ಮಾಡ್ರಿ...' ಎಂದ ಚಂದ್ರ, ಮೊದಲನೇ ಸರತಿಯನ್ನು ಮುಗಿಸಿ ಇನ್ನೂ ನಿದ್ದೆ ಬಾರದೆ ತಮ್ಮ ತಮ್ಮ ಬೆಡ್-ಶೀಟ್ ಒಳಗೆ ಕೂತು ಬೆಂಕಿ ಕಾಯಿಸಿಕೊಳ್ಳುತಿದ್ದವರಿಗೆ ಮತ್ತು ತನ್ನ ಸರತಿಯವರಿಗೆ ಚಂದ್ರ ಏನನ್ನೋ ಹೇಳುತ್ತಿದ್ದ. ಆಗ ಸಮಯ ಮಧ್ಯರಾತ್ರಿ ಸುಮಾರು ೧-೧.೧೫ರ ಮಧ್ಯೆ. ಎರಡರಿಂದ ನಾಲ್ಕು ಗಂಟೆಯವರೆಗೆ ನನ್ನ, ಮಿಲ್ಟ್ರಿಯ ಮತ್ತು ಷಿರೀಶನ ಕಾವಲು ಸರತಿ ಇತ್ತು. ಚಂದ್ರನ ಮಾತುಗಳನ್ನು ಕೇಳಿ ನನ್ನ ಸರತಿಯ ಹೊತ್ತಿಗಿಂತಲೂ ಮುಂಚೆಯೇ ನನಗೆ ಎಚ್ಚರವಾಗಿತ್ತು. ನಾನು ಸ್ಟೋರಿ ಏನು ಎಂದು ಕೇಳಿದಾಗ ಚಂದ್ರ 'ನೋಡ್ರಪ್ಪ ನಮ್ಮ ಹತ್ತಿರ ಇರೋ ಊಟ ಇನ್ನ ಒಂದು ದಿನಕ್ಕೆ ಮಾತ್ರ ಸಾಕಾಗುತ್ತೆ, ನಮ್ಮ ಹತ್ತಿರ ಜಾಸ್ತಿ ನೀರು ಸಹ ಇಲ್ಲ. ಈಗ ನಮ್ಮ ಎದುರಿಗೆ ಎರಡು ದಾರಿಗಳು ಇವೆ. ಒಂದು ಬೆಳಗ್ಗೆಯಿಂದ ನಾವು ನೆಡೆದು ಬಂದಿದ್ದು. ಇನ್ನೊಂದು ಇದುರಿಗೆ ಕಾಣಿಸ್ತಿರೋದು. ನಾವು ಬಂದಿದ್ದ ದಾರಿ ಹೇಗಿದೆ, ಎಲ್ಲೆಲ್ಲಿ ನೀರು ಸಿಕ್ಕುತ್ತೆ, ಆ ದಾರಿ ಪೂರ್ತಿ ಸವೆಸೋಕೆ ಎಷ್ಟು ಹೊತ್ತು ಬೇಕು ನಮಗೆ ಇದೆಲ್ಲಾ ಗೊತ್ತು. ಇನ್ನೊಂದು ಎದುರಿಗಿರೋದು, ನಾವು ಏನು ಸಂಜೆಯಿಂದ ಘಾಟಿರಸ್ತೆ ಕೂಡಿಕೊಳ್ಳುತ್ತೆ ಅಂದುಕೊಂಡು ನೆಡೆದುಕೊಂಡು ಬಂದಿರೋದು. ಇದರಲ್ಲಿ ಹೋದರೆ ನಮಗೆ ಬೆಳಿಗ್ಗೆ ನೀರು ಎಲ್ಲಿ ಸಿಕ್ಕುತ್ತೆ ಅಂತ ಗೊತ್ತಿಲ್ಲ, ಬೆಳಿಗ್ಗೆ ಬೇಗನೇ ನಮಗೆ ನೀರು ಸಿಕ್ಕಬೇಕು ನಮ್ಮ ಹತ್ತಿರ ಇರ್‍ಓ ನೀರು ಜಾಸ್ತಿಹೊತ್ತು ಬರೋದಿಲ್ಲ. ಆಮೇಲೆ ಈ ದಾರಿಯಲ್ಲಿ ಇನ್ನು ಏಷ್ಟು ಹೊತ್ತು ನೆಡೆದ ಮೇಲೆ ಘಾಟಿ ರಸ್ತೆ ಸಿಕ್ಕುತ್ತೆ ಅಂತಲೂ ಗ್ಯಾರಂಟಿ ಇಲ್ಲ. ಸಂಜೆ ಆದರೂ ನಾಮಗೆ ಈ ಕಾಡಿಂದ ಹೊರಗೆ ಹೋಗೊಕೆ ಒಂದು ದಾರಿ ಸಿಗದಿದ್ದರೆ ಊಟವೂ ಇಲ್ಲದೇ ಹೊರಗೆ ಹೋಗೋಕೆ ದಾರಿನೂ ಇಲ್ಲದೇ ಭಯಂಕರವಾಗಿ ಇಲ್ಲಿ ಸಿಕ್ಕಿಹಾಕಿಕೊಳ್ಳುತ್ತೀವಿ. ಅದುಕ್ಕೇ ಹೇಳ್ತಿದಿನಿ ಯೋಚನೆ ಮಾಡಿ ನೋಡ್ರಿ' ಎಂದ.

ಈ ಬಗ್ಗೆ ಏನೂ ಯೋಚನೆ ಮಾಡದೆ, ಚೆನ್ನಾಗಿ ಮಲಗೆದ್ದಿದ್ದ ನನಗೆ ತಕ್ಷಣಕ್ಕೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಮಿಲ್ಟ್ರಿ ಎದ್ದಿದ್ದಾನಾ ಇಲ್ಲಾ ಮಲಗಿದ್ದಾನ ಎಂದು ನೋಡಿದೆ. ಅವನು ಎದ್ದಿದೀನಿ ಮಗ, ಚಂದ್ರ ಹೇಳೋದುನ್ನ ಕೇಳಿಸಿಕೊಂಡೆ ಅಂದ. ಅಷ್ಟರಲ್ಲಿ ನನ್ನ ಸರದಿಯಲ್ಲಿ ಕಾವಲು ಕಾಯಬೇಕಿದ್ದ ಷಿರೀಷನೂ ಎದ್ದು, 'ಚಂದ್ರ ಹೇಳ್ತಿರೊದೇ ಸರಿ ಬೆಳಿಗ್ಗೆ ಎದ್ದು ನಾವು ಬಂದಿದ್ದ ದಾರಿಲೇ ನೆಡೆದು ಹೋಗೋಣ. ಎರಡು ಗಂಟೆ ನೆಡೆಯುವುದರಲ್ಲಿ ನೀರು ಸಿಕ್ಕುತ್ತೆ.' ಎಂದು ಹೇಳಿ ತೀರ್ಪು ಕೊಟ್ಟ. ಷಿರೀಷನ ಮಾತುಗಳನ್ನು ರಾಘವೇಂದ್ರ ಮತ್ತು ಜಯಂತ ಇಬ್ಬರೂ ಅನುಮೋದಿಸಿದರು. ಇವನ ಮಾತುಗಳಿಂದ ನಿದ್ದೆ ಇಳಿದು ಹೋಗಿ ಯೋಚಿಸುವಂತಾಯಿತು.

ಇಷ್ಟರಲ್ಲಾಗಲೇ ಕೃಷ್ಣಪಕ್ಷದ ಚಂದ್ರ ತಲೆಯಮೇಲೆ ಬಂದು ನಾವುಗಳು ತಂಗಿದ್ದ ಬಯಲನ್ನು ಸಣ್ಣಗೆ ಬೆಳಗುತ್ತಿದ್ದ. ನಾನು ಎದ್ದು ಕೂತು ಬೆಂಕಿಗೆ ಸೌದೆ ತಳ್ಳತೊಡಗಿದೆ. ಚಂದ್ರ, ಅಶೋಕ ಮತ್ತು ಸಂಗಮೇಶರನ್ನು ಮಲಗಲು ಹೇಳಿ ನಮ್ಮ ಸರದಿಗಿಂತ ಸ್ವಲ್ಪ ಮೊದಲೇ ನಾನು, ಮಿಲ್ಟ್ರಿ ಮತ್ತು ಷಿರೀಷ ಕಂಟ್ರೋಲ್ ತೆಗೆದು ಕೊಂಡೆವು. ನಾನು ಬೆಂಕಿಯ ಬಳಿಯಲ್ಲಿ ಕೂತು ಸುತ್ತಲು ಟಾರ್ಚ್ ಬೆಳಕನ್ನು ಬಿಡತೊಡಗಿದೆ. ಕ್ಷಣ ಕಳೆದಂತೆ ಚಂದ್ರ ಹೇಳುತ್ತಿರುವುದು ಸರಿ ಎನಿಸ ತೊಡಗಿತು. ನಾನು 'ಮಿಲ್ಟ್ರಿ ಏನಪ್ಪ ಮಾಡೋದು?' ಅಂದಾಗ, 'ನಾನು ಅದುನ್ನೇ ಯೋಚನೆ ಮಾಡ್ತಿದೀನಿ, ನೆನ್ನೆ ಒಂದು ದಿನ ಪೂರ್ತಿ ನೆಡೆದಿದ್ದೀವಿ, ಸುಮಾರು ೧೨ ಗಂಟೆಗಳಷ್ಟು ನೆಡೆದಿದ್ದೇವೆ. ಬೆಳಿಗ್ಗೆ ೬ ಗಂಟೆಗೆ ಎದ್ದು ನೆಡೆಯೋಕೆ ಶುರು ಮಾಡಿದರೆ ನಾಳೆ ಸಾಯಂಕಾಲ ೬ಕ್ಕೆ ನಾವು ಬಸ್ಸು ಇಳಿದಿದ್ದ ಟಾರ್ ರಸ್ತೆ ಸೆರುತ್ತೇವೆ. ಬೆಳಗ್ಗೆ ಸ್ವಲ್ಪ ಬೇಗ ಬೇಗ ಹೆಜ್ಜೆ ಹಾಕಿದರೆ ಬೇಗ ಟಾರ್ ರೋಡ್ ಸೇರಬಹುದು' ಎಂದ.

ಸರಿ, ಬೆಳಗೆದ್ದು ಈ ಪ್ಲಾನಿನಂತೆ ೬ ಗಂಟೆಗೆ ನೆಡೆಯೋಕೆ ಶುರು ಮಾಡೊಣ ಅಂದುಕೊಂಡೆವು. ನಾಲ್ಕು ಗಂಟೆಯಿಂದ ತಮ್ಮ ಸರತಿಯನ್ನು ಆರಂಭಿಸಬೇಕಿದ್ದ ಜಗದೀಶ, ಚಂದ್ರ ಮಹೇಶ ಮತ್ತು ಹರೀಶನಿಗೆ ಈ ವಿಷಯ ತಿಳಿಸಿ, ಬೆಳಗ್ಗೆ ೬ ಗಂಟೆಗೆ ಹೊರಡೋಣ, ನೀವು ೫-೩೦ಕ್ಕೆ ಎಲ್ಲರನ್ನೂ ಏಳಿಸಿ ಬಿಡಿ ಎಂದೆವು. ಆದರೆ ಈ ಮೂವರು ವಾಪಸ್ ಹೋಗುವ ನಮ್ಮ ಯೋಚನೆಗೆ ಒಪ್ಪುವ ಹಾಗೆ ಕಾಣಲಿಲ್ಲ. ಇಷ್ಟು ದೂರ ಬಂದಿದ್ದೇವೆ, ಇಲ್ಲೇ ಎಲ್ಲಾದರೂ ಹೊರ ಹೋಗಲು ದಾರಿ ಇದ್ದೇ ಇರುತ್ತೆ. ಇದನ್ನ ಬಿಟ್ಟು ಮತ್ತೆ ನೆಡೆದು ಬಂದಷ್ಟೇ ದೂರ ನೆಡೆದು ಹೋಗೋದು ಯಾಕೆ ಎಂದು ತಕರಾರು ತೆಗೆದರು. ವಾಪಸ್ ಹೋಗುವುದಕ್ಕೆ ಇವರ ಒಪ್ಪಿಗೆ ಇರಲಿಲ್ಲ. ೬ ಗಂಟೆಗೆ ಹೊರಡುವ ಬದಲು ಏಳಕ್ಕೆ ಹೊರಡೋಣ ಅಷ್ಟರಲ್ಲಿ ನಾವು ೩೦-೪೦ ನಿಮಿಷ ಮುಂದೆ ನೆಡೆದು ಹೋಗಿ ಎಲ್ಲಾದರು ಟಾರ್ ರಸ್ತೆ ಸಿಗುತ್ತದೆಯೇ ನೋಡುತ್ತೇವೆ, ಸಿಕ್ಕರೆ ಅಷ್ಟು ದೂರ ನೆಡೆಯುವುದು ತಪ್ಪುತ್ತದೆ ಎಂದರು. 'ದಾರಿ ಸಿಕ್ಕರೆ ಸರಿ, ಸಿಗದಿದ್ದರೆ? ನೀವು ಸುಮ್ಮನೆ ೧-೨ ಗಂಟೆ ವ್ಯರ್ಥ ಮಾಡಿದರೆ ಮತ್ತೆ ನಾವು ಸಂಜೆಯ ಕತ್ತಲೆಯಲ್ಲಿ ನೆಡೆಯಬೇಕಾಗುತ್ತದೆ.' ಎಂದು ಎಚ್ಚರಿಸಿದೆವು. ಆದರೂ ಹಟಕ್ಕೆ ಬಿದ್ದವರಂತೆ ನಾವು ಮುಂದೆ ಹೋಗಿ ನೋಡಿ ಬರುತ್ತೇವೆ ಎಂದರು. ಸರಿ ಎಂದು ನಾನು ಮಿಲ್ಟ್ರಿ ಷಿರೀಷ ಮಲಗಿ ಕೊಂಡೆವು.

ನಾನು ಬೆಳಗ್ಗೆ ಏಳುವಹೊತ್ತಿಗೆ ೬ ಗಂಟೆಯಾಗಿತ್ತು. ಎಲ್ಲರೂ ಎದ್ದು ಬೆಂಕಿ ಕಾಯಿಸುತ್ತಿದ್ದರು. ಚಂದ್ರ ಮಹೇಶ, ಜಗದೀಶ ಮತ್ತು ಹರೀಶ ಮೂವರೂ ಹಿಂತಿರುಗಿ ಹೋಗುವುದಕ್ಕೆ ಒಪ್ಪದೆ ಮುಂದೆ ಎಲ್ಲಾದರೂ ದಾರಿ ಸಿಗುತ್ತದೆಯೆ ಎಂದು ನೋಡಲು ಹೋಗಿದ್ದರು. ನಿತ್ಯ ಕರ್ಮಗಳನ್ನು ಪೊರೈಸಲು ಹತ್ತಿರದಲ್ಲಿ ಎಲ್ಲೂ ನೀರಿಲ್ಲ. ಬಾಟಲಿಯಲ್ಲಿ ಇರುವ ನೀರು ಕುಡಿಯಲು ಬೇಕು. ಆದ್ದರಿಂದ ಮುಂದೆ ನೀರು ಸಿಗುವ ತನಕ ನೆಡೆಯೋಣ ಎಂದು ಕೊಂಡೆವು. ಆದರೆ ರಾಘವೇಂದ್ರನ ಇರಾದೆ ಬೇರೆಯದೇ ಆಗಿತ್ತು. 'ಅಯ್ಯೋ ಮುಂದೆ ನೀರು ಸಿಗುವ ತನಕ ಕಾಯಲು ನನಗೆ ಆಗೊಲ್ಲ, ಬೆಳಿಗ್ಗೆ ಎದ್ದ ಕೂಡಲೇ ನಾನು ಹಗುರಾಗ ಬೇಕು ಎಂದು ಹೇಳಿ, ನ್ಯೂಸ್ ಪೇಪರ್ ಹಿಡಿದು ಸ್ವಲ್ಪ ಕೆಳಗೆ ಹೋದ. ಹೋಗಿ ೫ ನಿಮಿಷಕ್ಕೆ ಕೂಗಿ ಕೊಂಡು ವಾಪಸ್ ಬಂದ.

'ಅಜ್ಜಾ ಇಲ್ಲೇ ಕೆಳಗೆ ನೀರು ಹರೀತಿದೆ!' ಎಂದು ಕೂಗಿ ಕೊಂಡು ಬಂದ. ಒಬ್ಬೊಬ್ಬರೇ ಎದ್ದು ರಾಘವೇಂದ್ರ ನೀರಿದೆ ಎಂದು ಕೈ ತೋರಿಸಿದ ಕಡೆಗೆ ಹೊರಟೆವು. ನಾವು ಮಲಗಿದ್ದ ಜಾಗದಿಂದ ೨೦ ಮೀಟರ್ ದೂರದಲ್ಲಿ ಒಂದು ಸಣ್ಣ ತಗ್ಗು, ಆ ತಗ್ಗಿನ್ನಲ್ಲಿ ನೀರು ಹರಿಯಲೋ ಇಲ್ಲ ನಿಲ್ಲಲೋ ಎಂದು ಸಂಶಯಿಸುತ್ತ ಹರಿಯುವಂತಿತ್ತು. ಇಲ್ಲಿ ನೀರು ಎಷ್ಟು ಸಣ್ಣಗೆ ಹರಿಯುತ್ತಿತ್ತೆಂದರೆ ನೋಡಿದ ತಕ್ಷಣಕ್ಕೆ ಇದು ಹರಿಯುತ್ತಿದೆಯೇ ಇಲ್ಲ ನಿಂತಿದೆಯೇ ಎಂದು ಹೇಳುವುದು ಕಷ್ಟವಾಗುತಿತ್ತು. ನಿಧಾನವಾಗಿ ಹರಿಯುತ್ತಿದ್ದ ನೀರಾದರೂ ಅದನ್ನು ನೋಡಿ ಎಲ್ಲರೂ ಹರ್ಷಗೊಂಡರು. ನನಗೆ ಅಯ್ಯೋ ನಾವು ಇಡೀ ರಾತ್ರಿಯನ್ನು ಎಂತಹ ಜಾಗದಲ್ಲಿ ಕಳೆದಿದ್ದೇವೆ ಎಂದು ದಿಗಿಲಾಯ್ತು. ರಾತ್ರಿ ಈ ಜಾಗವನ್ನು ಆರಿಸಿಕೊಂಡಾಗ ಹತ್ತಿರದಲ್ಲಿ ಯಾವುದೇ ನೀರಿನ ಒರತೆಗಳಿಲ್ಲ, ಆದ್ದರಿಂದ ಕಾಡು ಪ್ರಾಣಿಗಳು ಈ ಕಡೆ ಬರುವುದು ಕಡಿಮೆಯೇ ಎಂದು ಕೊಂಡಿದ್ದೆವು. ಆದರೆ ನಮ್ಮ ಎಣಿಕೆ ತಪ್ಪಾಗುವಂತೆ ಹತ್ತಿರದಲೇ ನೀರು ಹರಿಯುತ್ತಿದೆ. ಸದ್ದಿಲದೆ ಹರಿಯುತ್ತಿದ್ದರಿಂದ ಇದರ ಇರುಹು ನಮಗೆ ತಿಳಿಯದಾಗಿತ್ತು. ನೀರಿನ ಹತ್ತಿರ ಹೋದಾಗ ಗೊರಸುಗಳು ಕೆಸರಿಲ್ಲಿ ಹೂತು ಅಚ್ಚುಗಳಾಗಿದ್ದು ಕಾಣಿಸಿತು. ಆ ಅಚ್ಚುಗಳಲ್ಲಿ ನೀರು ಆಗತಾನೆ ತುಂಬುತ್ತಿತ್ತು. ಇವು ದನ ಇಲ್ಲವೇ ಎಮ್ಮೆಗಳ ಕಾಲಿನ ಗೊರಸುಗಳೆಂದು ನೋಡಿದ ಕೂಡಲೇ ಹೇಳಬಹುದಿತ್ತು. 'ನೀರು ಹತ್ತಿರ ಇದ್ದರೂ ಸಧ್ಯ ಕಾಡಿನ ಯಾವುದೇ ಬೇಡದ ಅಥಿಥೇಯರ ಭೇಟಿಯಾಗಲಿಲ್ಲ ಎಂದೆ' ಎಲ್ಲಾ ತಲೆಯಾಡಿಸಿದರು. ಹರಿಯುತ್ತಿದ್ದ ಆ ತೊರೆಯಲ್ಲಿ ಯಾರು ಯಾರು ಏನೇನು ತೊಳಕೊಳ್ಳ ಬೇಕು ಎಂದುಕೊಂಡರೂ ಅದನ್ನೆಲ್ಲಾ ತೊಳಕೊಂಡು ಸಜ್ಜಾದರು. ಹಿಂದಿನ ದಿನ ಅರಿಷಿನ ಗುಂಡಿಯಲ್ಲಿ ಮಿಂದಾದಮೇಲೆ ಚಂದ್ರ, ಅಶೋಕ, ರಾಘವೇಂದ್ರ, ಜಯಂತ, ಹರೀಶ ಇವರೆಲ್ಲಾ ಸೌಂದರ್ಯ ಸಾಧನಗಳನ್ನ ಹಾಕಿಕೊಳ್ಳುತಿದ್ದರು. ಇದನ್ನ ನೋಡಿ 'ಏನ್ರೋ ಇಲ್ಲೇನು ಯಾವದಾದರು ಕಾಡುಪಾಪಕ್ಕೆ ಲೈನ್ ಹೋಡಿಯೋ ಪ್ಲಾನ್ ಹಾಕಿದಿರೇನ್ರೋ?' ಎಂದು ಕೇಳಿದ್ದನ್ನ ಜ್ನಾಪಿಸಿಕೊಂಡೆ. ಇವತ್ತು ಯಾರಿಗೂ ಬ್ರಿಲ್ ಕ್ರೀಮಾಗಲಿ ಅಥವ ಇನ್ನೊಂದಾಗಲಿ ಹಚ್ಚುವುದು ಬೇಡಾಗಿತ್ತು. ಅಲ್ಲಿ ಹರಿಯುತ್ತಿದ್ದ ನೀರುನ್ನು ಬಾಟಲಿಗಳಲ್ಲಿ ತುಂಬಿಸಿಕೊಂಡು ಹೋಗಿ ಬೆಂಕಿ ಆರಿಸತೊಡಗಿದೆವು. ಬೆಂಕಿ ಪೂರ್ತಿಯಾಗಿ ನಂದಿ ಬೂದಿಮಾತ್ರ ಉಳಿಯಿತು. ಆರಿದ್ದ ಕೆಂಡ ಮತ್ತು ಬೂದಿಯಮೇಲೆ ಮಣ್ಣು ಸುರಿದು ಅದು ಮತ್ತೆ ಹತ್ತಿಕೊಳ್ಳುವುದಿಲ್ಲವೆಂದು ಖಾತ್ರಿಮಾಡಿಕೊಂಡೆವು.

ಸಮಯ ಬೆಳಗಿನ ಏಳು ಗಂಟೆಯಾಗುತ್ತಿತ್ತು, ಇಲ್ಲಿ ಇದ್ದವರೆಲ್ಲಾ ಹೊರಡಲು ತಯಾರಾಗಿದ್ದರು ಆದರೆ ಮುಂದೆ ದಾರಿ ಹುಡುಕುತ್ತೇವೆಂದು ಹೋಗಿದ್ದ ಮೂವರು ಇನ್ನೂ ಹಿಂದಿರುಗಿರಲಿಲ್ಲ. ಅವರು ಹೋಗಿ ಆಗಲೇ ಒಂದು ಗಂಟೆಗೂ ಮೇಲಾಗಿತ್ತು. ೧೨ ಗಂಟೆಗಳಷ್ಟು ಕಾಲ ನೆಡೆಯಬೇಕೆಂದು ತಿಳಿದಿದ್ದರಿಂದ ತಡವಾಗಿ ಹೊರಟರೆ ಮತ್ತೆ ಸಂಜೆಕತ್ತಲಲ್ಲಿ ನೆಡೆಯ ಬೇಕಾಗುತ್ತಿತ್ತು. ತಿಳಿದೂ ತಿಳಿದೂ ತಡಮಾಡುತ್ತಿದ್ದ ಮೂವರ ಮೇಲೂ, ಕಾಯುತ್ತಾ ಕೂತಿದ್ದ ನಮಗೆಲ್ಲಾ ಅಸಮಾಧಾನವಾಗಿತ್ತು. ಜಗದೀಶ, ಹರೀಶ ಮತ್ತು ಚಂದ್ರ ಮಹೇಶರು ೭-೩೦ರ ಸುಮಾರಿಗೆ ಹಿಂತಿರುಗಿದರು. ಬಂದವರೇ -ಈ ರಸ್ತೆ ಮುಂದೆ ಹೋಗಿ ಎಲ್ಲೂ ಟಾರ್ ರಸ್ತೆ ಕೂಡಿಕೊಳ್ಳುವ ಸೂಚನೆಗಳು ನಮಗೆ ಸಿಗಲಿಲ್ಲ. ಒಂದು ಜಾಗದಲ್ಲಿ ಮೊಬೈಲ್ ಸಿಗ್ನಲ್ ಸಿಕ್ಕಿತ್ತು, ನಾವು ಅಲ್ಲಿಂದ ಭಟ್ಟರ ಮನೆಗೆ ಫೋನಾಯಿಸಿದ್ವಿ, ಭಟ್ಟರಿಗೆ ನಾವು ಇರ್‍ಓ ಜಾಗದ ಸುಳಿವು ಕೊಡೋಕೆ ಪ್ರಯತ್ನಿಸಿದ್ವಿ, ಆದರೆ ಅವರಿಗೆ ನಾವು ಎಲ್ಲಿದ್ದೇವೆ ಅಂತ ಹೇಳೋಕೆ ಆಗಲಿಲ್ಲ. ಅವರು 'ನೀವು ನೆನ್ನೆಯಿಂದ ಬಂದ ದಾರಿ ನಿಮಗೆ ಚೆನ್ನಾಗಿ ಗುರುತಿದಿಯಾ?' ಎಂದು ಕೇಳಿದರು, ನಾವು ಹೂಂಗುಟ್ಟಿದ್ವಿ. 'ಸರಿ ಹಾಗಿದ್ರೆ ನೀವುಗಳು ಅದೇ ದಾರಿಯಲ್ಲಿ ವಾಪಸ್ಸು ಬರೋದು ಬೆಸ್ಟ್, ಮತ್ತೆ ಅಲ್ಲಿ ಇಲ್ಲಿ ದಾರಿ ಹುಡುಕೋದಿಕ್ಕೆ ಹೋಗಬೇಡಿ ನೆನ್ನೆಯಿಂದ ಬಂದ ದಾರಿಯಲ್ಲೇ ಬಂದು ಕೊಲ್ಲೂರಿಗೆ ಹೋಗೋ ಟಾರ್ ರಸ್ತೆ ಸೇರಿಕೊಳ್ಳಿ' ಅಂತ ಹೇಳಿದ್ರು- ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು. ಸಧ್ಯ ಇವರು ವಾಪಸ್ ಬಂದರಲ್ಲ ಎಂದು ನಿಟ್ಟುಸಿರು ಬಿಟ್ಟು, ಇಲ್ಲೇ ಪಕ್ಕದಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ ಮುಗಿಸಿಕೊಳ್ಳಿ ಎಂದೆವು.

ಈ ಮೂವರು ಸಜ್ಜಾಗುವವರೆಗೆ ಮತ್ತೆ ಇಲ್ಲೇ ಕಾದು ಸಮಯ ಹಾಳು ಮಾಡುವುದು ಬೇಡ ಬಿಸಿಲು ಏರುವುದರೊಳಗೆ ಆದಷ್ಟು ದೂರ ನೆಡೆದು ಬಿಡೋಣ ಎಂದು ಕೊಂಡು, ಈ ಮೂವರಿಗೂ ಹಿಂದಿನಿಂದ ನಮ್ಮನ್ನು ಕೂಡಿಕೊಳ್ಳಲು ಹೇಳಿ ಉಳಿದವರು ನೆನ್ನೆ ಬಂದಿದ್ದ ದಾರಿಯನ್ನು ಹಿಡಿದು ವಾಪಸ್ ಹೊರಟೆವು.

Tuesday 21 August, 2007

ಕೊಡಚಾದ್ರಿ-3



ಮೂಕಾಂಬಿಕ ಅಭಯಾರಣ್ಯದ ಒಂದು ಚಿತ್ರ

ಎಲ್ಲಿದ್ದೇವೆ ಮತ್ತು ರಸ್ತೆಯಿಂದ ಎಷ್ಟು ದೂರದಲ್ಲಿದ್ದೇವೆ ಎನ್ನುವುದನ್ನು ತಿಳಿದುಕೊಳ್ಳಲು ಕಾತುರಾಗಿದ್ದೆವು. ರಾಘವೇಂದ್ರ ಸ್ಪಯ್ಸ್ ನಲ್ಲಿ ಕೆಲಸ ಮಾಡುವ ತನ್ನ ಸ್ನೇಹಿತನಿಂದ ನಾವು ಎಲ್ಲಿದ್ದೇವೆ ಎಂದು ತಿಳಿದುಕೊಳ್ಳಲು ಮಾಡಿದ ಪ್ರಯತ್ನ ವ್ಯರ್ಥವಾಗಿತ್ತು. ಈಗ ನಾವು ಎಲ್ಲಿದ್ದೇವೆ? ಎಷ್ಟು ದೂರ ನೆಡೆದರೆ ರಸ್ತೆ ಸಿಕ್ಕಬಹುದು ಎಂದು ಯೋಚಿಸತೊಡಗಿದೆವು. ಕತ್ತಲು ಆವರಿಸತೊಡಗಿತು. ಬ್ಯಾಗಿನಲ್ಲಿದ್ದ ಟಾರ್ಚ್, ಬ್ಯಾಟರಿಗಳನ್ನ ಕೈಗೆತ್ತಿಕೊಂಡೆವು, ನಮ್ಮ ಬಳಿ ಆರು ಇಲ್ಲವೇ ಏಳು ಟಾರ್ಚ್ ಇದ್ದವು. ಬ್ಯಾಗ್ ಪ್ಯಾಕ್ ಮಾಡಿಕೊಂಡು ಟಾರ್ಚ್ ಬೆಳಕಿನಲ್ಲಿ ಮುಂದೆ ನೆಡೆಯೋಣ ಎನ್ನುವುದು ನಮ್ಮ ನಿರ್ಧಾರವಾಗಿತ್ತು. ಇಲ್ಲಿಂದ ಮುಂದೆ ಎಲ್ಲರೂ ಒಂದೇ ಗುಂಪಿನಲ್ಲಿ ನೆಡೆಯ ಬೇಕು, ಯಾರೂ ಹಿಂದು ಮುಂದಾಗಬಾರದು ಎಂದು ನಿಶ್ಚಯಿಸಿದೆವು. ಹನ್ನೆರಡು ಜನರ ಗುಂಪಿನ ಮುಂದಾಳುಗಳಾಗಿ ಮಚ್ಚು ಹಿಡಿದಿದ್ದ ಹರೀಶ ಮತ್ತು ಟಾರ್ಚ್ ಹಿಡಿದಿದ್ದ ಮಿಲ್ಟ್ರಿ ಇದ್ದರು. ಅವರನ್ನು ಹಿಂಬಾಲಿಸಿಕೊಂಡು ಉಳಿದ ನಾವುಗಳೆಲ್ಲರೂ ನೆಡೆಯತೊಡಗಿದೆವು. ರಸ್ತೆ ಇಲ್ಲಿಯವರೆಗೆ ನಾವು ನೆಡೆದುಬಂದಿದ್ದಕ್ಕಿಂತ ಏನೂ ಬೇರೆಯಾಗಿರಲಿಲ್ಲ. ತರಗೆಲೆಗಳು, ಏರಿಳಿತ, ಅಕ್ಕ ಪಕ್ಕ ಎತ್ತರದ ಮರಗಳು. ಈ ರಸ್ತೆಯನ್ನು ಬೆಳಗಿನಿಂದಲೂ ನೋಡಿ ನಮಗೆಲ್ಲಾ ಇದು ಆಗಲೇ ಚಿರಪರಿಚಿತವಾದಂತನಿಸುತಿತ್ತು.

ಇಷ್ಟರಲ್ಲಾಗಲೇ ಕತ್ತಲು ಆವರಿಸಿತ್ತು. ಕೈಯಲ್ಲಿ ಬ್ಯಾಟರಿ ಹಿಡಿದು ಎದುರಿಗೆ ಅಂದಾಜಿನಲ್ಲಿ ಕಾಣುವ ದಾರಿಯಲ್ಲಿ ಒಂದರ ಹಿಂದೆ ಒಂದು ಹೋಗುವ ಕುರಿಗಳಂತೆ ಹೆಜ್ಜೆ ಹಾಕಿದೆವು. ಆಗಲೇ ಗಿರಿಶ, ಜಯಂತ ಮತ್ತು ಷಿರೀಶ ಈ ಮೂವರೂ ನಿತ್ರಾಣರಾಗಿದ್ದರು. ಎಲ್ಲರೂ ನೆಡೆಯುತ್ತಿದ್ದರಿಂದ ಅವರೂ ನಡೆಯ ತೊಡಗಿದರು. ಒಂದು ಕೈಯಲ್ಲಿ ಉದ್ದನೆಯ ದೊಣ್ಣೆಯನ್ನು ನೆಲಕ್ಕೆ ಊರಿಕೊಂಡು ಅರ್ಧ ಭಾರ ಅದರ ಮೇಲೆ ಹಾಕಿ ಇನ್ನೊಂದು ಕೈಯನ್ನು ಪಕ್ಕದಲ್ಲಿ ಬರುತ್ತಿರುವವನ ಹೆಗಲಿಗೆ ಹಾಕಿ ಅವನ ಮೇಲೆ ಉಳಿದರ್ಧ ಭಾರ ಹೇರಿ ಹೆಜ್ಜೆ ಇಡ ತೊಡಗಿದರು. ಆ ಕತ್ತಲು ದಾರಿಯಲ್ಲಿ ಅಲ್ಲೊಂದು ಇಲ್ಲೊಂದು ಬಿದ್ದಿದ್ದ ಮರಗಳನ್ನು ಹತ್ತಿ, ಹಾರಿದೆವು. ಮುಂದಿದ್ದ ಹರೀಶ ರಸ್ತೆಗೆ ಅಡ್ಡವಾಗಿದ್ದ ಸಣ್ಣ ಪುಟ್ಟ ಮುಳ್ಳು ಗಿಡಗಳನ್ನು ಸವರುತ್ತಾ ಮುಂದೆ ನೆಡೆದೆದಹಾಗೆ ಉಳಿದವರು ಅವನನ್ನು ಹಿಂಬಾಲಿಸಿದೆವು. ಕತ್ತಲಲ್ಲಿ ನೆಡೆಯುತ್ತಲೇ ಎಲ್ಲಿಯಾದರೂ ವಾಹನಗಳ ಸದ್ದು ಕೇಳುವುದೇ ಎಂದು ಕಿವಿ ಅಗಲಿಸಿಕೊಂಡೇ ನೆಡೆಯುತಿದ್ದೆವು.

ಒಂದು ಇಳಿಜಾರುನ್ನು ಇಳಿದಮೇಲೆ ಸ್ವಲ್ಪ ಸಮತಟ್ಟಾದ ಹಾದಿಗೆ ಬಿದ್ದೆವು. ಇಷ್ಟರಲ್ಲಾಗಲೇ ನಮ್ಮ ಕಷ್ಟಗಳನ್ನು ನೋಡಲಾಗದೆ ಸೂರ್ಯ ಕತ್ತಲೆ ಮನೆಗೆ ಹೋಗಿದ್ದ. ಹತ್ತು ಹೆಜ್ಜೆ ಇಡುವುದರಲ್ಲಿ ದಾರಿ ಹಸಿಯಾಯಿತು. ಕಾಲಿನ ಕೆಳಗೆ ಪಚ-ಪಚ ಎನ್ನುವಷ್ಟು ಕೆಸರು. ಮಳೆಗಾಲದಲ್ಲಿ ಹರಿದು ಈಗ ಬೇಸಿಗೆಯಲ್ಲಿ ಬತ್ತಿ ಹೋಗಿರುವಂತಹ ಒಂದು ಸಣ್ಣ ಝರಿಯಿದು, ನೀರು ಹರಿಯದಿದ್ದರೂ ನೆಲ ಇನ್ನೂ ಹಸಿಯಾಗೇ ಇತ್ತು. ಇಲ್ಲಿ ಸ್ವಲ್ಪ ಮುಳ್ಳಿನ ಗಿಡಗಳೂ ಹೆಚ್ಚಾದವು. ಒಂದು ದೊಡ್ಡ ಮರ ಅಡ್ಡ ಬಿದ್ದಿತ್ತು. ಮುಳ್ಳು ಸವರಿ ಮರದ ದಿಣ್ಣೆಯನ್ನು ಹಾರಿ ಮುಂದಡಿಯಿಟ್ಟೆವು. ಕತ್ತಲಾಗಿದ್ದರಿಂದಲೂ ಮತ್ತು ಬೆಳಗಿನಿಂದ ನೆಡೆದು ಸುಸ್ತಾಗಿದ್ದರಿಂದಲೂ ನಮ್ಮ ನೆಡಿಗೆಯ ವೇಗ ಕ್ಷೀಣಿಸಿತ್ತು. ಈ ಕೆಸರಿನ ಜಾಗದಿಂದ ೫ ನಿಮಿಷ ಮುಂದೆ ನೆಡೆದ ಮೇಲೆ ದಾರಿ ಸೀಳಾಗಿ ಎರಡಾದಂತಿತ್ತು. ಇಲ್ಲಿಂದ ಮುಂದೆ ಯಾವ ದಾರಿಯನ್ನು ಹಿಡಿಯುವುದು? ನಾವೊಂದು ನಾಲ್ಕು ಜನ ಈ ಬಗ್ಗೆ ಯೋಚಿಸುತ್ತಿರಬೇಕಾದರೆ ಇಲ್ಲಿಂದ ಮ್ಮುಂದೆ ಎಲ್ಲಿಗೂ ಹೋಗುವುದೂ ಬೇಡ ಇಲ್ಲೇ ರಾತ್ರಿ ಕಳೆದು ಬೆಳಗಾದ ಮೇಲೆ ಯಾವ ದಾರಿ ಹಿಡಿಯ ಬೇಕು ಎಂದು ನೋಡಿದರಾಯಿತು ಎಂದು ಷಿರೀಶ, ಗಿರೀಶ ಮತ್ತು ಜಯಂತರೆಂದರು. ಈ ವಾದವನ್ನು ನಾವುಗಳು ಒಪ್ಪುವ ಹಾಗೆ ಇರಲಿಲ್ಲ 'ಹತ್ತಿರದಲ್ಲೇ ಜಾಗ ತಣ್ಣಗಿದೆ. ಬೇಸಿಗೆಯಲ್ಲಿ ಹಾವುಗಳಿಗೆ ಇರಲು ಇದಕ್ಕಿಂದ ಬೆಸ್ಟ್ ಜಾಗ ಇನ್ನೊಂದಿರೊಲ್ಲ, ನಾವು ಇಲ್ಲಿ ಇರೋ ಹಾಗೆ ಇಲ್ಲ' ಎಂದ ಮಿಲ್ಟ್ರಿಯ ಮಾತನ್ನು ಎಲ್ಲರೂ ಒಪ್ಪಿದರು. ಸುಸ್ತಾಗಿದ್ದ ಎಲ್ಲರಿಗೂ ಜಯಂತ ಮಥುರಾ ಪೇಡ ತಿನ್ನಿಸಿದ. ಸಿಹಿ ತಿಂಡಿ ಬಾಯಿಗೆ ಬಿದ್ದಕೂಡಲೇ ಮೈಯಲ್ಲಿ ಗ್ಲೂಕೋಸ್ ಹರಿದು ಎಲ್ಲರೂ ಮತ್ತೆ ನೆಡೆಯಲು ಸಜ್ಜಾದೆವು.

ಮತ್ತದೇ ನಿಧಾನ ಗತಿಯಲ್ಲಿ ಕಾಲುಗಳನ್ನು ಎಳೆದು ಕೊಂಡು ನೆಡೆಯತೊಡಗಿದೆವು. ಈಗ ಸಮಯ ರಾತ್ರಿಯ ಎಂಟು ಗಂಟೆಯಾಗಿತ್ತು. ಇಲ್ಲಿಯವರೆಗೆ ನೆಡೆಯುತ್ತಿದ್ದ ದಾರಿಯಲ್ಲಿ ಶಾಮಿಯಾನ ಹಾಕಿದ ಹಾಗೆ ಮರಗಳು ತಲೆಯ ಮೇಲಿದ್ದವು. ನಾವು ಈಗ ತಲುಪಿದ್ದ ಜಾಗದಲ್ಲಿ ನಮ್ಮ ತಲೆಯ ಮೇಲೆ ಈ ಮರಗಳ ಶಾಮಿಯಾನ ಇರದೇ ಸ್ವಚ್ಚ ಆಕಾಶ ಕಾಣತೊಡಗಿತು. ಈ ಸ್ಥಳ ಒಂದು ಸಣ್ಣ ಬಯಲಿನಂತೆಯೇ ಇತ್ತು. ಒಂದು ಬದಿಗೆ ನಾವು ನೆಡೆದು ಬರುತ್ತಿದ್ದ ದಾರಿ. ಇಲ್ಲಿ ದಾರಿ ಮಟ್ಟಸವಾಗಿತ್ತು. ದಾರಿಯ ಇದುರಿಗೆ ಸಣ್ಣ ಸಣ್ಣ ಕುರುಚಲು ಗಿಡಗಳು. ಅದರ ಆಚೆಗೆ ಕೋಟೆಯಂತೆ ಕಾಣುತಿದ್ದ ಎತ್ತರದ ಮರಗಳು. ನಾವು ರಾತ್ರಿ ಕ್ಯಾಂಪ್ ಮಾಡಲು ಈ ಜಾಗ ಪ್ರಶಸ್ತವಾಗಿತ್ತು. ಸುಮಾರು ದೂರದವರೆಗೂ ನಮಗೆ ನೀರಿನ ತೊರೆ ಕಾಣಿಸಿರಲಿಲ್ಲ ಆದ್ದರಿಂದ ರಾತ್ರಿಯಲ್ಲಿ ಬೇಡದ ಕಾಡಿನ ಅಥಿತಿಗಳು ಈ ಕಡೆಗೆ ಬರುವು ಕಡಿಮೆಯೇ. ಸ್ವಲ್ಪ ಬಯಲಿದ್ದಿದ್ದರಿಂದ ಯಾವುದಾದರೂ ಪ್ರಾಣಿಗಳು ಬಂದರೆ ನಮಗೆ ಕಾಣುತ್ತವೆ ಎಂದು ಕೊಂಡೆವು. ತಲೆಯ ಮೇಲೆ ಮರಗಳಿರದ ಕಾರಣ ರಾತ್ರಿ ಸ್ವಲ್ಪ ಹೊತ್ತಾದ ಮೇಲೆ ಬೆಳದಿಂಗಳು ಆರಾಮವಾಗಿ ನೆಲದ ಮೇಲೆ ಬೀಳುವುದರಿಂದ ಒಳ್ಳೆಯ ಬೆಳಕೂ ಆಗುವುದು ಎಂದು ಎಣಿಸಿದೆವು.

ಇಷ್ಟರಲ್ಲಾಗಲೇ ಘಾಟಿ ರಸ್ತೆಯನ್ನು ಸೇರಿ ಅಲ್ಲಿಂದ ಲಾರಿಯನ್ನೋ ಬಸನ್ನೋ ಹಿಡಿಯುವ ಪ್ಲಾನನ್ನು ಕೈಬಿಟ್ಟಿದ್ದೆವು. ನಾವು ಈ ರಾತ್ರಿಯನ್ನು ಇಲ್ಲೇ ಕಾಡಲ್ಲೇ ಕಳೆಯಬೇಕು ಎನ್ನುವುದು ಖಾತ್ರಿಯಾಗಿತ್ತು. ಆದರೆ ಹರೀಶ, ಚಂದ್ರ ಮಹೇಶ ಹಾಗೂ ಜಗದೀಶ ಘಾಟಿ ರಸ್ತೆ ಸೇರುವ ಆಸೆಯನ್ನು ಇನ್ನೂ ಬಿಟ್ಟಿರಲಿಲ್ಲ. ಇವರ ಜೊತೆಗೆ ಮಥುರಾ ಪೇಡಾ ತಿಂದು ಫಾರ್ಮಿಗೆ ಬಂದಿದ್ದ ರಾಘವೇಂದ್ರನೂ ಸೇರಿಕೊಂಡ, 'ಇಲ್ಲೇನು ನಾವು ಎಂಟೂವರೇಗೆ ಈ-ಟಿ.ವಿ. ನ್ಯೂಸ್ ನೋಡ ಬೇಕಾಗಿಲ್ಲ, ಹತ್ತು ಗಂಟೆವರೆಗೆ ಎಷ್ಟು ದೂರ ಆಗುತ್ತೋ ಅಷ್ಟು ನೆಡೆಯೋಣ ಅಷ್ಟರಲ್ಲಿ ಎಲ್ಲಾದರೂ ನಾವು ಘಾಟಿ ರಸ್ತೆ ಸೇರ ಬಹುದು, ಸೇರದಿದ್ದರೆ ಹತ್ತು ಗಂಟೆಗೆ ನೆಡೆಯುವುದನ್ನ ನಿಲ್ಲಿಸಿ ಆ ಹೊತ್ತಿನಲ್ಲಿ ಎಲ್ಲಿ ಇರುತ್ತೇವೋ ಅಲ್ಲೇ ಠಿಕಾಣಿ ಹೂಡಿದರಾಯಿತು' ಎಂದ. ಸರಿಯಪ್ಪ ಇವರು ಹೇಳಿದಂಗೇ ಆಗಲಿ ಅಂದ್ವಿ. ಅಲ್ಲಿಂದ ೫-೧೦ ನಿಮಿಷ ನೆಡೆದಿಲ್ಲ ಅಷ್ಟರಲ್ಲಿ ಗಿರೀಶ ಕೂತೇ ಬಿಟ್ಟ. 'ಗುರುಗಳೇ ನನ್ನ ಕೈಯಲ್ಲಿ ಇನ್ನು ಮುಂದಕ್ಕೆ ನೆಡೆಯೋಕೆ ಆಗೊಲ್ಲ ನನ್ನನ್ನ ಮಾತ್ರ ಇಲ್ಲಿಂದ ಮುಂದಕ್ಕೆ ಕರೀ ಬೇಡಿ' ಎಂದ. ಒಂದು ದೊಡ್ಡ ಗುಂಪಿನಲ್ಲಿ ಒಬ್ಬ ಕೂತರೂ ಕತೆ ಮುಗಿದಂತೆ. ಅವನನ್ನು ಬಿಟ್ಟು ಯಾರೂ ಎಲ್ಲೂ ಹೋಗುವಂತಿರುವುದಿಲ್ಲ. ಗಿರೀಶ ಕೂತಿದ್ದರಿಂದ ಇನ್ನು ಮುಂದೆ ಹೋಗುವಂತೆಯೇ ಇರಲಿಲ್ಲ. ೫ ನಿಮಿಷಗಳ ಹಿಂದೆ ನಾವು ನೋಡಿದ್ದ ಬಯಲಿನಂತಹ ಜಾಗಕ್ಕೆ ವಾಪಸ್ಸು ಹೋಗಿ ಅಲ್ಲಿ ರಾತ್ರಿ ಕಳೆಯುವುದೆಂದು ನಿರ್ಧರಿಸಿದೆವು.

ಹಿಂತಿರುಗಿ ೫ ನಿಮಿಷಗಳಷ್ಟು ನೆಡೆದು ಈ-ಟೀ.ವಿ. ನ್ಯೂಸ್ ಶುರುವಾಗುವ ಹೊತ್ತಿಗೆ ಆ ಬಯಲನ್ನು ತಲುಪಿದೆವು. ಆ ಹೊತ್ತಿನಲ್ಲೂ 'ಲೋ ಮಕ್ಕಳ ಈ ರಾತ್ರಿ ಹುಶಾರಾಗಿ ಒಬ್ಬರಾದ ಮೇಲೆ ಒಬ್ಬರು ಕಾವಲು ಕಾಯಬೇಕು ಕಣ್ರೋ, ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ನಾವೆಲ್ಲಾ ನ್ಯೂಸ್ ನಲ್ಲಿ ಬಂದುಬಿಡ್ತೀವಿ' ಎಂದು ನಗೆ ಚಟಾಕಿ ಹಾರಿಸಿದರು. ನಮ್ಮ ಚಾರಣಗಳಲ್ಲಿ ಹುಡುಗರು ಹೊಡೆಯೋ ಡೈಲಾಗುಗಳು, ಹಾರಿಸೋ ಚಟಾಕಿಗಳನ್ನೆಲ್ಲಾ ಇಲ್ಲಿ ಬರೀತಾ ಹೋದರೆ ಇದು ಒಂದು ಕಾದಂಬರಿನೇ ಆಗಬಹುದು. ಅದನ್ನೆಲ್ಲಾ ಇನ್ನೋದುಸಾರಿಗೆ ಇಟ್ಟು ಕೊಳ್ಳೋಣ. ನಾವೆಲ್ಲರೂ ಆ ಸಣ್ಣ ಬಯಲಿನ ಒಂದು ಬದಿಯಲ್ಲಿ ಇದ್ದ ರಸ್ತೆಯ ಮೇಲೆ ಮಲಗುವುದೆಂದು ತೀರ್ಮಾನಿಸಿದೆವು. ಹತ್ತು ಹದಿನೈದು ನಿಮಿಷಗಳಲ್ಲಿ ಇಡೀ ರಾತ್ರಿ ಬೆಂಕಿ ಉರಿಸಲು ಬೇಕಾಗುವಷ್ಟು ಸೌದೆ ಗುಡ್ಡೆ ಹಾಕಿದೆವು. ಮಿಲ್ಟ್ರಿ ಮತ್ತು ಜಗದೀಶರು ಅವನ್ನು ಬೆಂಕಿಗೆ ಕೊಡಲು ಸುಲಭವಾಗುವಂತೆ ಸಣ್ಣಗೆ ಕಡಿದರು. ಇಡೀ ರಾತ್ರಿ ಉರಿದರೂ ಮುಗಿಯದಂತಹ ಒಂದು ದೊಡ್ಡ ದಿಮ್ಮಿಯನ್ನು ಮೂರುಜನ ಸೇರಿ ಎಳೆದು ಕೊಂಡು ಬಂದೆವು. ಇಷ್ಟರಲ್ಲಾಗಲೆ ಸಾಕಾಗುವಷ್ಟು ತರಗೆಲೆಗಳನ್ನು ಗುಡ್ಡೇ ಹಾಕಲಾಗಿತ್ತು. ಜಗದೀಶ ೨ ಕ್ಷಣದಲ್ಲಿ ಬೆಂಕಿಮಾಡಿದ. ಪೇಪರಿನ ಜೊತೆಗೆ ಸ್ವಲ್ಪ ತರಗೆಲೆಗಳನ್ನು ಹಾಕಿ ಮೊದಲು ಹಚ್ಚಿದ, ಆಮೇಲೆ ಸಣ್ಣಗೆ ಕಡಿದಿದ್ದ ಸೌದೆಯನ್ನು ಅದರ ಸುತ್ತಾ ಇಡುತ್ತಾ ಬಂದ. ಅದೆಲ್ಲಾ ಉರಿಯಲು ಶುರುವಾದ ಮೇಲೆ ಮರದ ದಿಮ್ಮಿಯ ಒಂದು ತುದಿಯನ್ನು ಉರಿಯಮೇಲೆ ಬರುವಂತೆ ಎಳೆದು ನಿಲ್ಲಿಸಿ, ಅದು ಬೀಳದಂತೆ ಒಂದು ದಪ್ಪ ಕಲ್ಲನ್ನು ದಿಮ್ಮಿಗಿ ಆನಿಸಿ ಅದು ನಿಲ್ಲುವಂತೆ ಮಾಡಿದ. ಹತ್ತೇ ನಿಮಿಷದಲ್ಲಿ ದಿಮ್ಮಿ ಹತ್ತಿ ಕೊಂಡಿತು.

ಇದ್ದ ಹನ್ನೆರಡು ಜನ ೩-೩ ಜನರ ನಾಲ್ಕು ತಂಡಗಳಾಗಬೇಕು, ಎರಡು ಗಂಟೆಯ ಒಂದು ಸರತಿಯಂತೆ ಒಂದು ತಂಡವಾದ ಮೇಲೆ ಒಂದು ತಂಡ ನಿದ್ದೆ ಮಾಡದೆ ಕಾಯಬೇಕು. ಆ ೨ ಗಂಟೆಗಳಲ್ಲಿ ಅವರು ಮಾಡಬೇಕಾಗಿದ್ದೇನೆಂದರೆ, ಬೆಂಕಿ ಕೆಡಬಾರದು ಮತ್ತು ತೀರಾ ಜೋರಾಗಿಯೂ ಉರಿಯ ಬಾರದು ಹಾಗೆ ನೋಡಿಕೊಳ್ಳಬೇಕು. ಕೈಯಲ್ಲಿ ಟಾರ್ಚ್ ಹಿಡಿದೇ ಕೂತಿರಬೇಕು. ಟಾರ್ಚ್ ಬೆಳಕನ್ನು ಸುತ್ತಲೂ ಬಿಟ್ಟು ಯಾವುದಾದರೂ ಹುಳ, ಹಾವುಗಳು ಕಾಣುತ್ತವೆಯೇ ನೋಡುವುದು. ರಸ್ತೆಯ ಆಚೆಗಿದ್ದ ಪೊದೆಗಳಕಡೆಗೆ ಟಾರ್ಚ್ ಬಿಟ್ಟು ಏನಾದರೂ ತೊಂದರೆಗಳು ಆ ಕಡೆಯಿಂದ ಬರುತ್ತಿವೆಯೇ ನೋಡುವುದು. ನಾವು ತಂಗಿದ್ದ ಜಾಗ ನೀರಿನ ತೊರೆಗಳಿಗೆ ದೂರ ಇದ್ದಿದ್ದರಿಂದ ಕಾಡು ಪ್ರಾಣಿಗಳು ಈ ಕಡೆಗೆ ಬರುವುದಿಲ್ಲ ಎನ್ನುವ ಒಂದು ರೀತಿಯ ಧೈರ್ಯ ನಮ್ಮಲ್ಲಿತ್ತು. ಹೀಗೆ ಎರಡು ಗಂಟೆಗಳ ಕಾಲ ಒಂದೊಂದು ತಂಡವೂ ಮಾತಾಡುತ್ತಾ ನಿದ್ದೆಗೆ ಶರಣಾಗದೆ ಉಳಿದವರ ಕ್ಷೇಮವನ್ನು ನೋಡಿಕೊಳ್ಳೂವುದು ಎಂದು ನಿರ್ಧರಿಸಿದೆವು. ಸುಸ್ತಾಗಿದ್ದ ಗಿರೀಶ ಮತ್ತು ಜಯಂತ ಇಬ್ಬರೂ ನಮಗೆ ರಾತ್ರಿ ತಡವಾದ ಸರತಿಯಲ್ಲಿ ನಿದ್ದೆಗೆಟ್ಟು ಇರಲಾಗುವುದಿಲ್ಲ ಎಂದು ಹೇಳಿದಾಗ ಅವರಿಬ್ಬರ ಜೊತೆಗೆ ರಾಘವೇಂದ್ರನನ್ನು ಸೇರಿಸಿ ಹತ್ತರಿಂದ ಹನ್ನೆರಡರವರೆಗೆ ಕಾಯುವ ಮೊದಲ ತಂಡವನ್ನಾಗಿ ಮಾಡಿದೆವು. ಇದು ಮೊದಲ ಸರದಿಯಗಿದ್ದರಿಂದ ಈ ಮೂವರಲ್ಲದೆ ನಿದ್ದೆ ಬರದ ಇನ್ನೂ ಯಾರಾದರು ಇದ್ದೇ ಇರುತ್ತೇವೆ, ಆದ್ದರಿಂದ ಮೊದಲ ಸರದಿಯೇ ಸುಲಭದ್ದೆಂದು ಇದನ್ನು ಇವರಿಗೆ ಕೊಟ್ಟೆವು. ಅಶೋಕ, ಸಂಗಮೇಶ ಮತ್ತು ಚಂದ್ರ ರಾತ್ರಿ ಹನ್ನೆರಡರಿಂದ ಎರಡರವರೆಗಿನ ಸರತಿಯನ್ನು ಆರಿಸಿಕೊಂಡರು. ನನಗೆ, ಮಿಲ್ಟ್ರಿಗೆ ಮತ್ತು ಷಿರೀಶನಿಗೆ ಎರಡರಿಂದ ನಾಲ್ಕರವರೆಗಿನ ಸರದಿಯಾದರೆ ಕೊನೆಯ ಸರದಿ ಅಂದರೆ ಬೆಳಗಿನಜಾವ ನಾಲ್ಕರಿಂದ ಆರರವರೆಗಿನ ಸರದಿಯಲ್ಲಿ ಹರೀಶ, ಚಂದ್ರ ಮಹೇಶ ಮತ್ತು ಜಗದೀಶರಿದ್ದರು.

ಸರತಿಯ ಬಟವಾಡೆ ಆಗುವುದರೊಳಗೆ ರಾತ್ರಿ ಒಂಬತ್ತೂವರೆಯ ಮೇಲಾಗಿತ್ತು. ಇನ್ನು ನಮ್ಮ ಹತ್ತಿರ ಎಷ್ಟು ನೀರು ಮತ್ತು ಊಟ ಉಳಿದಿದೆ ಎಂದು ನೋಡಿಕೊಳ್ಳತೊಡಗಿದೆವು.

Monday 13 August, 2007

ಕೊಡಚಾದ್ರಿ -2


ಚಿತ್ರ: ನಾವು ನಿಂತಿದ್ದ ಗುಡ್ಡದಿಂದ ಕಾಣುತ್ತಿದ್ದ ಕೊಡಚಾದ್ರಿಯ ಬೋಳು ನೆತ್ತಿ


ಅಲ್ಲೊಂದು ಇಲ್ಲೊಂದು ಮರಗಳಿಂದ ಬೋಳು ಬೋಳಾಗಿದ್ದ ಬೆಟ್ಟದ ತುದಿ ತಲುಪಿದಾಗ ನಮಗೆಲ್ಲರಿಗೂ ಅರಿವಾಗಿದ್ದೇನೆಂದರೆ... ನಾವು ನಿಂತಿದ್ದ ಬೆಟ್ಟ ಕೊಡಚಾದ್ರಿಯಲ್ಲ ಎನ್ನುವುದು. ಇದು ಕೊಡಚಾದ್ರಿಯ ಪಕ್ಕಕ್ಕಿದ್ದ ಇನ್ನೊಂದು ಬೆಟ್ಟವಾಗಿತ್ತು. ಹೀಗಾಗಬಹುದೆಂದು ನಾವುಗಳಾರೂ ಎಣಿಸಿರಲಿಲ್ಲ. ನಾವು ನಡೆಯುತ್ತಿದ್ದ ಏರುದಾರಿ ಇನ್ನೇನು ಸಂತೋಷ್ ಹೋಟೆಲ್ ಮುಟ್ಟಿ ಅಲ್ಲಿಂದ ನಮ್ಮನ್ನು ಕೊಡಚಾದ್ರಿಯ ಗ್ಯೆಸ್ಟ್ ಹೌಸ್ ತಲುಪಿಸುತ್ತದೆ ಎಂದುಕೊಂಡಿದ್ದ ನಮಗೆ, ನಾವು ಹಿಡಿದಿದ್ದ ದಾರಿ ಕೊಡಚಾದ್ರಿಯನ್ನು ತಲುಪಿಸದೆ ಪಕ್ಕದ ಇನ್ನೊಂದು ಗುಡ್ಡಕ್ಕೆ ಕರೆದೊಯ್ದಿದ್ದು ಅಚ್ಚರಿಯಾಗಿತ್ತು. ನಾವು ಹತ್ತಿ ಬಂದಿದ್ದ ಕಾಡು ದಾರಿಯಿಂದ ಎಡಕ್ಕೆ ನೊಡಿದರೆ ಕೊಡಚಾದ್ರಿಯ ತುದಿ ಕಾಣುತಿತ್ತು. ಬಲಕ್ಕೆ ನಾವು ತಲುಪಿದ್ದ ಗುಡ್ಡದ ತುದಿಯಲ್ಲಿದ್ದ ಸಣ್ಣ ಬಯಲು. ಮೊದಲೇ ಹೇಳಿದಂತೆ ಅಲೊಂದು ಇಲ್ಲೊಂದು ಗಿಡಗಳನ್ನು ಬಿಟ್ಟರೆ ಬೇರೇನು ಇರಲಿಲ್ಲ. ಬಯಲಿನಿಂದ ಮುಂದಕ್ಕೆ ಪ್ರಪಾತ! ಆ ಬಯಲಿನ ತುದಿಯಲ್ಲಿ ನಿಂತು ನೋಡಿದರೆ ಕೆಳಗೆ ಪ್ರಪಾತ, ದೂರದಲ್ಲೆಲ್ಲೋ ಕಾಣುವ ಭತ್ತದ ಗದ್ದೆಗಳು, ಅಲ್ಲೊಂದು ಇಲ್ಲೊಂದು ಬೆಂಕಿ ಪೊಟ್ಟಣದಂತೆ ಕಾಣುವ ಮನೆಗಳು.

ನಮ್ಮ ಎಡಕ್ಕಿದ್ದ ಕೊಡಚಾದ್ರಿ ಬೆಟ್ಟವನ್ನು ದಿಟ್ಟಿಸಿ ನೋಡಿದರೆ ಅದರ ತುದಿಯಲ್ಲಿ ಸಣ್ಣಗೆ ಜನಗಳು ಕಾಣುತ್ತಿದ್ದರು. ಕೊಡಚಾದ್ರಿಯ ತುದಿಯಲ್ಲಿ ಮರಗಿಡಗಳಿರದೆ ಬೋಳಾಗಿತ್ತು. ಆ ಬೋಳು ತುದಿಯಲ್ಲಿ ದನ ಇಲ್ಲವೇ ಕಾಡುಪ್ರಾಣಿಗಳು ನಡೆದಾಡಿ ಆಗಿರಬಹುದಂತಹ ಸಣ್ಣ ಸಣ್ಣ ದಾರಿಗಳು ಕಾಣುತ್ತಿದ್ದವು. ಬೆಟ್ಟ ಬಹಳವೇ ಕಡಿದಾಗಿದ್ದು ನಾವು ಅಲ್ಲಿ ಕಾಣುತಿದ್ದ ಸರ್ಪಹರಿದಂತಹ ದಾರಿಯಲ್ಲಿ ಹೋಗಿ ಕೊಡಾಚಾದ್ರಿಯ ತುದಿ ತಲುಪುವುದು ಅಸಾಧ್ಯ ಎನ್ನುವಷ್ಟೇ ಕಷ್ಟ ಎಂದು ನಿರ್ಧರಿಸಿದೆವು.

ಸರಿ ಮುಂದೇನು? ವಾಪಸ್ ಬಂದ ದಾರಿಯಲ್ಲೇ ನಡೆದು ಕೊಲ್ಲೂರಿಗೆ ಹೋಗುವ ಟಾರು ರಸ್ತೆ ಸೇರಲು ೮ ರಿಂದ ೧೦ ಗಂಟೆ ನೆಡೆಯ ಬೇಕು. ಇದುರಿಗೆ ಕಾಣುವ ಕೊಡಚಾದ್ರಿಯ ಬೋಳು ನೆತ್ತಿಯ ಮೇಲೆ ಕಾಣುತ್ತಿರುವ ಸರ್ಪ ಹಾದಿಯಲ್ಲಿ ನಡೆಯುವುದು ಅಸಾಧ್ಯವಾಗಿತ್ತು. ನಾವು ನೆಡೆದು ಬಂದ ದಾರಿ ಮುಂದೆ ಇಳಿಮುಖವಾಗಿ ಸಾಗಿ ಎಡಕ್ಕೆ ತಿರುಗಿತ್ತು. ಈ ದಾರಿಯನ್ನು ಹಿಡಿದು ಎಡಕ್ಕೆ ತಿರುಗಿ ಮುಂದೆ ನೆಡೆದರೆ ಕೊಡಚಾದ್ರಿಯನ್ನು ಇನ್ನೊಂದು ಬದಿಯಿಂದ ಹತ್ತಲು ಎಲ್ಲಾದರೂ ದಾರಿ ಇದ್ದೇ ಇರುತ್ತದೆ. ನಾವು ಆ ದಾರಿಯನ್ನು ಹಿಡಿದು ಮೇಲೆ ಹತ್ತಿದರೆ ಮತ್ತೆ ಕೊಡಚಾದ್ರಿಯ ಗೆಸ್ಟ್-ಹೌಸ್ ತಲುಪುತ್ತೇವೆ, ಅಲ್ಲಿ ಮಲಗಲು ಜಗುಲಿಯಾದರೂ ಸಿಕ್ಕೇ ಸಿಗುತ್ತದೆ ಎಂದು ನಿಶ್ಚಯಿಸಿ, ಮುಂದೆ ಸಾಗುತ್ತಿದ್ದ ಹಾದಿ ಹಿಡಿದು ಕೊಡಚಾದ್ರಿಯನ್ನು ಬಳಸಿಕೊಂಡು ಮೇಲೆ ಹತ್ತುವ ಭರವಸೆಯೊಂದಿಗೆ ಹೆಜ್ಜೆಯಿಟ್ಟೆವು.

ನಾವು ನಿಂತಿದ್ದ ಗುಡ್ಡದ ತುದಿ, ಅದರ ಪಕ್ಕದಲ್ಲಿ ಕಾಣುತ್ತಿದ್ದ ಕೊಡಚಾದ್ರಿ, ಕೆಳಗೆ ಕಾಣುತ್ತಿದ್ದ ಪ್ರಪಾತದಂತಹ ನೋಟದ ಫೋಟೋ ತೆಗೆದೆವು. ಸ್ವಲ್ಪ ಹೊತ್ತು ಕೂತು ವಿಶ್ರಮಿಸಿಕೊಂಡೆವು. ನಂತರ ನಿರ್ಧರಿಸಿದಂತೆ ಇದುರಿಗಿದ್ದ ಇಳಿಜಾರಿನ ದಾರಿಯಲ್ಲಿ ಮುಂದೆ ನಡೆದವು. ಈ ದಾರಿಯಲ್ಲಿ ಇಳಿಯುತ್ತಿದ್ದಂತೆ ಪಕ್ಕದಲ್ಲಿ ನಮ್ಮ ಎಡಕ್ಕೆ ಕೊಡಚಾದ್ರಿ ಕಾಣುತ್ತಿತ್ತು. ಅದರ ಮೇಲೆ ನೆಡೆದಾಡುತ್ತಿದ್ದ ಜನಗಳೂ ಸಹ ಸಣ್ಣಗೆ ಕಾಣುತ್ತಿದ್ದರು. ನಾವು ಹಿಡಿದಿದ್ದ ದಾರಿ ಕೆಲ ಹೊತ್ತಿನ ತನಕ ಕೊಡಚಾದ್ರಿಯ ಪಕ್ಕದಲ್ಲೇ ಸಾಗಿತ್ತು. ನಂತರ ಮತ್ತೆ ಕಾಡು ದಟ್ಟವಾಗುತ್ತಾ ಬಂತು, ತರಗೆಲೆಗಳು ಹೆಚ್ಚಾದವು, ದಾರಿ ತೀಕ್ಷ್ಣವಾಗಿ ಇಳಿಮುಖವಾಯಿತು. ಕಾಡು ದಟ್ಟವಾಗಿದ್ದರಿಂದ ಕೊಡಚಾದ್ರಿ ಬೆಟ್ಟ ಮೊದಲಿಂತೆ ಪೊರ್ತಿಯಾಗಿ ಕಾಣದೆ ನಾವು ಎತ್ತ ಸಾಗುತ್ತಿದ್ದೇವೆಂದು ನೋಡುವ ರೀತಿ ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕಿ ನೋಡುತ್ತಿತ್ತು. ಧಡ ಧಡನೆ ಕೆಳಗೆ ಇಳಿಯುತ್ತಿದ್ದಾಗ ಕೊಡಚಾದ್ರಿ ಮೆಲ್ಲನೆ ನಮ್ಮಿಂದ ದೂರವಾಗುತ್ತಿದೆ ಎನ್ನುವ ಅರಿವು ನಮಗೆ ಬರತೊಡಗಿತು.

ಮಾಮೂಲಿನಂತೆ ೧೨ ಜನರ ಗುಂಪು ೩ ತಂಡವಾಗಿತ್ತು. ಮಿಲ್ಟ್ರಿ, ಹರೀಶ, ಜಗದೀಶರು ಮುಂದಾದರೆ ಚಂದ್ರ, ಜಯಂತ ಹಾಗೂ ರಾಘವೇಂದ್ರ ಹಿಂದಾದರು. ಬೆಳಗಿಂದ ಬರೀ ಏರುದಾರಿಯಲ್ಲೇ ನೆಡೆದಿದ್ದ ನಾವುಗಳು ಈಗ ಇಳಿಜಾರಿನಲ್ಲಿ ಬಿರುಸಾಗಿ ಹೆಜ್ಜೆಗಳನ್ನು ಬೀಸುತ್ತ ಸಾಗಿದೆವು. ೧ ಗಂಟೆಗೂ ಸ್ವಲ್ಪ ಹೆಚ್ಚು-ಒಂದೂಕಾಲು ಗಂಟೆಗಳಷ್ಟು- ನೆಡೆದು ೨ ಗುಡ್ಡಗಳು ಸೇರುವ ೧ ಕಣಿವೆಯನ್ನು ತಲುಪಿದೆವು. ಈ ಕಣಿವೆಯಲ್ಲಿ ಒಂದು ಝರಿ ಹರಿಯುತ್ತಿತ್ತು. ಬೇಸಿಗೆಯ ಲೆಕ್ಕಕ್ಕೆ ಇದು ದೊಡ್ಡ ಝರಿಯೇ. ಈ ಝರಿಯಲ್ಲಿ ಅಲ್ಲೊಂದು ಇಲ್ಲೊಂದು ಇದ್ದ ಸಣ್ಣ ಗುಂಡಿಗಳಲ್ಲಿ ಸೊಂಟದ ಮೇಲಕ್ಕೆ ನೀರು ಹರಿಯುತ್ತಿತ್ತು. ಮುಂಚೆ ಬಂದವರು ಇಲ್ಲಿ ಕೂತು ಹಿಂದಿನವರಿಗೆ ಕಾಯಬೇಕೆಂದು ನಿರ್ಧರಿಸಿ ಅಲ್ಲೇ ಠಿಕಾಣಿ ಹೂಡಿದೆವು. ಹರಿಯುತ್ತಿದ್ದ ನೀರಿನಲ್ಲಿ ತೊಳೆದುಕೊಳ್ಳಬಹುದಾಗಿದ್ದನ್ನೆಲ್ಲಾ ತೊಳೆದು ಕೊಂಡೆವು. ದಿನವೆಲ್ಲಾ ಗ್ಲುಕೋಸ್ ಪುಡಿ, ಎಲೆಕ್ಟ್ರಾಲ್ ಇವುಗಳನ್ನ ನೀರಿನಲ್ಲಿ ಬೆರೆಸಿ ನೀರು ಕುಡಿಯುತ್ತಿದ್ದೆವು. ಅವುಯಾವುದೂ ಇಲ್ಲದೆಯೇ ಸಿಹಿಯಾಗಿ ಹರಿಯುತ್ತಿದ್ದ ಝರಿಯಲ್ಲಿ ಚೆನ್ನಾಗಿ ನೀರು ಕುಡಿದು ವಿಷ್ರಮಿಸಿಕೊಂಡೆವು. ನಾವು ಬಂದು ಹದಿನೈದು ನಿಮಿಷಗಳ ಮೇಲೆ ಚಂದ್ರ, ಗಿರೀಶ, ಜಯಂತ, ರಾಘವೇಂದ್ರರ ತೇರು ಬಂತು.

ಈಗ ಸಮಯ ಸಂಜೆಯ ೫-೩೦. ನಾವು ಕೊಡಚಾದ್ರಿಯನ್ನು ಏರುತ್ತಿಲ್ಲ ಇಳಿಯುತಿದ್ದೇವೆ. ನಾವು ಬಂದ ಇಳಿದಾರಿ, ಅಂದುಕೊಂಡ ಹಾಗೆ ಕೊಡಚಾದ್ರಿಯನ್ನು ಬಳಸಿ ಹತ್ತುತ್ತಿಲ್ಲ, ಹತ್ತುವುದೂ ಇಲ್ಲ ಎನ್ನುವುದು ನಮಗೆಲ್ಲರಿಗೂ ಮನವರಿಕೆಯಾಯಿತು. ಈಗ ಮುಂದೇನು? ಇನ್ನು ನಾವು ಕೊಡಚಾದ್ರಿಯನ್ನು ಏರುವುದಿಲ್ಲ ಎನ್ನುವುದು ಗ್ಯಾರಂಟಿ ಆಗಿತ್ತು. ಈಗಾಗಲೆ ಬೆಟ್ಟದ ತಳ ತಲುಪಿ ಝರಿಯಲ್ಲಿ ಕಾಲು ಇಳಿಸಿಕೊಂಡು ಕೂಳಿತಿದ್ದ ನಾವುಗಳು ಇಲ್ಲಿಯವರೆಗೆ ಸವೆಸಿ ಬಂದಿದ್ದ ಹಾದಿಯನ್ನು ನೆನೆಸಿ ಕೊಳ್ಳುತ್ತಿದ್ದೆವು. ಈಗ ನಮಗಿದ್ದ ಒಂದೇ ದಾರಿಯೆಂದರೆ ಮುಂದೆ ನಡೆಯುವುದು. ನಾವುಗಳು ಒಂದೂವರೆ ಗಂಟೆಗಳಷ್ಟು ಕಾಲ ಇಳಿದು ಬಂದಿದ್ದ ಇಳಿಜಾರನ್ನು ಹತ್ತಲು ಕನಿಷ್ಟ ಎಂದರೂ ೩ ಗಂಟೆಗಳು ಬೇಕು. ಮತ್ತೆ ಅಲ್ಲಿಂದ ಬೆಳಿಗ್ಗೆ ಬಸ್ಸಿನಿಂದ ಇಳಿದಿದ್ದ ಟಾರು ರಸ್ತೆ ತಲುಪಲು ೮ ಗಂಟೆ, ಒಟ್ಟಿನಲ್ಲಿ ೧೧ ಇಲ್ಲವೇ ೧೨ ಗಂಟೆಗಳು ಬೇಕು ನಮಗೆ ಟಾರ್ ರಸ್ತೆ ಸೇರಲು. ಮತ್ತೆ ಹನ್ನೆರಡು ಗಂಟೆ ಸತತವಾಗಿ ನೇಡೆಯಲು ಸಾಧ್ಯವೇ? ಈಗಾಗಲೇ ಎಲ್ಲರ ಕಾಲುಗಳೂ ರಾಗ ಹಾಡುತ್ತಿದ್ದರೂ ಯಾರೂ ತೋರಿಸಿಕೊಳ್ಳುತ್ತಿರಲಿಲ್ಲ ಮತ್ತು ರಾತ್ರಿಯಲ್ಲಿ ಕಾಡಿನಲ್ಲಿ ನೆಡೆಯುವುದು ಎಷ್ಟು ಸುರಕ್ಷಿತ? ಇದನ್ನೆಲ್ಲಾ ಯೋಚಿಸಿ ಮುಂದೆ ನೆಡೆದು ಹೋದರೆ ನಾವು ಎಲ್ಲಿಯಾದರೂ ಘಾಟಿ ರಸ್ತೆಯನ್ನು ತಲುಪುತ್ತೇವೆ ಅಲ್ಲಿಂದ ಯಾವುದಾದರು ಒಂದು ಬಸ್ಸೋ ಇಲ್ಲ ಲಾರಿಯನ್ನೋ ಹಿಡಿದು ಕೊಲ್ಲೂರು ತಲುಪಿದರಾಯಿತು ಎಂದುಕೊಂಡೆವು.

ನಮ್ಮ ಯೋಚನಾ ಲಹರಿಗೆ ಷಿರೀಶ ಹಾಗೂ ಗಿರೀಶನ ವಿರೋಧವಿತ್ತು 'ಮುಂದೆ ಎಷ್ಟು ದೂರ ನೆಡೆದ ಮೇಲೆ ಘಾಟಿರಸ್ತೆ ಸಿಗಬಹುದು ಎನ್ನುವುದು ನಮಗೆ ತಿಳಿದಿಲ್ಲ, ನಮಗೆ ಯಾವ ರಸ್ತೆಯೂ ಸಿಗದೆ ಹೀಗೆಯೇ ಕಾಡುದಾರಿಯಲ್ಲಿ ಅಲೆಯುವುದಿಲ್ಲ ಎಂದು ಖಚಿತವಾಗಿ ಹೇಳಲು ಸಾಧ್ಯವೇ? ಹೀಗಿರುವಾಗ ಸುಮ್ಮನ್ನೆ ಸನ್ನಿ ಹಿಡಿದವರಂತೆ ಎಷ್ಟು ದೂರ ಎಂದು ನೆಡೆಯುವುದು?' ಇದು ಇವರಿಬ್ಬರ ವಾದವಾಗಿತ್ತು. ಆದರೆ ಬಂದ ದಾರಿಯಲ್ಲಿ ವಾಪಸ್ ಹೋಗುವುದು ಸಧ್ಯಕ್ಕೆ ಆಗದ ಮಾತು ಎನ್ನುವುದು ಅವರಿಗೂ ತಿಳಿದಿದ್ದರಿಂದ ನಮ್ಮ ಮಾತಿನಂತೆ ಇನ್ನೂ ಮ್ಮುಂದೆ ನೆಡೆದು ಘಾಟಿ ರಸ್ತೆಯನ್ನು ಎಲ್ಲಾದರೂ ಕೂಡಿಕೊಳ್ಳುವುದೇ ಉತ್ತಮ ಎಂದು ಒಪ್ಪಿಕೊಂಡು ನಮ್ಮೊಟ್ಟಿಗೆ ಹೆಜ್ಜೆ ಹಾಕ ತೊಡಗಿದರು.

ಇಷ್ಟು ಹೊತ್ತಿಗಾಗಲೆ ಸೂರ್ಯ ತಂಪಾಗಿದ್ದ, ಸ್ವಲ್ಪ ದಣಿವಾರಿಸಿಕೊಂಡು ಉಲ್ಲಸಿತರಾಗಿದ್ದರಿಂದಲೋ, ಇಲ್ಲ ಕತ್ತಲಾಗುವ ಮೊದಲು ಯಾವುದಾದರೊಂದು ದಾರಿ ಹುಡುಕಿ ಕೊಳ್ಳ ಬೇಕು ಎನ್ನುವ ಹುಮ್ಮಸ್ಸು... ಹುಮ್ಮಸ್ಸೇ ಇಲ್ಲ ಭಯವೇ? ಹುಮ್ಮಸ್ಸು ಇಲ್ಲ ಭಯ, ಯಾವುದೋ ಒಂದು ಒಟ್ಟಿನಲ್ಲಿ ಎಲ್ಲರೂ ಇನ್ನೂ ವೇಗವಾಗಿ ನೆಡೆಯಲಾರಂಭಿಸಿದೆವು. ಎಲ್ಲೂ ನಿಲ್ಲದೇ ಸತತವಾಗಿ ನೆಡೆಯುತ್ತಿದ್ದೆವು. ಇಷ್ಟು ಹೊತ್ತಿಗಾಗಲೆ, ಕಾಡಿನ ಸವಿ, ಫೋಟೋಗಳು ಇವೆಲ್ಲವನ್ನೂ ಕಟ್ಟಿಟ್ಟಾಗಿತ್ತು. ನೆಡೆಯುವುದು, ನೆಡೆದು ರಸ್ತೆ ಸೇರುವುದು ಇದಿಷ್ಟೇ ಈಗ ಮನಸಿನಲ್ಲಿದ್ದದ್ದು. ಸಣ್ಣದಾಗಿ ಏರು ಇಳಿತಗಳಿಂದ ಕೂಡಿದ ದಾರಿಯಲ್ಲೀಗ ಬಿರುಬಿರನೆ ನೆಡೆಯತೊಡಗಿದೆವು. ಸುಮಾರು ಅರ್ಧ ಗಂಟೆಗಳ ಕಾಲ ನೆಡೆದ ಮೇಲೆ ಮತ್ತೊಂದು ಝರಿ ಇದುರಾಯಿತು. ಇದೂ ಕೂಡ ಹಿಂದೆ ನೋಡಿದ ಝರಿಯಷ್ಟೇ ದೊಡ್ಡದಾಗಿದ್ದಿತು. ಈ ಬಾರಿ ಝರಿಯಲ್ಲಿ ಹೆಚ್ಚು ಸಮಯ ಕಳೆಯಲಿಲ್ಲ. ಅರ್ಧ ಗಂಟೆಯ ಹಿಂದಷ್ಟೇ ನಮ್ಮ ಬಾಟಲಿಗಳಿಗೆ ನೀರು ತುಂಬಿಸಿಕೊಂಡು ನಮ್ಮ ಹೊಟ್ಟೆಗಳಿಗೂ ತುಂಬಿಸಿಕೊಂಡಿದ್ದರಿಂದ ಬಾಟಲಿಗಳು ಇನ್ನೂ ಭರ್ತಿಯಾಗೆ ಇದ್ದವು. ಎಲ್ಲರೂ ತಮಗೆ ಸಾಕೆನಿಸುವಷ್ಟು ನೀರು ಕುಡಿದು ಮುಂದೆ ಹೊರೆಟೆವು.

ಇದೇ ವೇಗದಲ್ಲಿ ಹೆಜ್ಜೆ ಬೀಸುತ್ತ ನಡೆಯುತ್ತಿದ್ದೆವು. ಸಮಯ ಸಾಯಂಕಾಲದ ಏಳನ್ನು ಸಮೀಪಿಸುತ್ತಿತ್ತು, ಸೂರ್ಯನ ಕಿರಣಗಳು ನಮ್ಮ ಮೇಲೆ ಬೀಳುವುದನ್ನು ಆಗಲೇ ನಿಲ್ಲಿಸಿದ್ದರೂ ಇನ್ನೂ ಕಣ್ಣು ಕಾಣದಷ್ಟೇನು ಕತ್ತಲಾಗಿರಲಿಲ್ಲ. ಝರಿಯಿಂದ ಈಗಾಗಲೆ ಸಾಕಷ್ಟು ದೂರ ನಡೆದು ಬಂದಿದ್ದೆವು. ನಾವು ಈಗ ನಿಂತಿದ್ದ ಜಾಗ ಒಂದು ಎತ್ತರದ ಪ್ರದೇಷವಾಗಿತ್ತು. ಎಲ್ಲರೂ ತಮ್ಮ ಬ್ಯಾಗುಗಳನ್ನು ಕೆಳಗಿಟ್ಟು ನೆಲದ ಮೇಲೆ ಕೂತೆವು. ಎಲ್ಲರೂ ತಮ್ಮ ತಮ್ಮ ಫೋನುಗಳನ್ನು ತೆಗೆದು ಎಲ್ಲಿಯಾದರೂ ಸಿಗ್ನಲ್ ಸಿಗಬಹುದೇ ಎಂದು ಪರೀಕ್ಷಿಸಿ ನೋಡಿದರು. ಬಿ.ಎಸ್.ಎನ್.ಎಲ್. ಸ್ಪಯ್ಸ್, ಏರ್-ಟೆಲ್ ಎಲ್ಲಾ ಬಗೆಯ ಫೋನುಗಳು ನಮ್ಮ ಬಳಿ ಇದ್ದವು. ಇದರಲ್ಲಿ ಸ್ಪಯ್ಸ್ ಮತ್ತು ಬಿ.ಎಸ್.ಎನ್.ಎಲ್ ಸಿಗ್ನಲ್ಲುಗಳು ಸ್ವಲ್ಪ ಮಟ್ಟಿಗೆ ದೊರಕಿದವು. ಇದರಿಂದ ಉಲ್ಲಸಿತನಾದ ರಾಘವೇಂದ್ರ ಸ್ಪಯ್ಸ್ ಕಂಪನಿಯಲ್ಲಿ ಇಂಜಿನಿಯರನಾಗಿ ಕೆಲಸಮಾಡುವ ತನ್ನ ಇನ್ನೊಬ್ಬ ಮಿತ್ರನಿಗೆ ಫೋನಾಯಿಸಿ ನಾವುಗಳು ಈಗ ಇರುವ ಸೈಟ್ ಯಾವುದು ಎಂದು ತಿಳಿದು ಕೊಳ್ಳಲು ಪ್ರಯತ್ನಿಸಿದ. ಅವನ ಸ್ನೇಹಿತ, ನಾವು ಬೆಳಗಿನಿಂದ ನೋಡಿದ ಕಾಡು ಹೇಗಿತ್ತು? ಯಾವುದಾದರೂ ಪ್ರಾಣಿ ಪಕ್ಷಿಗಳು ಕಂಡವೇ? ನೀವುಗಳೀಗ ಬೆಳಗಿನಿಂದ ಎಷ್ಟು ಕಿ.ಮೀ. ನೆಡೆದಿರಬಹುದು? ಹೀಗೆ ಆ ಸಮಯಕ್ಕೆ ನಮಗೆ ಕೆಲಸಕ್ಕೆ ಬಾರದ ವಿಷಯಗಳನ್ನೇ ಕೇಳ ತೊಡಗಿದ. ಇಷ್ಟರಲ್ಲಾಗಲೆ ಸಿಟ್ಟುಗೊಂಡಿದ್ದ ರಾಘವೇಂದ್ರ ಅವನನ್ನ ಒಮ್ಮೆ ಗದರಿಕೊಂಡ ಮೇಲೆ, 'ನಿಮಗೆ ಸಿಗುತ್ತಿರುವ ಸಿಗ್ನಲ್ ಮರವಂತೆಯದು, ಆದರೆ ನೀವಿರುವ ಜಾಗಕ್ಕೆ ಮರವಂತೆ ಹತ್ತಿರದಲ್ಲೇನೂ ಇಲ್ಲ. ಎತ್ತರವಾಗಿರುವಂತಹ ಗುಡ್ಡಗಳಲ್ಲಿ ಹೀಗಾಗುತ್ತೆ, ನಮಗೆ ಹತ್ತಿರ ಇಲ್ಲದಿರೋ ಊರುಗಳ ಸಿಗ್ನಲ್ಲುಗಳೆಲ್ಲಾ ಸಿಕ್ಕುತ್ತವೇ ಎಂದ'. ಅವನ ಸಹಾಯಕ್ಕೆ ಥ್ಯಾಂಕ್ಸ್ ಹೇಳಿದ ರಾಘವೇಂದ್ರ ಮಾತು ಕತೆ ಮುಗಿಸಿದ.

ಈಗ ನಾವು ಎಲ್ಲಿದ್ದೇವೆ? ಎಷ್ಟು ದೂರ ನೆಡೆದರೆ ರಸ್ತೆ ಸಿಕ್ಕಬಹುದು ಎಂದು ಯೋಚಿಸತೊಡಗಿದೆವು. ಕತ್ತಲು ಆವರಿಸತೊಡಗಿತು. ಬ್ಯಾಗಿನಲ್ಲಿದ್ದ ಟಾರ್ಚ್, ಬ್ಯಾಟರಿಗಳನ್ನ ಕೈಗೆತ್ತಿಕೊಂಡೆವು. ಬ್ಯಾಗ್ ಪ್ಯಾಕ್ ಮಾಡಿಕೊಂಡು ಟಾರ್ಚ್ ಬೆಳಕಿನಲ್ಲಿ ಮುಂದೆ ನೆಡೆಯೋಣ ಎನ್ನುವುದು ನಮ್ಮ ನಿರ್ಧಾರವಾಗಿತ್ತು.

Thursday 9 August, 2007

ಕೊಡಚಾದ್ರಿ -1


'ನೋಡ್ರಪ್ಪ ಯೊಚನೆ ಮಾಡ್ರಿ...' ಎಂದ ಚಂದ್ರ, ಇನ್ನೂ ನಿದ್ದೆ ಬರದೆ ತಮ್ಮ ತಮ್ಮ ಬೆಡ್-ಶೀಟ್ ಒಳಗೆ ಕೂತು ಬೆಂಕಿ ಕಾಯಿಸಿಕೊಳ್ಳುತಿದ್ದವರ ತಲೆಗೆ ಹುಳ ಬಿಟ್ಟಿದ್ದ. ಚಂದ್ರ ಈ ಮಾತುಗಳನ್ನ ಹೇಳಿದ್ದು ಮಧ್ಯರಾತ್ರಿ ಸುಮಾರು ೧-೧.೧೫ರ ಮಧ್ಯೆ. ಎರಡರಿಂದ ನಾಲ್ಕು ಗಂಟೆಯವರೆಗೆ ನನ್ನ, ಮಿಲ್ಟ್ರಿಯ ಮತ್ತು ಷಿರೀಶನ ಕಾವಲು ಸರತಿ ಇತ್ತು. ಚಂದ್ರನ ಮಾತುಗಳನ್ನು ಕೇಳಿ ನನ್ನ ಸರತಿಯ ಹೊತ್ತಿಗಿಂತಲೂ ಮುಂಚೆ ಎಚ್ಚರ ವಾಗಿತ್ತು.



ಈ ವರ್ಷದ ಮಾರ್ಚಿ ತಿಂಗಳಿನಲ್ಲಿ ನಾವೆಲ್ಲ ಕೊಡಚಾದ್ರಿ ಗುಡ್ಡಕ್ಕೆ ಚಾರಣಕ್ಕೆ ಹೊಗಿದ್ವಿ. ಅರಿಷಿಣಗುಂಡಿ ಫಾಲ್ಸ್ ನೋಡಿಕೊಂಡು ಅಲ್ಲಿಂದ ಮುಂದೆ ಹೋದರೆ ಕೊಡಚಾದ್ರಿ ತುದಿ ತಲುಪುತ್ತೀವಿ ಅನ್ನೋದು ನಮಗಿದ್ದ ಮಾಹಿತಿ. ನಮ್ಮಲ್ಲಿದ್ದ ಮಾಹಿತಿಯೆಲ್ಲವೂ ಇಂಟರ್ನೆಟ್ನಲ್ಲಿ ಹುಡುಕಿ ಗೊರಿಕೊಂಡಿದ್ದಾಗಿತ್ತು, ನಮ್ಮ ಜೊತೆಗಿದ್ದ ಯಾರೊಬ್ಬರೂ ಈ ಮುಂಚೆ ಆ ದಾರಿ ಬಳಸಿ ಹೋಗಿ ಬಂದವರಿರಲಿಲ್ಲ. ಬೆಳಿಗ್ಗೆ ೫.೩೦ಕ್ಕೆ ಕೊಲ್ಲೂರಿಗಿಂತ ೧ ಕಿಲೋಮೀಟರ್ ದೂರದಲ್ಲಿ ನಮ್ಮನ್ನು ಇಳಿಸುವಾಗಲೂ ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಗಳಿಬ್ಬರೂ 'ಈ ದಾರಿಯಲ್ಲಿ ಕೊಡಚಾದ್ರಿಗೆ ಹೊದವರನ್ನ ನಾವು ನೋಡಿಲ್ಲ, ಬೇಕಾದ್ರೆ ಅರಿಷಿಣಗುಂಡಿ ಫಾಲ್ಸ್ ನೊಡಿಕೊಂಡು ಬನ್ನಿ' ಎಂದು ಎಚ್ಚರಿಸಿದರೂ ಅದು ನಮಗಲ್ಲ ಅನ್ನೋ ಹಾಗೆ ಅವರೊಟ್ಟಿಗೆ ಫೊಟೊ ತೆಗೆಸಿಕೊಂಡು ಅವರಿಗೆ ಟಾಟಾ ಮಾಡಿ ಬೀಳ್ಕೊಟ್ಟೆವು. ರಸ್ತೆ ಎಡಕ್ಕಿದ್ದ ಹಳೇ ಗೇಟಿನ ಮೇಲೆ ಕಮಾನಿನಾಕಾರದಲ್ಲಿದ್ದ ಬೋರ್ಡಿನಲ್ಲಿ ಮೂಕಾಂಬಿಕ ಅಭಯಾರಣ್ಯ ಎಂದು ಬರೆದಿದ್ದು, ಕೆಳಗೆ ಸಣ್ಣ ಅಕ್ಷರಗಳಲ್ಲಿ 'ಛಾರಣ ನಿಲ್ಲಿಸಲಾಗಿದೆ' ಎಂದು ಬರೆದಿತ್ತು. ಆ ಅಕ್ಷರಗಳು ಕಾಣುತಿದ್ದಂತೆಯೇ, ಮತ್ತೆ ಯಾರು ಬಂದು ನಮ್ಮನ್ನು ತಡೆಯುತ್ತಾರೋ ಅನ್ನೊ ಭಯದಲ್ಲಿ ಗೇಟು ದಾಟಿ ಒಳಗೆ ಓಡಿದೆವು.

ಅಲ್ಲಿಂದ ಸುಮಾರು ೫ ಕಿಲೋ ಮೀಟರ್ ನೆಡೆದ ಮೇಲೆ ಎಡಕ್ಕೆ ಒಂದು ಕಾಲ್ದಾರಿ ಹೊರಳಿತ್ತು. -ನಾನೇನು ಈ ಕಿಲೋ ಮೀಟರ್ ಲೆಕ್ಕವನ್ನ ಅಂದಾಜಿನಲ್ಲಿ ಹೇಳುತ್ತಿಲ್ಲ, ಕ.ಅ.ಇ ಅಲ್ಲಿ ಕಿಲೋ ಮೀಟರಿಗೊಂದರಂತೆ ಕಲ್ಲು ನೆಟ್ಟು ಅದರ ಮೇಲೆ ಮೈನ್ ರೋಡಿನಿಂದ ಆ ಕಲ್ಲಿನವರೆಗಿನ ದೂರ ಗುರುತು ಹಾಕ್ಕಿದ್ದಾರೆ-. ಆ ಕಾಲ್ದಾರಿಯಲ್ಲಿ ಸುಮಾರು ೨ ಕಿ.ಮೀ. ನಡೆದ ಮೇಲೆ ನಮಗೆ ಅರಿಷಿಣಗುಂಡಿ ಫಾಲ್ಸ್ ಕಂಡಿತು. ಈ ೨ ಕಿ.ಮೀ ಎಷ್ಟು ದುರ್ಗಮವಾಗಿದೆಯೆಂದರೆ ಮಳೆಗಾಲದಲ್ಲಿ ಈ ದಾರಿಯಲ್ಲಿ ಕಾಲಿಡುವುದುನ್ನು ನೆನೆಸಿ ಕೊಳ್ಳುವಂತೆಯೂ ಇಲ್ಲ. ಅರಿಷಿಣಗುಂಡಿ ಜಲಪಾತವನ್ನು ಸಮೀಪಿಸುತ್ತಿದ್ದಂತೆಯೆ ದೊಡ್ಡ ದೊಡ್ಡ ಬಂಡೆ ಕಲ್ಲುಗಳು ಇದಿರಾಗುತ್ತವೆ. ಬಹುಶಃ ಮಳೆಗಾಲದಲ್ಲಿ ಇಲ್ಲಿ ನೀರು ಹರಿಯುವ ರಭಸಕ್ಕೆ ಮಣ್ಣೆಲ್ಲಾ ಕೊಚ್ಚಿ ಬರೀ ಬಂಡೆ ಕಲ್ಲುಗಳು ಉಳಿದಿರಬಹುದು. ಒಂದೇ ಒಂದು ದೊಡ್ಡ ಬಂಡೆಯು '೧'ರ ಆಕಾರದಲ್ಲಿ ಇದ್ದು ಅದರ ಮಧ್ಯ ಭಾಗದಿಂದ ನೀರು ಧುಮುಕುತ್ತದೆ. ನೀರು ಒಂದೇ ನೆಗೆತದಲ್ಲಿ ಸುಮಾರು ೨೫ ಅಡಿಗಳಷ್ಟು ಧುಮುಕಿ ಅಲ್ಲಿಂದ ಕೆಳಗೆ ಮತ್ತೆ ೫ ಅಡಿಗಳಷ್ಟು ಧುಮುಕಿ ನಂತರ ಕೆಳಗಿನ ಹೊಂಡ ಸೇರಿ, ಹೊಂಡದ ಇನ್ನೊಂದು ತುದಿಯಿಂದ ಮುಂದಕ್ಕೆ ಹರಿಯುತ್ತದೆ.
ಮಾರ್ಚಿ ತಿಂಗಳು, ಇನ್ನೇನು ಬೇಸಿಗೆ ಶುರುವಾಗ ಬೇಕು ಅಂತಹ ಸಮಯದಲ್ಲೂ ನೀರು ತಣ್ಣಗೆ ಕೊರೆಯುತಿತ್ತು. ಗೆಳೆಯರೆಲ್ಲರೂ ಸಾಹಸಪಟ್ಟು ಬಂಡೆಗಳಮೇಲೆ ಕೋತಿಗಳಂತೆ ಚಲಿಸಿ ಜಲಪಾತದ ಕೆಳಗೆ ತಲುಪಿ, ಎಮ್ಮೆ ಕೆಸರಿನಲ್ಲಿ ಬಿದ್ದು ಹೊರಳಾಡುವಂತೆ ಹೊರಳಾಡಿ ಮಿಂದರು. ಸ್ನಾನದ ಬಳಿಕ ಬೆಂಗಳೂರಿನಿಂದಲೇ ಕೊಂಡೊಯ್ದಿದ್ದ ಚಪಾತಿ ಚಟ್ಣಿಪುಡಿ ಹೋಳಿಗೆ ತಿಂದು ಕೊಡಚಾದ್ರಿ ಶಿಖರದ ತುದಿ ತಲುಪಲು ಸಜ್ಜಾದೆವು. ಪುನಃ ೨ ಕಿ.ಮೀ ಕಾಲುದಾರಿ ಕ್ರಮಿಸಿ ಮುಖ್ಯರಸ್ತೆಯಂತಿದ್ದ ಕಾಡುರಸ್ತೆಯನ್ನು ಕೂಡಿಕೊಂಡೆವು. ಆಗ ಸಮಯ ಬೆಳಗಿನ ೧೧ ಗಂಟೆ. ಇಲ್ಲಿಂದ ಬಲಕ್ಕೆ ತಿರುಗಿ ೫ ಕಿ.ಮೀ ನೆಡೆದರೆ ಬೆಳಿಗ್ಗೆ ನಾವು ಬಸ್ಸಿನಿಂದ ಇಳಿದ ಟಾರುರಸ್ತೆ.

ಬಂದ ದಾರಿಯೆಡೆಗೆ ಒಮ್ಮೆ ಹಿಂತಿರುಗಿ ನೋಡಿ ಮುಂದೆ ಹೊರೆಟೆವು. ಇಲ್ಲಿಯವರೆಗೆ ಉಬ್ಬು ತಗ್ಗುಗಳ ದಾರಿ ಇದ್ದರೆ ಮುಂದೆ ಉಬ್ಬು ದಾರಿ ಹೆಚ್ಚಾಗಿ ತಗ್ಗು ದಾರಿ ಕಡಿಮೆಯಾಗುತ್ತಾ ಬಂತು. ಸತತ ೧ ಗಂಟೆ ನಡೆದು ನಾವು ಮೊಳಕಾಲಿನುದ್ದ ನೀರು ಹರಿಯುತ್ತಿದ್ದ ೧ ಝರಿಯ ಬಳಿ ಬಂದೆವು. ಇಷ್ಟು ಹೊತ್ತಿಗಾಗಲೆ ೧೨ ಜನರ ನಮ್ಮ ತಂಡ ಎಂದಿನಂತೆ ೨ ತಂಡಗಳಾಗಿತ್ತು. ಬೇಗ ಬೇಗ ನಡೆಯುವ ಜಗದೀಶ, ಹರೀಶ, ಮಿಲ್ಟ್ರಿ ಇವರುಗಳನ್ನೊಳಗೊಂಡ ತಂಡ ಮುಂಚೆಯೇ ಬಂದು ಈ ಸ್ಥಳವನ್ನು ತಲುಪಿದ್ದರೆ, ಹೆಜ್ಜೆ ಎಣಿಸದಿದ್ದರೂ ಸ್ವಲ್ಪ ನಿಧಾನ ಎನ್ನುವಂತೆ ನಡೆಯುವ ಜಯಂತ, ಚಂದ್ರ ಹಾಗೂ ರಾಘವೇಂದ್ರನನ್ನು ಒಳಗೊಂಡ ತಂಡ ನಂತರ ಈ ಜಾಗವನ್ನು ಬಂದು ತಲುಪಿತು. ಈ ಮುಂಚೆಯೇ ಬಂದು ತಲುಪಿದ್ದ ಜಗದೀಶ-ಮಿಲ್ಟ್ರಿಯವರ ತಂಡ ನಾವು ಮುಂದೆ ಹೊರಡುತ್ತೇವೆ, ಮುಂದೆ ಸಿಗುವ ಸಂತೋಷ್ ಹೋಟೆಲ್ಲಿನ್ನಲ್ಲಿ ಎಲ್ಲರಿಗೂ ರೈಸ್ ಬಾತ್ ಮಾಡಿಸಿಟ್ಟಿರುತ್ತೇವೆ ಎಂದು ಹೇಳಿ ಪ್ರಯಾಣ ಮುಂದುವರೆಸಿತು. ನಾವುಗಳು ಈ ಝರಿ ಇರುವ ಸ್ಥಳವನ್ನು ತಲುಪುವ ವೇಳೆಗಾಗಲೆ ಕಾಡು ದಟ್ಟವಾಗಿಹೋಗಿತ್ತು. ನಾವು ಬಂದ ಹಾದಿಯಲ್ಲಿ ನಮ್ಮ ಕಾಲುಗಳು ನೆಲವನ್ನು ತಾಕದಂತೆ ಐದರಿಂದ ಹತ್ತು ಇಂಚು ದಪ್ಪಗೆ ಒಣಗಿದ ಏಲೆಗಳು ಬಿದ್ದಿದ್ದವು. ಇಲ್ಲಿ ಸೂರ್ಯ ಕಷ್ಟಪಟ್ಟು ನೆಲವನ್ನು ಚುಂಬಿಸುತ್ತಿದ್ದ. ಹರಿಯುತ್ತಿದ್ದ ಝರಿಯನ್ನು ನೋಡಿದರೆ ಇದೊಂದು ಕಣಿವೆಯ ಬುಡ ಎಂದು ತಿಳಿಯುತಿತ್ತು. ಇಲ್ಲಿಂದ ಮುಂದೆ ಏರು ದಾರಿಯಲ್ಲಿ ಗುಡ್ಡವನ್ನು ಹತ್ತಿಕೊಂಡು ಹೊದರೆ ಕೊಡಚಾದ್ರಿಯ ತುದಿತಲುಪುತ್ತೇವೆಂದು ಭಾವಿಸಿದೆವು. ಇಲ್ಲಿಂದ ಮುಂದೆ ನಾವು ಎಣಿಸಿದಂತೆ ದಾರಿ ಕಡಿದಾಗುತ್ತಾ ಬಂತು. ಆಗಷ್ಟೇ ಶುರುವಾಗಿದ್ದ ವಸಂತ ಕಾಲದಲ್ಲಿ ಮರಗಳೆಲ್ಲ ಚಿಗುರೊಡೆದು ದಟ್ಟ ನೆರಳು ಆವರಿಸಿತ್ತು.

ಈ ಝರಿಯನ್ನು ತಲುಪುವ ಹೊತ್ತಿಗಾಗಲೇ ಅರಣ್ಯ ಇಲಾಖೆಯವರು ಹಾಕಿದ್ದ ಮೈಲಿಗಲ್ಲುಗಳು ಮಾಯವಾಗಿದ್ದವು. ಝರಿಯಿಂದ ಮುಂದೆ ಹೊರಟ ನಂತರ ದಾರಿ ನಾವು ಎಣಿಸಿದ್ದಕ್ಕಿಂತ ಕಡಿದಾಗುತ್ತ ಬಂದಿತು. ಏರುತ್ತಲೇ ಹೊಗುತ್ತಿದ್ದ ದಾರಿ ಮುಂದೆ ಎಡಕ್ಕೋ ಇಲ್ಲ ಬಲಕ್ಕೋ ತಿರುಗುತ್ತಿತ್ತು. ಆ ತಿರುವಿನ ನಂತರ ರಸ್ತೆ ಸಮತಟಾಗಬಹುದು ಎಂದುಕೊಂಡು ಆ ತಿರುವಿನಿಂದ ಮುಂದೆ ಬಂದರೆ, ಆ ತಿರುವಿನ ನಂತರ ನಮ್ಮ ದೃಷ್ಟಿ ಹಾಯುವಷ್ಟು ದೂರವೂ ಏರುರಸ್ತೆ ಕಂಡು ಎಲ್ಲರೂ ಕಂಗಾಲಾಗುತ್ತಿದ್ದರು. ಇಂತಹ ಏರು ರಸ್ತೆಯಲ್ಲಿ ಎಡೆ ಬಿಡದೆ ಎರಡರಿಂದ ಮೂರುಗಂಟೆ ನಡೆದೆವು. ಈ ೨-೩ ಗಂಟೆಯಲ್ಲಿ ತಂದಿದ್ದ ಕಿತ್ತಳೆ, ಕಿಟ್-ಕ್ಯಾಟ್ ಚಾಕೊಲೇಟ್, ಗುಡ್-ಡೇ ಬಿಸ್ಕೆಟ್ ಗಳು ಖಾಲಿಯಾಗುತ್ತಾ ಬಂದವು. ಇಷ್ಟೆಲ್ಲಾ ತಿನಿಸುಗಳ ಮಧ್ಯದಲ್ಲಿ ಮೈಸೂರಿನಿಂದ ಪಾರ್ಲೆ-ಜಿ ಬಿಸ್ಕೆಟ್ ತಂದಿದ್ದಕ್ಕಾಗಿ ಅಶೋಕನನ್ನು ಎಲ್ಲರೂ ರೇಗಿಸುತ್ತಿದ್ದರು. ಇವನು ಬರೀ ೨ ಡಜನ್ ಪಾರ್ಲೆ-ಜಿ ಬಿಸ್ಕೆಟ್ ತಂದಿದ್ದ! ಹೇರಳವಾಗಿದ್ದ ಹಣ್ಣು, ಹೋಳಿಗೆ, ಬಿಸ್ಕೆಟ್ ಗಳ ಮಧ್ಯೆ ಪಾರ್ಲೆ-ಜಿ ಯಾರಿಗೂ ಬೇಡವಾಗಿತ್ತು.

ಇನ್ನೇನು ಸಂತೋಷ್ ಹೊಟೆಲ್ಲನ್ನು ತಲುಪೇ ಬಿಡುತ್ತೇವೆ - ರೈಸ್ ಬಾತ್ ತಿಂದೇ ಬಿಡುತ್ತೇವೆ ಎನ್ನುವ ಜೋಶಿನಲ್ಲಿ ನಾವೆಲ್ಲ ೩ ಗಂಟೆಯವರೆಗೂ ಸತತವಾಗಿ ನಡೆದೆವು. ರೈಸ್ ಬಾತ್ ಮಾಡಿಸುತ್ತೇವೆಂದು ನಮಗಿಂತ ಮುಂಚೆ ಹೊರಟಿದ್ದ ಮಿಲ್ಟ್ರಿ ಮತ್ತು ಜಗದೀಶರನ್ನು ಸೇರಿಕೊಂಡ ಮೇಲೆ ರೈಸ್ ಬಾತಿನ ಆಸೆ ಬಿಟ್ಟು ಬೆಂಗಳೂರಿನಿಂದ ತಂದಿದ್ದ ಚಪಾತಿ, ಹೋಳಿಗೆ ಕೇಕ್ ತಿಂದು ಊಟ ಮುಗಿಸಿದರು. ನಾವು ಊಟ ಮಾಡಲು ಕುಳಿತಿದ್ದ ಜಾಗದಿಂದ ಕೊಡಚಾದ್ರಿಯ ತುದಿ ಕಾಣುತಿತ್ತು. ಇನ್ನೇನು ೧ ಗಂಟೆಯ ನಡಿಗೆ ನಮ್ಮನ್ನು ಶಿಖರದ ತುದಿ ತಲುಪಿಸುತ್ತದೆ ಎನ್ನುವ ಹುಮ್ಮಸ್ಸಿನಲ್ಲಿ ಊಟ ಮುಗಿಸಿದೆವು. ಊಟ ಮುಗಿಸಿ ಮುಂದೆ ನೆಡೆಯುತ್ತಿದ್ದಂತೆ ಕಾಡಿನ ಸಾಂದ್ರತೆ ಕಡಿಮೆಯಾಗುತ್ತಾ ಬಂದಿತು. ಸಂಜೆಯ ಬಿಸಿಲು ದಣಿದಿದ್ದ ನಮ್ಮನ್ನು ಛೇಡಿಸಲಾರಂಬಿಸಿತ್ತು. ಅರ್ಧ ಗಂಟೆ ನಡೆಯುವುದರೊಳಗೆ ನಾವು ಶಿಖರದ ತುದಿ ತಲುಪಿದೆವು.

ಅಲ್ಲೊಂದು ಇಲ್ಲೊಂದು ಮರಗಳಿಂದ ಬೋಳು ಬೋಳಾಗಿದ್ದ ಬೆಟ್ಟದ ತುದಿ ತಲುಪಿದಾಗ ನಮಗೆಲ್ಲರಿಗೂ ಅರಿವಾಗಿದ್ದೇನೆಂದರೆ... ನಾವು ನಿಂತಿದ್ದ ಬೆಟ್ಟ ಕೊಡಚಾದ್ರಿಯಾಗಿರಲಿಲ್ಲ. ಕೊಡಚಾದ್ರಿಯ ಪಕ್ಕಕ್ಕಿದ್ದ ಇನ್ನೊಂದು ಬೆಟ್ಟವಾಗಿತ್ತು.

ನಾವು, ಅಂದರೆ ನಾನು ಮತ್ತು ನನ ಸ್ನೇಹಿತರೆಲ್ಲಾ ಸೇರಿ ಕೈಗೊಂಡಿದ್ದ ಚಾರಣದ ಪ್ರಥಮ ಭಾಗ ಇದು. ಎರಡನೇ ಭಾಗ ಸದ್ಯದಲ್ಲೇ ಬರಲಿದೆ.

Friday 27 July, 2007

ಇಣುಕಿ ನೋಡೋಣ

ಮೋಟುಗೋಡೆ ಓದಿದ ಮೇಲೆ ನೀವುಗಳು ಖಂಡಿತವಾಗಿಯೂ ಉಲ್ಲಸಿತರಾಗುತ್ತೀರ.
ಈ ಬ್ಲಾಗಿಗೆ ಹೆಚ್ಚಿನ ಪೀಠಿಕೆ ಬೇಕಿಲ್ಲ ಓದಿ ನೋಡಿ.

ಮೋಟು ಗೋಡೆ ಇಣುಕಲು ಇಲ್ಲಿ ಕ್ಲಿಕ್ಕಿಸಿ

ಬಾಗಿಲಿಂದಾಚೆ...

ಅಂತರ್ಜಾಲದಲ್ಲಿ ವಿಹರಿಸುತ್ತಿದ್ದಾಗ ದೊರೆತದ್ದು ಇದು. ಶ್ರೀ.ವಸುದೇಂಧ್ರರವರ 'ಬಾಗಿಲಿಂದಾಚೆ ಪೊಗದಿರೆಲೋ ರಂಗ' ಎಂಬ ಈ ಕತೆಯನ್ನೋಮ್ಮೆ ಓದಿ. ಇದನ್ನು ಓದಿದ ಮೇಲೆ ನನಗೆ ಅನ್ನಿಸಿದ್ದು ಇದು...

ನಾನು ೫ನೇ ಕ್ಲಾಸಿನಲ್ಲಿ ನಮ್ಮ ದೊಡ್ಡಮ್ಮನ ಮನೆಯಿಂದ ಒಬ್ಬನೆ ವಾಪಸ್ ಬಂದಿದ್ದೆ. ನಾನು ಮನೆ ತಲುಪಿದಾಗ ನಮ್ಮ ಕೆಳಗಿನ ಮನೆ ಆಂಟಿ ನಮ್ಮಮ್ಮನ ಹತ್ರ ಮಾತಾಡುತಿದ್ರು. ಅವರಿಗೆ ನಾನು ಒಬ್ಬನೆ ಬಸ್ಸಿನಲ್ಲಿ ಬಂದೆ ಅಂತ ನಂಬೊಕೆ ಸಾದ್ಯಾನೇ ಆಗ್ತಿರಲಿಲ್ಲ. ಕಾರಣ - ಅದರ ಹಿಂದಿನ ವಾರ ೧೨ನೇ ತರಗತಿಯಲ್ಲಿ ಓದುತಿದ್ದ ಅವರ ಮಗನ್ನು ಅವನ ಚಿಕ್ಕಮ್ಮ ಬಸ್ಸಿನಲ್ಲಿ ಕಳಿಸಿ ನಂತರ ಅವನ ಕ್ಷೇಮಕ್ಕೆ ಹೆದರಿ ಹಿಂದಿನ ಬಸ್ಸಿನಲ್ಲೇ ಬಂದಿದ್ದರು.
ನಾನು ರಜಾ ದಿನಗಳಲ್ಲಿ ಕಥೆ ಪುಸ್ತಕಗಳನ್ನ ಓದುವುದನ್ನ ನೊಡಿ ಅವರ ಮಕ್ಕಳಿಗೆ ನೀವು ಯಾಕೆ ಓದಲ್ಲ ಎಂದು ತಾಕೀತು ಮಾಡುತಿದ್ದ ತಾಯಿಯರ ಮಧ್ಯೆ ನನ್ನ ಬಾಲ್ಯವನ್ನ ಅದರಂತೆಯ ಬಿಟ್ಟ ನನ್ನ ತಂದೆ ತಾಯಿಯನ್ನು ಅಣ್ಣಂದಿರನ್ನು ನೆನೆಸಿಕೊಂಡೆ. ವಸುಧೇಂದ್ರರ ಕತೆ ಓದಿ ಸಂತೋಷ ಆಯಿತು.

ಕತೆ ಓದುವುದಕ್ಕೆ ಇಲ್ಲಿ ಕ್ಲಿಕ್ಕಿಸಿ.

Tuesday 24 July, 2007

ಚಿಕ್ಕವನು

ಇವನ ಹೆಸರು ಜಯಂತ ಎಂದಿದ್ದರೂ ಮನೆಯಲ್ಲಿ ಎಲ್ಲರಿಗಿಂತ ಚಿಕ್ಕವನಾಗಿದ್ದ ಕಾರಣ ಎಲ್ಲರೂ ಇವನನ್ನು ಚಿಕ್ಕವನೇ, ಚಿಕ್ಕವನೇ ಎಂದೇ ಕರೆಯುತಿದ್ದರು. ಬರು ಬರುತ್ತಾ ಚಿಕ್ಕವನಾದ ಜಯಂತನ ಹೆಸರು ಚಿಕ್ಕದಾಗುತ್ತಾ 'ಚಿಕ್ಕ' ಎನ್ನುವಲ್ಲಿಗೆ ನಿಂತಿತ್ತು. ಮಳೆಗಾಲವಾದ್ದರಿಂದ ಚಿಕ್ಕನ ಅಮ್ಮನಾದ ವಿಶಾಲಕ್ಷಮ್ಮನವರು ಇವನನ್ನು ಹೊರಗೆ ಆಡಲು ಹೊಗಲು ಬಿಡದೆ, ಓದುವುದಕ್ಕೆ ಕೂರಿಸಿದ್ದರು. ಚಿಕ್ಕ, ಗೆಳೆಯರೊಂದಿಗೆ ಹೊರಗೆ ಆಡಲು ಹೊದನೆಂದರೆ ಸಂಜೆ ಏಳರ ಮುಂಚೆ ತಿರುಗಿ ಬಂದವನಲ್ಲ. ಅದರಲ್ಲೂ ಮಳೆಯಿಂದಾಗಿ ತನ್ನ ಶನಿವಾರ ಮಧ್ಯಾಹ್ನದ ವಾಲಿಬಾಲ್ ಮ್ಯಾಚ್ ತಪಿದ್ದಕ್ಕೆ ಮಳೆಯ ಮೇಲೂ ಹಾಗೂ ಶಾಲೆಯಿಂದ ಬಂದು ಊಟವಾದೊಡನೆ ಓದಲು ಕೂರಿಸಿದ್ದ ಅಮ್ಮನ ಮೇಲೂ ಸಿಟ್ಟಾಗಿದ್ದ. ಚಿಕ್ಕ 'ಪುರದ ಪುಣ್ಯಂ ಪುರುಷ ರೂಪಿಂದೆ ಪೊಗುತಿದೆ' ಪದ್ಯ ಓದುತಿದ್ದಾಗ ಅಜ್ಜ, ಕಾಲೇಜಿಗೆ ಹೊಗುವ ತನ್ನ ಹಿರಿಯ ಮೊಮ್ಮಗನ ಕೈಯಲ್ಲಿ ತರಿಸಿಕೊಂಡು ಬಿ.ಪಿ.ಎಲ್ 2-ಇನ್-1 ನಲ್ಲಿ ಹಾಕಿದ್ದ ಶ್ರೀ. ಗುರುರಾಜಲು ನಾಯ್ಡುರವರ ಭೀಮ ಜರಾಸಂಧ ಹರಿಕಥೆ ಕಿವಿ ಮೇಲೆ ಬಿದ್ದಿತ್ತು. ಹರಿಕಥೆ ಕೇಳುತಿದ್ದ ಅಜ್ಜನೆಡೆಗೆ ಮೆಲ್ಲನೆ ಸರಿದ ಚಿಕ್ಕ, ಪದ್ಯ ಓದುತಿದ್ದಂತೆ ನಟಿಸುತಿದ್ದರೂ ಕಿವಿ ಮತ್ತು ಮನಸ್ಸೆಲ್ಲಾ ಭೀಮ ಜರಾಸಂದರ ಯುದ್ದದಲ್ಲೇ ಮುಳುಗಿ ಹೊಗಿದ್ದವು.

ಗುರುರಾಜುಲು ನಾಯ್ಡುರವರ ಕಂಠ ಸಿರಿಯಿಂದ ಜೊಗುಳದಂತೆ ಹರಿಯುತ್ತಿದ್ದ ಹರಿಕಥೆಯ ಮದ್ಯದಲ್ಲಿ, ಧುತ್ತನೆ ಜೋರಾದ ಹಿಮ್ಮೇಳದೊಂದಿಗೆ 'ಮೆರೆವ ಪುರದೊಳಗೆ ಪಿರಿಯವನೆನಿಸಿದ ಹರಿಯ ಮಹಿಮೆಯನು ಪಾಡಿ ಪೊಗಳಲು...' ಎಂದು ಶುರುವಾದ ಹಾಡಿಗೆ ಚಿಕ್ಕನು ಅಡುಗೆ ಮನೆಯಲ್ಲಿಟ್ಟ ಬಾಟಲಿಯಿಂದ ಕದ್ದು ಹಾರ್ಲಿಕ್ಸ್ ತಿನ್ನುತ್ತಿದ್ದಾಗ ಹಿಂದಿನಿಂದ ಅಮ್ಮನ ಧ್ವನಿ ಕೇಳಿದಾಗ ನಡುಗುವಂತೆ ನಡುಗಿದ. ಚಿಕ್ಕನು ನಡುಗಿದಾಗ ಅವನೆಡೆಗೆ ನೋಡಿದ ಅಜ್ಜ, ಚಿಕ್ಕನನ್ನು ಅವನೊಟ್ಟಿಗೆ ಮಂಚದ ಮೇಲೆ ಬಂದು ಕೂರುವಂತೆ ಸನ್ನೆ ಮಾಡಿ ಕರೆದ. ಪುರದ ಪುಣ್ಯವನ್ನು ಅಲ್ಲೇ ಬಿಟ್ಟ ಚಿಕ್ಕ, ಮೆಲ್ಲನೆ ಎದ್ದು ಅಜ್ಜನ ಶಾಲಿನೊಳಗೆ ತೂರಿಕೊಂಡ. ಕಿವಿಯೆಲ್ಲಾ ಹರಿಕಥೆಯ ಮೇಲಿದ್ದರೂ ದೃಷ್ಟಿ ಮಾತ್ರ ಅಮ್ಮ ಏಲ್ಲಿ ಬಂದು ಬಿಡುವಳೋ ಎಂಬ ಆತಂಕದಿಂದ ಬಾಗಿಲಿನ ಮೇಲೇ ನೆಟ್ಟಿದ್ದವು. ಗುರುರಾಜಲುರವರ ಸ್ವರದೊಳಗೆ ಲೀನವಾದ ಚಿಕ್ಕ ಅಮ್ಮನನ್ನಷ್ಟೇ ಅಲ್ಲದೇ ಪಕ್ಕದಲ್ಲಿದ್ದ ಅಜ್ಜನನ್ನೂ ಮರೆತಿದ್ದ.

ಯಾಂತ್ರಿಕವಾಗಿ ಬಾಗಿಲಿನೆಡೆಗೆ ನೆಟ್ಟಿದ್ದ ದೃಷ್ಟಿ ಈಗ ಗೊಡೆಯ ಮೇಲೆ ಮಳೆಯ ನೀರಿನಿಂದಾಗಿದ್ದ ಕಲೆಗಳೆಡೆಗೆ ಹೊರಳಿತ್ತು. ದಕ್ಷಿಣದ ಕಡೆಗಿದ್ದ ಗೋಡೆಗೆ ಒರಗಿ ಕುಳಿತಿದ್ದ ಚಿಕ್ಕನ ಎದುರಿಗೆ ಉತ್ತರಾಭಿಮುಖವಾಗಿ ಬಾಗಿಲಿದ್ದರೆ ಅದರ ಪಕ್ಕದಲ್ಲಿ ಪಶ್ಚಿಮಾಭಿಮುಖವಾಗಿ ಗೋಡೆ ಇತ್ತು. ತೀರ ಸಾಗರಗಳಿಂದ ಬಂದು ಅಪ್ಪಳಿಸುವ ಮಳೆಗೆ ಮೈಕೊಟ್ಟು ನೆನೆದು ಮತ್ತೆ ಬಿಸಿಲಲ್ಲಿ ಒಣಗಿ, ಕಳೆದ ಬೇಸಿಗೆಯಲ್ಲಷ್ಟೇ ಸುಣ್ಣ ಕಂಡಿದ್ದ ಗೋಡೆಯ ಮೇಲೆಲ್ಲಾ ಕಪ್ಪು ಕಲೆಗಳ ಚಿತ್ತಾರಗಳಾಗಿದ್ದವು. ಇವುಗಳನ್ನೇ ದಿಟ್ಟಿಸುತ್ತಿದ್ದ ಚಿಕ್ಕನಿಗೆ ಕೆಲವು ಕಲೆಗಳು ಹಾರುವ ಹಕ್ಕಿಗಳಂತೆ ಕಂಡರೆ ಕೆಲವು ಬಾಯಿ ತೆಗೆದ ಆಕಳಿನ ರುಂಡದಂತೆ ಕಂಡವು. ಕೆಲವಕ್ಕೆ ಕೊಂಬು ನೆಟ್ಟಗಿದ್ದರೆ ಕೆಲವಕ್ಕೆ ಗಿಡ್ಡ ಕೊಂಬು, ಇನ್ನೂ ಕೆಲವಕ್ಕೆ ಕೊಂಬೇ ಇಲ್ಲವೆಂದು ಗಮನಿಸಿದ. ಇವುಗಳ ಮೇಲೆಲ್ಲೋ ಒಂದು ಆಕೃತಿ ಕೊಳಲು ಹಿಡಿದು ದನ ಮೇಯಿಸುತ್ತಿರುವಂತೆ ಕಂಡಿತು. ಅವುಗಳ ಬದಿಯಲ್ಲೇ ಭೀಮ ಜರಾಸಂದರಂತೆ ಎರಡು ದೊಡ್ಡ ದೇಹಗಳು ಕಾಣಿಸಿದವು. ಅಜ್ಜನ 2-ಇನ್-1 ನಿಂದ ಹೊರಡುತಿದ್ದ ಹರಿಕಥೆ ಈಗ ಚಿಕ್ಕನಿಗೆ ತಮ್ಮ ಮನೆಯ ಗೋಡೆಯ ಮೇಲೆ ನಡೆಯುತ್ತಿರುವಂತೆ ಭಾಸವಾಗುತಿತ್ತು. ಗೋಡೆಯಿಂದ ಹೊರಬಂದ ಭೀಮ ಜರಾಸಂದರಿಬ್ಬರೂ ತಮ್ಮ ನಡುಮನೆಯಲ್ಲೇ ಮಲ್ಲಯುದ್ಧ ಮಾಡುತ್ತಿರುವಂತೆ ತೋರಿತು. ನೋಡು ನೋಡುತ್ತಿದ್ದಂತೆ ಭೀಮ ಜರಾಸಂದನನ್ನು ಇಬ್ಭಾಗವಾಗಿ ಸಿಗಿದು ಹಾಕಿ ಗೋಡೆಯೊಳಗಿದ್ದ ಕೃಷ್ಣನೆಡೆಗೆ ನೊಡಿದ. ಅಷ್ಟರಲ್ಲಿ ಇಬ್ಬಾಗವಾಗೊದ್ದ ಜರಾಸಂದನ ದೇಹ ಮತ್ತೆ ಕೂಡಿಕೊಳ್ಳುವುದನ್ನು ನೋಡತಿದ್ದ ಚಿಕ್ಕನು ಸಣ್ಣಗೆ ಬೆದರಿ ಅಜ್ಜನ ತೋಳಿನೊಳಗೆ ಕೈಹಾಕಿ ಗಟ್ಟಿಯಾಗಿ ಹಿಡಿದುಕೊಂಡ. ಕೃಷ್ಣನು ಧರ್ಬೆಯನ್ನು ಸಿಗಿದು ವಿರುದ್ಧ ದಿಕ್ಕಿಗೆ ಎಸೆದು ತೋರಿಸಿ ಕೊಟ್ಟಂತೆಯೇ ಭೀಮ ಜರಾಸಂದನನ್ನು ಸಿಗಿದು ದೇಹಗಳನ್ನು ವಿರುದ್ಧ ದಿಕ್ಕಿನಲ್ಲಿ ಎಸೆದ.

ಜರಾಸಂದನ ದೇಹಗಳು ವಿರುದ್ದ ದಿಕ್ಕಿನಿಂದ ಒಂದಕ್ಕೋಂದು ಹತ್ತಿರ ಬಂದು ಕೂಡಿಕೊಳ್ಳಲಾಗದೆ ಪ್ರಾಣವನ್ನು ಬಿಡುತ್ತಿರುವಾಗ ವಿಷಾಲಾಕ್ಷಮ್ಮನವರ ಆಗಮನವಾಯಿತು. ಮಗ ಓದುತ್ತಾ ಇದ್ದಾನೆ ಎಂದು ಭಾವಿಸಿ ಅವನಿಗೆ ತಿನ್ನಲು ಮರಳಿನಲ್ಲಿ ಹುರಿದ ಕಡಲೇ ಕಾಯಿ ತಂದ ವಿಷಾಲಾಕ್ಷಮ್ಮನವರು ಮಗ ಪುಸ್ತಕ ಕೆಳಗೆ ಬಿಟ್ಟು ಅಜ್ಜನೊಡನೆ ಬೆಚ್ಚಗೆ ಹರಿಕಥೆ ಕೇಳುತ್ತಿರುವುದನ್ನು ನೋಡಿ ಮಗನನ್ನು ಕಣ್ಣಿನಲ್ಲೇ ಗದರಿಕೊಂಡರು. ನಮ್ಮ ಚಿಕ್ಕನಿಗೆ ಅವನ ಅಜ್ಜನದೇ ಮುದ್ದು, ಹೊದಸಾರಿ ಇವರು ಚಿಕ್ಕನ ಪರೀಕ್ಷೆಯ ವೇಳೆಯಲ್ಲಿ ಯಾವಾಗಲೂ ಟಿ.ವಿ. ಹಾಕುತ್ತಿದ್ದುದರಿಂದಲೆ ಚಿಕ್ಕನಿಗೆ ಡಿಸ್ಟಿಂಕ್ಷನ್ ಬರಲಾಗಲಿಲ್ಲ ಎಂದು ಕರುಬಿದರು. ಅಜ್ಜನಿಗೆ ಏನೂ ಹೇಳಲಾಗದೆ ನಡುಮನೆಯಿಂದ ಜಗುಲಿಗೆ ನಡೆದು ಮನೆಯ ಮೈನ್ ಸ್ವಿಚ್ ಆರಿಸಿ ಬಿಟ್ಟರು. ಹರಿಕಥೆಯ ಮದ್ಯದಲ್ಲೇ ಕರೆಂಟ್ ಹೋದದ್ದರಿಂದ ಅಜ್ಜನೇ 'ಮಂಗಳವಾಗಲಿ ಸರ್ವರಿಗೆ ಶುಭಮಂಗಳವಾಗಲಿ ...' ಎಂದು ಮಂಗಳವಾಡಿ ಮುಗಿಸಿದರು.

Monday 23 July, 2007

ಚದುರಂಗ... ಇಲ್ಲ ರಣರಂಗ?

ಮಳೆಗಾಲದ ಒಂದು ಶನಿವಾರ. ಜುಲೈ ತಿಂಗಳು ಶುರುವಾದರೂ ಬೆಂಗಳೂರಿನಲ್ಲಿ ಮಳೆ ಸರಿಯಾಗಿ ಆಗಿಲ್ಲ. ಮೋಡಗಳ ಆಟ ದಿನವೂ ಇದ್ದದ್ದೆ, ಮಳೆ ಮಾತ್ರ ಇಲ್ಲ! ಬೆಳಗಿನ ಚುಮು ಚುಮು ಚಳಿಯಲ್ಲಿ ಹೊದ್ದು ಮಲಗಿದರೆ ಏಳುವುದೇ ಕಷ್ಟ, ಅದರಲ್ಲೂ ವೀಕೆಂಡ್ ಆದರಂತೂ ಮಲಗೋಕೆ ಯಾವ ಅಡ್ಡೀನು ಇರೊಲ್ಲ.
ಚೆನ್ನಾಗಿ ಮಲಗುವುದಕ್ಕೆ ರಂಗ ಸಜ್ಜಾಗಿತ್ತು. ಅಂತಹ ಶನಿವಾರದ ದಿನ ಬೆಳಿಗ್ಗೆ ಏಳಕ್ಕೇ ಫೊನಾಯಿಸಿದ ಶನಿರಾಯನಾರಪ್ಪ ಇದು ಎಂದು ಫೊನೆತ್ತಿದ್ದಾಗ, ದಿನದ ಪ್ಲಾನ್ ಕೇಳುತಿತ್ತು ಆ ತುದಿಯಲ್ಲಿ ಗೆಳೆಯನ ದ್ವನಿ. ಹಿಂದಿನ ದಿನ ಮೈಲ್ ಮಾಡಿ ಎಲ್ಲರಿಗೂ ಪ್ಲಾನ್ ಮಾಡೊಣ ಅಂದವನು ಇನ್ನೂ ಹಾಸಿಗೆ ಮೇಲೆ ಇದ್ದೆ. ಢಡಕ್ಕನೆ ಎದ್ದೆ, ೧೦ ಗಂಟೆಗೆ ಅವನ ಮನೆ ಹತ್ತಿರ ಸಿಗುತ್ತೇನೆ ಎಂದು ಹೇಳಿದೆ. ಚಿಕ್ಕನ ಗಾಡಿಯಲ್ಲಿ ಅರ್ದ ಬೆಂಗಳೂರು ನೊಡಲಿದ್ದೆವು ನಾವು. ಹತ್ತಕ್ಕೆ ನಮ್ಮ ಪ್ರಯಾಣ ಶುರುವಾದದ್ದು ವಿಜಯನಗರದಿಂದ. ಇಲ್ಲಿಂದ ಮಹಾಲಕ್ಷ್ಮೀ ಲೇಔಟಿನಲ್ಲಿ ಕರಿಯನ್ನು ಹತ್ತಿಸಿಕೊಂಡ್ವಿ. ಮುಂದೆ ಜೆ.ಸಿ.ನಗರದಲ್ಲಿ ಜಾನಕಿರಾಮ ಹತ್ತಿದಾಗ ಕಾರು ಪೂರ್ತಿಯಾಯಿತು.

ಹೆಬ್ಬಾಳದ ಜಾನಕಿರಾಮ ಕಳೆದವಾರ ತನ್ನ ೮೭ನೇ ಇಸವಿಯ ಯಮಹ ಬೈಕಿಗೆಂದು ಹೊಸ ಪೆಟ್ರೋಲ್ ಟ್ಯಾಂಕ್ ಕೊಂಡಿದ್ದ. ಶಿವಾಜಿ ನಗರದಲ್ಲಿ ೩೦೦ ರೂಪಾಯಿಗೆ ಕೊಂಡ ಟ್ಯಾಂಕಿಗೆ ಜೆ.ಸಿ.ನಗರದಲ್ಲಿ ೫೦೦ ರೂಪಾಯಿಯ ಬಣ್ಣ ಹೊಡೆಸುತ್ತಿದ್ದಕ್ಕೆ ಕರಿ ಅವನನ್ನು ಚೆನ್ನಾಗಿ ರೇಗಿಸುತಿದ್ದ. "ಏನೇ ಬಣ್ಣ ಹೊಡೆಸಿದರೂ ಮುದುಕಿಯಾದ ನಿನ್ನ ಬೈಕು ಹುಡುಗಿ ಆಗೊಲ್ಲ" ಎನ್ನುವುದು ಕರಿಯ ವಾದ. ಹೆಚ್ಚೆಸ್ಸಾರ್ ಲೇಔಟಿಗೆ ಹೊರಟಿದ್ದ ನಮಗೆ ಇವರಿಬ್ಬರ ಜಗಳದಿಂದಾಗಿ ಒಳ್ಳೆಯ ಟೈಮ್ ಪಾಸ್ ಆಗಿತ್ತು. ನಾವು ಜೆ.ಸಿ.ನಗರದಿಂದ ಹೆಚ್ಚೆಸ್ಸಾರ್ ಲೇಔಟಿಗೆ ಕ್ವೀನ್ಸ್ ರಸ್ತೆ, ಎಮ್.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೊರಮಂಗಲದ ಮೂಲಕ ಹಾದು ಹೊಗುವವರಿದ್ದೆವು.

ಎಲ್ಲೆಲ್ಲೂ ಟ್ರಾಫಿಕ್ ಇತ್ತು ಎಂದು ನಾನೇನು ಹೇಳ ಬೇಕಾಗಿಲ್ಲ. ಇದು ಇದ್ದದ್ದೇ, ಆದರೆ ನನ್ನ ಗಮನಕ್ಕೆ ಬಂದದ್ದು ಜನರ ತುರಾತುರಿ. ಯಾರೊಬ್ಬರೂ ಬೆರೆಯವರಿಗೆ ದಾರಿ ಬಿಟ್ಟು ಕೊಡರು. ರಸ್ತೆಯ ಮೇಲೆ ಒಂದೊಂದು ಇಂಚಿಗೂ ಜಗ್ಗಾಟ. ಎಲ್ಲರೂ ಯುದ್ಧದಲ್ಲಿನ ಸೈನಿಕರಂತೆ "holding the fort" ಅಂತ ಹೇಳುತ್ತಾರಲ್ಲ ಹಾಗೆ ಪ್ರತಿಯೊಂದು ಇಂಚನ್ನೂ ಬಿಟ್ಟು ಕೊಡದೆ ಮುನ್ನುಗ್ಗುವವರು.
ನಾವು ಹೊರಟಿದ್ದು ಹೆಚ್ಚೆಸ್ಸಾರಿಗಾದರೂ ನನ್ನ ಯೊಚನಾ ಲಹರಿ ಹೀಗೆ ಹೊರಟಿತ್ತು- ಇಡೀ ಟ್ರಾಫಿಕ್ ವ್ಯವಸ್ತೆಯನ್ನ ಯುದ್ದಕ್ಕೆ ಹೊಲಿಸಬಹುದು. ಬೈಕಿನವರು ಕಾಲಾಳುಗಳು -ಪದಾತಿದಳ ಅಂತಲೂ ಕರೆಯಬಹುದು. ಇವು ಎಲ್ಲಾ ಸಂದಿ ಗೊಂದಿಗಳಲ್ಲೂ ನುಗ್ಗುತ್ತವೆ, ಸಣ್ಣಪುಟ್ಟ ಗುಂಡಿಗಳನ್ನೆಲ್ಲಾ ಹಾರುತ್ತವೆ ಹಾಗು ಎಲ್ಲಾ ಸಿಗ್ನಲ್ ಗಳಲ್ಲೂ ಮುಂದಿನ ಸಾಲಿನಲ್ಲಿರುತ್ತವೆ. ಕಾಲ್ ಸೆಂಟರ್ ಕ್ಯಾಬ್ ಗಳದ್ದೇ ಒಂದು ಗುಂಪು ಇದೆ. ಟಾಟಾ ಸುಮೋ, ಕ್ವಾಲಿಸ್, ಟೆಂಪೊ ಟ್ರಾವೆಲ್ಲರ್ ಇವುಗಳನ್ನೆಲ್ಲ ಈ ಜಾತಿಗೆ ಸೇರಿಸ ಬಹುದು. ಕಾಲ್ ಸೆಂಟರ್ ಕ್ಯಾಬ್ ಮತ್ತು ಆಟೊಗಳು ಸೇರಿದರೆ ಅಶ್ವದಳ. ಇವು ಅಶ್ವದಳವೇ ಯಾಕೆ ಎಂದರೆ ರಸ್ತೆ ಮೇಲೆ ನೆಗೆಯುವ ಮತ್ತು ಕೆನೆಯುವ ಸಾಮರ್ಥ್ಯ ಇರುವುದು ಇವಕ್ಕೇ. ಇನ್ನು ಬಿ.ಎಮ್.ಟಿ.ಸಿ ಬಸ್ಸುಗಳಲ್ಲಿ ವೊಲ್ವೊ ಒಂದನ್ನ ಹೊರತುಪಡಿಸಿ ಉಳಿದೆಲ್ಲವನ್ನೂ ಒಂಟೆ ಸೈನ್ಯ ಎಂದು ಕರೆಯಬಹುದು. ಇವುಗಳು ಪೂರ್ತಿಯಾಗಿ ತುಂಬಿದ್ದಾಗ ಒಂದು ಕಡೆಗೆ ವಾಲಿಕೊಂಡು ಹೊಗೊ ದೃಶ್ಯ ಎಲ್ಲರಿಗೂ ಕಣ್ಣು ಕಟ್ಟಿದ ಹಾಗಿರಬೇಕು. ಭಾರದ ಸೆಳೆತಕ್ಕೆ ಚದುರಂಗದಾಟದಲ್ಲಿನ ಒಂಟೆಯ ನಡಿಗೆಯಂತೆಯೆ ಬಿ.ಎಮ್.ಟಿ.ಸಿ ಬಸ್ಸುಗಳ ನಡಿಗೆ ಒಂದು ದಿಕ್ಕಿಗೆ ವಾಲಿ ಕೊಂಡಿರುತ್ತದೆ. ರಸ್ತೆಯಲ್ಲಿ ಸುಂದರವಾಗಿ ಕಾಣೊ ಕಾರುಗಳು ಹೋಸ ಸಾರೋಟುಗಳಾದರೆ, ಹಳೆಯ ಮಾರುತಿ ಮತ್ತು ಫಿಯಟ್ ಕಾರುಗಳನ್ನ ಏನೇಂದು ಕರೆಯೊಣ? ಹಳೆಯ ಮತ್ತು ಹೊಸಬಗೆಯ ಲಾರಿಗಳೆಲ್ಲವೂ ಗಜದಳವಿದ್ದಂತೆ. ಈ ಟ್ರಾಫಿಕ್ ಸೈನ್ಯಕ್ಕೆ ಸೇನಾಧಿಪತಿ ಐರಾವತ. ಐರಾವತ - ವೊಲ್ವೊ ಬಸ್ಸು. ಈ ಬಸ್ಸಿನ ಗಾಂಭೀರ್ಯತೆ ಒಂದರಿಂದಲೇ ಇದಕ್ಕೆ ಸೇನಾಧಿಪತಿಯ ಸ್ಥಾನ ಕೊಡ ಬಹುದಾದರು ಇದರ ಗುಣಗಳು ಇನ್ನೂ ಇವೆ.

ಇದೆಲ್ಲಾ ಸೈನ್ಯವಾದರೆ ಯುದ್ದ ಎಲ್ಲಿ ಎನ್ನುವಿರ? ಯಾವುದೇ ನಾಲ್ಕು ರಸ್ತೆ ಕೂಡುವ ಜಾಗದಲ್ಲಿ ನೀವು ಯುದ್ದ ನೋಡ ಬಹುದು. ಸಿಗ್ನಲ್ ಹಾಳಾಗಿ ಪೋಲೀಸಿನವರೂ ಇಲ್ಲದಿದ್ದರೆ ಈ ಟ್ರಾಫಿಕ್ ಯುದ್ದವನ್ನು ಕುರುಕ್ಷೇತ್ರಕ್ಕೇ ಹೊಲಿಸಬಹುದು. ಸಿಲ್ಕ್ ಬೋರ್ಡ್, ನಾಗವರ ಸರ್ಕಲ್, ಮಾರತ ಹಳ್ಳಿ ಬ್ರಿಡ್ಜ್ ಹೀಗೆ ದಿನವೂ ಕುರುಕ್ಷೇತ್ರಗಳಾಗುವ ಜಾಗಗಳು ಬೆಂಗಳೂರಿನಲ್ಲಿ ಬಹಳಷ್ಟಿವೆ. ಪದಾತಿದಳವಾದ ಬೈಕು ಮತ್ತು ಅಶ್ವದಳ ಈ ಯುದ್ದದ್ದಲ್ಲಿ ಬಹು ಚಾಣಾಕ್ಷರು. ಆದರೂ ಸಾವು ನೋವುಗಳು ಹೆಚ್ಚಿಗೆ ಸಂಭವಿಸುವುದೂ ಈ ದಳದಲ್ಲೆ, ಅದರಲ್ಲೂ ಪದಾತಿದಳದಲ್ಲೇ ಹೆಚ್ಚು. -ಚಿಕ್ಕ ಧಢಕ್ಕನೆ ಬ್ರೇಕ್ ಹಾಕಿದಾಗ ನನ್ನ ಯೋಚನಾ ಲಹರಿಯಿಂದ ಹೊರಬಂದು ಇವನು ಬ್ರೇಕ್ ಹೊಡೆಯದಿದ್ದರೆ ಆಗುತಿದ್ದ ಅನಾಹುತದೆಡೆಗೆ ಮನ ಹರಿದಿತ್ತು.

Wednesday 11 July, 2007

ಮದುವೆ... ವಾದ್ಯ...

ಕಳೆದ ತಿಂಗಳು ಕೆಲಸದ ಮೇಲೆ ಕೆಲವು ದಿನಗಳಮಟ್ಟಿಗೆ ಕ್ಯಾಲಿಫೊರ್ನಿಯಕ್ಕೆ ಹೋಗಿದ್ದೆ. ಏರ್ ಪೊರ್ಟ್ನಲ್ಲಿ ಇಳಿದು ಹೊರಗೆ ಬರುವಾಗ ಸ್ನೇಹಿತ ಹೇಳಿದ- ನಾನು ಹೊದ ಸಾರಿ ಬಂದಾಗ ಒಬ್ಬ ಕ್ಯಾಬ್ ಡ್ರೈವರ್ ಸಿಕ್ಕಿದ್ದ ತುಂಬಾ ಚೆನ್ನಾಗಿ/ಸರಿಯಾಗಿ ಹೊಟೆಲ್ ತಲುಪಿಸಿದ. ಹೊರಗೆ ಬಂದರೆ ಹೊದಸಾರಿ ಸಿಕ್ಕ ಡ್ರೈವರ್ ಅಲ್ಲೆ ಹಾಜರ್ ಇದ್ದ. ಸರಿ ಚೆಸ್ಟರ್(ಡ್ರೈವರನ ಹೆಸರು) ಗಾಡಿನೆ ಹಿಡಿದ್ವಿ, ಸೌಕ್ಯವಾಗಿ ಹೊಟೆಲ್ ತಲುಪಿಕೊಂಡ್ವಿ. ನಮ್ಮ ಕಂಪನಿಯದೇ ಇನ್ನೊಂದು ತಂಡ ನಮಗಿಂತ ಒಂದು ದಿನ ಮುಂಚೆ ಬಂದು ಸೇರಿತ್ತು. ಅವರಿಗೂ ಚೆಸ್ಟರನೇ ಸವಾರಿ ಕೊಟ್ಟಿದ್ದ. ಅವ ನಮ್ಮಿಂದ ೨೦-೨೫ $ ಹೆಚ್ಚಿಗೆ ಕಿತ್ತಿದ್ದಾನೆ ಅಂತ ನಮ್ಮ ಅಲ್ಲಿಯ ದೇಸೀ ಸ್ನೇಹಿತರಿಂದ ಆಮೇಲೆ ತಿಳೀತು. ಅವನು ದಿನಾಲು ಭಾರತದಿಂದ ಹಾರೊ ಸಿಂಗಾಪುರ್ ಏರ್ಲೈನ್ಸ್ ಬಂದಿಳಿಯುವ ಹೊತ್ತಿಗೆ ಅಲ್ಲಿ ಇರೊ ಖ್ಹಾಯಂ ಗಿರಾಕಿ ಅಂತಲೂ ತಿಳಿತು! ಬೆಳ್ಳಗಿರೋದೆಲ್ಲ ಹಾಲಲ್ಲ ಅನ್ನೊ ಹಾಗೆ ಬೆಳ್ಳಗಿರೊರೆಲ್ಲ ಸಾಚಗಳಲ್ಲ ಅಂದುಕೊಂಡೆ. ಅಂದಹಾಗೆ ಬೆಳ್ಳಗಿರೊರೆಲ್ಲ ಸಾಚಗಳು ಅಂತ ನಾನೇನು ಅಂದುಕೊಂಡಿರಲಿಲ್ಲ... ಇರಲಿ ಬಿಡಿ ನಾನು ಅಮೇರಿಕ ತಲುಪಿದೆ ಅದು ಮುಖ್ಯ ಈಗ.

ನಾನು ಅಲ್ಲಿರುವಾಗ ಇಲ್ಲಿ, ದೇಶದಲ್ಲಿ ನಮ್ಮ ಅತ್ತೆಯ ಮಗನ ಮದುವೆ ನಡೀತಾಯಿತ್ತು. ನಮ್ಮಣ್ಣನಿಗೆ ಫೊನ್ ಹಾಯಿಸಿದೆ, ಹಿಮ್ಮೇಳದಲ್ಲಿ ಬ್ಯಾಂಡ್ ಸೆಟ್ಟಿನ ಸೌಂಡು. ತಟ್ಟಕ್ಕನೆ ಹೊಳೀತು... ಕರಿಯ ಐ ಲವ್ ಯು... ಕರುನಾಡ ಮೇಲಾಣೆ... ಹಾಡು ಇದು ಅಂತ. ಫೊನ್ ಮಾಡಿ ಆದ ಕೂಡಲೆ ಇನ್ಟರ್ನೆಟ್ ನಲ್ಲಿ ಈ ಹಾಡು ಕೇಳ್ಬೇಕು ಅಂದುಕೊಂಡೆ.
ನಮ್ಮಕಡೆ ಮದುವೆ, ರಾಜ್ಯೋತ್ಸವ, ಗಣಪತಿ ಹಬ್ಬ, ನಾಮಕರಣಗಳಲ್ಲಿ ಬ್ಯಾಂಡ್ ಸೆಟ್ಟು ಮತ್ತು ಮೈಕ್ ಸೆಟ್ಟು ಇವೆರಡೂ ಖಾತ್ರಿ ಆಗಿದ್ದಾವೆ. ಮದುವೆ ಸೆಟ್ ಆಗುತ್ತಿದ್ದ ಹಾಗೆ ಈ ಏರಡೂ ಸೆಟ್ಟುಗಳನ್ನ ಸೆಟ್ ಮಾಡಿಕೊಳ್ಳಬೇಕಾಗಿದೆ. ಮದುವೆ ಮಾಡಿಸೊ ಐನವರ ಹಾಗೆ ಇವೂ, ಮದುವೆಗೆ ಬೇಕೆ ಬೇಕಾಗಿವೆ. ಇದೆಲ್ಲ ಇವುಗಳ ತಾಂತ್ರಿಕ ಪ್ರಾಮುಖ್ಯತೆಗಳಾದರೆ ಇವುಗಳಿಂದ ಅಭಾಸ ಇಲ್ಲ ಮೊಜು ಏನಾದರು ಇರಬಹುದ?

ಕರಿಯ ಐ ಲವ್ ಯು... -ಬ್ಯಾಂಡ್ ಸೆಟ್ಟಿನವರು ಮದುಮಗ ಕಲ್ಯಾಣ ಮಂಟಪ ತಲುಪುತಿದ್ದಹಾಗೆ ಭಾರಿಸಿದರೆ, ಮದುಮಗ ನಿಜವಾಗಿಯೂ ಕಪ್ಪಗಿದ್ದರೆ, ಮದುವಣಗಿತ್ತಿ ಇಲ್ಲವೆ ಅವರ ಸ್ನೇಹಿತರು ನನ್ನ ಕೆಣಕಲಿಕ್ಕೆ ಈ ಹಾಡು ಭಾರಿಸಿಲಿಕ್ಕೆ ಹೇಳಿದ್ದರೇನೊ ಅಂತ ಅನ್ನಿಸಿದರೂ ಸಾಕು. ನಮ್ಮತ್ತೆಯ ಮಗ ಕಪ್ಪಗೇ ಇದ್ದಾನೆ, ಆದರೆ ಹೆಣ್ಣಿನ ಕಡೆಯವರು ಈ ಹಾಡು ಭಾರಿಸೊಕೆ ಹೆಳಿದ್ರೊ ಇಲ್ಲವೊ ಗೊತ್ತಿಲ್ಲ. ಬ್ಯಾಂಡ್ ಸೆಟ್ಟಿನವರು ಭಾರಿಸೊದು ಬರೀ ಸಿನಿಮಾ ಹಾಡುಗಳಾಗಿದ್ದಲ್ಲಿ "ಕರಿಯ ಐ ಲವ್ ಯು"ಗೆ ಪ್ರಥಮ ಸ್ಥಾನ ಕೊಡಬೇಕು, ಯಾಕೆ ಅಂದ್ರೆ ಅದು ಪ್ರಚಲಿತ. ಕೆಲವರು ಮುಂಗಾರು ಮಳೆಗೆ ಪ್ರಥಮ ಸ್ಥಾನ ಅನ್ನುಬಹುದು, ಇರಲಿ "ಕರಿಯ ಐ ಲವ್ ಯು"ಗೇ ಪ್ರಥಮ ಪ್ರಾಶಸ್ತ್ಯ ಕೊಡೋಣ. ಗಟ್ಟಿಮೇಳ ಅನ್ನುತಿದ್ದಹಾಗೆ ಗಟ್ಟಿಯಾಗಿ 'ಕರಿಯ ಐ ಲವ್ ಯು' ಭಾರಿಸಿದರೆ ಹೇಗಿರುತ್ತೆ. ಹಾಗಂತ ಮದುವೆಗೆ ಹೊಂದಿಕೊಳ್ಳೊ ಕನ್ನಡ ಸಿನಿಮಾ ಹಾಡುಗಳೇ ಇಲ್ಲ ಎಂದೇನಲ್ಲ. ಬಳೆ ಶಾಸ್ತ್ರಕ್ಕೆ 'ಹಸಿರು ಗಾಜಿನ ಬಳೆಗಳು...', ಆರತಕ್ಷತೆಗೆ 'ಕ್ಷಮಿಸಿ ನಾ ಹೇಳೊದೆಲ್ಲ ತಮಾಷೆಗಾಗಿ... ಮದುವೆಯಲ್ಲಿ ಬೀಗ ಹಾಡೊ ಸಂತೋಷಕ್ಕಾಗಿ...', ಊಟದ ಹೊತ್ತಿಗೆ ಮಾಯಾ ಬಜಾರ್ ಚಿತ್ರದ 'ವಿವಾಹ ಭೊಜನವಿದು, ವಿಚಿತ್ರ ಭಕ್ಶ್ಯಗಳಿವು...' ಹೀಗೆ ಇನ್ನೂ ಅನೇಕ. ಇನ್ನೂ ಹೊಂದಿಕೊಳ್ಳೊ ಹಾಡುಗಳು ನಿಮಗೆ ಹೊಳೆದರೆ ಕಮ್ಮೆಂಟಿನಲ್ಲಿ ಬರೆದು ತಿಳಿಸಿ.

ಬ್ಯಾಂಡ್ ಇಲ್ಲವೆ ಮೈಕ್ ಸೆಟ್ಟಿನಿಂದ ಬೇರೆ ಕಾರ್ಯಕ್ರಮಗಳಲ್ಲಿ ಆಭಾಸ ಉಂಟಾಗುವಂತಹ ಕೆಲವು ಹಾಡು ಹೇಳುತ್ತ ಈ ಅಧ್ಯಾಯ ಮುಗಿಸೊಣ...
ನಾಮಕರಣದಲ್ಲಿ- 'ಈ ದೇಹದಿಂದ ದೂರವಾದೆ ಏಕೆ ಆತ್ಮವೆ? ಈ ಸಾವು ನ್ಯಾಯವೆ?' ...ಸೆಟ್ಟಿನವರು ಇಲ್ಲಿ, ಹುಟ್ಟಿದವನು ಸಾಯಲೇ ಬೇಕು ಅನ್ನೋ ವೇದಾಂತ ಹೇಳುತ್ತಿದ್ದಾರ?
ಗಣಪತಿ ಹಬ್ಬದ ಪೆಂಡಾಲಿನಲ್ಲಿ 'ಹೊಡಿ ಮಗ ಹೊಡಿ ಮಗ ಬಿಡ ಬೇಡ ಅವುನ್ನ...' ಅನ್ನೊ ಹಾಡಿಗೆ ಡ್ಯಾನ್ಸ್ ಮಾಡುತಿದ್ದರೆ, ಕೂರಿಸಿರೊ ಗಣಪತಿನೇ ಹೆದರಬೇಕು.
ರಾಜ್ಯೊತ್ಸವದಲ್ಲಿ, ಚಿರಂಜೀವಿ ಇಲ್ಲವೇ ರಜನಿಕಾಂತ್ ಹಾಡಿಗೆ ಕುಣಿಯೊರನ್ನ ಏನು ರನ್ನ, ಚಿನ್ನ ಅಂತಿರಾ? ನಮ್ಮ ಇವತ್ತಿನ ಕನ್ನಡ ಪ್ರೀತಿ, ರಾಜ್ಯೊತ್ಸವ ಆಚರಿಸೊ ವಿಧ ವಿಧಾನಗಳ ಬಗ್ಗೆ, ನವೆಂಬರ್ ಕನ್ನಡ ಪ್ರೀತಿಯ ಬಗ್ಗೆ ಹೇಳೊಕೆ ಎಲ್ಲರ ಹತ್ರನೂ ತುಂಬಾ ವಿಷಯಗಳಿರಬಹುದು ಆದ್ದರಿಂದ ಅವುಗಳನ್ನೆಲ್ಲಾ ಇನ್ನೊಂದು ಅಧ್ಯಾಯಕ್ಕೆ ಬಿಟ್ಟು ಮೊದಲು ಹೇಳಿದ ಮಾತಿಗೆ ಬದ್ದನಾಗಿ ಈ ಅಧ್ಯಾಯ ಮುಗಿಸುತ್ತಿದ್ದೇನೆ.

Monday 9 July, 2007

ಬರೀಯೊಣು ಬಾರ

ಹೈಸ್ಕೂಲಿನಲ್ಲಿದ್ದಾಗ ಕತೆ, ಕವನ ಬರೀತಿದ್ದೆ ಚಿಕ್ಕಮಗಳೂರಿನ ಜನಮಿತ್ರದಲ್ಲಿ ಒಂದೋ, ಎರಡೊ ಕವನಗಳು ಪ್ರಕಟವಾಗಿದ್ದವು. ಆಗ ಓದು ಕಡಿಮೆ ಇತ್ತು, ಬರಹ ಜಾಸ್ತಿ. ದಿನ ಕಳೆದಂತೆ ಕುವೆಂಪು, ತೇಜಸ್ವಿ, ಭೈರಪ್ಪ, ಲಂಕೆಶ್ ಹೀಗೆ ಇನ್ನೂ ಅನೇಕರ ಗದ್ಯ ಸಾಹಿತ್ಯ ಓದುತ್ತ ಬಂದೆ. ಬರೆದರೆ ಹೀಗೆ ಬರೀ ಬೇಕು ಇಲ್ಲಾಂದ್ರೆ ಸುಮ್ಮನೆ ಓದಬೇಕು ಅಂತ ತೀರ್ಮಾನ ಮಾಡಿ, ನಾನು ಬರೀತಿದ್ದ ಡೈರಿ ತೆಗೆದಿಟ್ಟೆ.

ನನ್ನ ಚಿಕ್ಕಂದಿನಲ್ಲಿ ಇದ್ದ ಬರಹಗಾರನಾಗಬೇಕು ಅನ್ನೊ ತವಕ ಮಾಸಿ ಹೊಗಿದೆ. ಕನ್ನಡದಲ್ಲಿ ವ್ಯವಹಾರ ಕಡಿಮೆಯಾಗುತ್ತಿದೆ. ಆದರೂ ನನ್ನ ಕನ್ನಡ ಓದು ನಿಂತಿಲ್ಲ. ಇಂಗ್ಲೀಷ್ ಬಳಕೆ ಏಷ್ಟೇ ಹೆಚ್ಚಾದರು ಅದು ನಮ್ಮ ಮನೆ ಭಾಷೆ ಆಗುವ ಸಾಧ್ಯತೆಯಿಲ್ಲ ಆದ್ದರಿಂದ ನನಗೆ ಮತ್ತು ಕರ್ನಾಟಕದ ಎಲ್ಲರಿಗೂ ಕನ್ನಡ ಅತ್ಯವಶ್ಯಕವಾಗಿ ಬೇಕು. ನಾನು ನಿಂತ ನೀರಾಗಬಾರದು, ಬರೆಯುವುದರ ಮೂಲಕ ಚೈತನ್ಯ ಹೆಚ್ಚಿಸಿಕೊಳ ಬೇಕು ಅಂತ ಅನ್ನಿಸ್ತಿದೆ.
ಅದರ ಫಲ "ಕಾಡು ಹರಠೆ" ನೋಡೊಣ ಇದು ಎಷ್ತು ದಿನ ನಡಿಯುತ್ತೆ ಅಂತ...

ಮೇಲೆ ಹೇಳಿದ ಹಾಗೆ ಕನ್ನಡದಲ್ಲಿ ವ್ಯವಹಾರ ಕಡಿಮೆ ಆಗುತ್ತಿದೆ, ನಾನು ಸತತವಾಗಿ ಕನ್ನಡ ಬರೆದದ್ದು PUC ಪರೀಕ್ಷೆಲಿ ಅಂದುಕೊಳ್ಳುತ್ತೇನೆ... ಅದಾದ ನಂತರ ಸತತವಾಗಿ ಕನ್ನಡದಲ್ಲಿ ಬರೆದ ನೆನಪು ಬರುತ್ತಿಲ್ಲ. ಬರೆದು ತುಂಬ ದಿನವಾಗಿದೆ, blog ಮಾಡೊದು ನನಗೆ ಹೊಸತು, 'ಬರಹ' ತಂತ್ರಾಂಶ ಬಳಸಿಕೊಂಡು ಬರೀತಿದಿನಿ ಅದಕ್ಕೂ ಹೊಸದಾಗಿ ತೆರದುಕೊಳ್ಳುತ್ತಿದ್ದೀನಿ... ಇದೆಲ್ಲವನ್ನು ಲೆಕ್ಕಿಸಿ ಅಲ್ಲೊಂದು ಇಲ್ಲೊಂದು ವ್ಯಾಕರಣ ಇಲ್ಲವೇ ಭಾಷಾ ಪ್ರಯೋಗದಲ್ಲಿ ತಪ್ಪಿದ್ದಲ್ಲಿ ಕ್ಷಮಿಸಿ, ತಪ್ಪುಗಳು ತುಂಬಾನೇ ಜಾಸ್ತಿ ಆಯಿತು ಅನ್ನಿಸಿದರೆ ನನಗೆ ಬರೆದು ತಿಳಿಸಿ.

ಗೆಳೆಯ ಜಾನಕಿರಾಮ ಕೇಳಿದ, 'ಏನೊ, ಕಾಡು ಹರಠೆ ಅಂದ್ರೆ? ಕಾಡಲ್ಲಿ ನೋಡಿ ಬಂದಿದ್ದರ ಬಗ್ಗೆ ಬರೀತಿಯ?' ನನಗೆ ತತ್ ಕ್ಶಣಕ್ಕೆ ಎನೂ ಹೊಳಿಲಿಲ್ಲ, 'ಕೆಲಸಕ್ಕೆ ಬಾರದ ಮಾತುಗಳು ಅಂತ ಹೇಳಬಹುದು' ಅಂದೆ.' 'ಓ ಕಾಮ್ ಚೊರ್ ಗಳಿಗೆ ಅಂತ ಹೇಳು' ಅಂದ. ಓಳ್ಳೆ ಆರಂಭ ಅಂತ ಹೇಳಿ ನನ್ನ ಪರಿಚಯ ಪೋಸ್ಟ್ ಮಾಡಿದೆ...