Tuesday, 5 February 2008

Beach Trek

2008 ಜನವರಿ 19, 20ನೇ ತಾರಿಖಿನಂದು ನಾವು ಹೊನ್ನಾವರದಿಂದ ಗೋಕರ್ಣದವರೆಗೆ ಸಮುದ್ರದಂಡೆ ಚಾರಣ (Beach Trek) ಕೈಗೊಂಡ್ವಿ. ಕರ್ನಾಟಕದ ಕೊಂಕಣ ಬಹಳ ಸುಂದರ. ಅರಬ್ಬೀ ಸಮುದ್ರದ ದಂಡೆಯಲ್ಲಿ ನೆಡೆಯುತ್ತ ಅದರ ಸವಿಯನ್ನು ಅನುಭವಿಸಬೇಕು ಎನ್ನುವುದೇ ನಮ್ಮ ಉದ್ದೇಶವಾಗಿತ್ತು.

ಕೆಲವೊಂದು ಚಾರಣಗಳು ಸತಾಯಿಸ್ತವೆ, ಕಾಯಿಸ್ತವೆ. ಎಷ್ಟೋ ದಿನಗಳಿಂದ ತಯಾರಿ ಮಾಡಿಕೊಂಡಿದ್ರೂ ಹೊರಡೋ ಮುಂಚೆ ಏನೋ ವಿಘ್ನ ಕಾದಿರುತ್ತೆ. ಆದರೆ ಈ ಚಾರಣದ ಬಗ್ಗೆ ಕಾರ್ಥಿಕ್ ಕಳಿಸಿದ ವರದಿ ಓದಿದ ತಕ್ಷಣ ಇಲ್ಲಿಗೆ ಹೊಗೊ ತಾರಿಖು ಪಕ್ಕ ಮಾಡಿದ್ವಿ. ೧೫ ಜನ ತುಂಬಾ ಉತ್ಸಾಹದಿಂದ ನಾವು ಬರ್ತಿವಿ ಅಂತಂದ್ರು. ನಿಶ್ಚಯಿಸಿದ ದಿನಕ್ಕೂ ಹೊರಡೋ ದಿನಕ್ಕೂ 2 ವಾರ ಗ್ಯಾಪ್ ಇತ್ತು. ಅಷ್ಟರಲ್ಲಿ ಬೇರೆ ಬೇರೆ ಕಾರಣಕ್ಕೋಸ್ಕರ ನಾಲ್ಕು ಜನ ಕೆರೆ-ದಡ ಅನ್ನೋತರ ಬರ್ತಿವಿ, ಬರಬಹುದು, ಒಂಬತ್ತು ಗಂಟೆಗೆ ಹೇಳ್ತಿನಿ ಅನ್ನೋ ಹಂಗೆ ಆದ್ರು. ಇಬ್ಬರು ಹೊಸ ಸದಸ್ಯರ ಜೊತೆಗೆ ಕೊನೆಗೆ ಹೊರಟ ತಲೆಗಳು 13. ಪ್ರತಿ ಸಾರಿ KSRTC ಬಸ್ಸಲ್ಲೇ ಹೋಗುತ್ತಿದ್ದ "ಮಚ್ಚೆ ಎಲ್ಲಿದೆ!?" ತಂಡ ಈ ಸಾರಿ ಟೆಂಪೋ ಟ್ರಾವೆಲ್ಲರ್ ಬಾಡಿಗೆಗೆ ತಗೊಂಡು ಹೊರಟಿತ್ತು. ಉಪಯೋಗ- ಜಾಸ್ತಿ ಭಾರ ಹೊತ್ತುಕೊಂಡು ತಿರುಗೊ ಹಾಗಿಲ್ಲ.

ಶುಕ್ರವಾರ ರಾತ್ರಿ ಒಂಬತ್ತಕ್ಕೆ ಹೊರಡಬೇಕಾಗಿದ್ದವರು ಹತ್ತೂವರೆಗೆ ಮಲ್ಲೇಶ್ವರ ಬಿಟ್ವಿ. ಶಿವಮೊಗ್ಗದಲ್ಲಿ ಶಿವಣ್ಣನವರು ಹತ್ತಿದ್ದಾಗ ಬೆಳಗಿನ ಜಾವ ೫ ಗಂಟೆ. ಸಾಗರ, ಜೋಗ ದಾಟಿ ಗೇರುಸೊಪ್ಪ ಜಲಪಾತದ ಹತ್ತಿರ ಬಂದಾಗ ಏಳು ಗಂಟೆಯ ಮೇಲಾಗಿತ್ತು. ಗೇರುಸೊಪ್ಪ ಜಲಪಾತದಿಂದ ಧುಮುಕಿ ಮುಂದೆ ಹರಿಯುವ ನೀರಿನಲ್ಲಿ ನಮ್ಮ ನಿತ್ಯ ಕರ್ಮಗಳನ್ನ ಮುಗಿಸಿದೆವು. ಹೊನ್ನಾವರ ತಲುಪಿ ಕಾಮತ ಹೋಟೆಲಿನಲ್ಲಿ ಕೊಟ್ಟೆ ಕಡುಬು, ಬನ್ಸ್, ಶಿರ, ಮಸಾಲೆ ಮತ್ತು ಸೆಟ್ ದೋಸೆ ತಿಂದುಮುಗಿಸೋದರಲ್ಲಿ ಹತ್ತುಗಂಟೆಯಾಯಿತು. ಎಂಟು ಗಂಟೆಗೆಲ್ಲ ಹೊನ್ನಾವರದಲ್ಲಿ ಇದ್ದಿದ್ದರೆ ಬಿಸಿಲೇರುವುದರೊಳಗೆ ಸಾಕಷ್ಟು ದೂರ ನೆಡೆಯಬಹುದಿತ್ತು. ಹೊನ್ನಾವರದಿಂದ ಮುಂದೆ ಹಳದೀಪುರಕ್ಕೆ ಹೋಗಿ ಅಲ್ಲಿಂದ ನಮ್ಮ ಚಾರಣ ಆರಂಭಿಸಿದ್ವಿ.


ಅತ್ಯುತ್ಸಾಹಿ ಹದಿಮೂರು ಜನರ ತಂಡ ಹಳದೀಪುರ ಬೀಚಿನ ಬಿಳೀ ಮರಳನ್ನ ನೋಡಿ ಪುಳಕಿತರಾಗಿ ಸರಿಯಾಗಿ ನೀರನ್ನೂ ತೆಗೆದು ಕೊಳ್ಳದೆ ಚಾರಣ ಆರಂಭಿಸಿತು. ನಾವು ಹೊರಟಾಗ ಗಂಟೆ ೧೦.೩೦. ಹಳದೀಪುರದಿಂದ ಸುಮಾರು ೧.೫ ಕಿ.ಮೀ. ನೆಡೆದ ಮೇಲೆ ನಮಗೆ ಮೊದಲ ಗುಡ್ಡ ಸಿಕ್ಕಿತು. ಕಲ್ಲು ಬಂಡೆಗಳಿಂದ ಕೂಡಿದ್ದ ಗುಡ್ಡವನ್ನು ಹತ್ತಿಳಿಯುವುದು ನಮಗೆಲ್ಲಾ ಒಂದು ಹೊಸ ರೀತಿಯ ಅನುಭವ. ನೀರಿನ ಹೊಡೆತಕ್ಕೆ ಬಂಡೆಗಳು ವಿಚಿತ್ರ ಆಕಾರಗಳನ್ನು ಪಡೆದಿದ್ದವು. ಇವು ಕೆಲವುಕಡೆಗಳಲ್ಲಿ ಜಾರುತ್ತಿದ್ದರೆ ಕೆಲವುಕಡೆ ಚೂಪಾಗಿದ್ದವು. ಈ ಗುಡ್ಡವನ್ನು ಇಳಿದರೆ ಎದುರಿಗೆ ಸುಂದರವಾಗಿದ್ದ ಒಂದು ಬೀಚ್, ಕಣ್ಣಳತೆಯ ದೂರದಲ್ಲಿ ಮತ್ತೊಂದು ಗುಡ್ಡ. ಎರಡು ಗುಡ್ಡಗಳ ಮಧ್ಯದಲ್ಲಿರುವ ಬೀಚ್, ಇದು ರಾಮನಗಿಂಡಿ ಬೀಚ್. ಇಲ್ಲಿ ಒಂದು ದೇವಸ್ತಾನನೂ ಇದೆ ಅಂತ ನಮ್ಮಮ್ಮ ಹೇಳಿದ್ರು. ಅಲ್ಲಿಗೆ ಹೋಗೊಕೆ ಆಗಲಿಲ್ಲ.


ಸೂರ್ಯ ಮೇಲೆರುತ್ತಿದ್ದ, ನೀರಡಿಕೆಯಾಗುತ್ತಿತ್ತು, ಬಹಳ ಕಡಿಮೆ ನೀರು ತಂದು ತಪ್ಪು ಮಾಡಿದ್ವಿ. ಇದ್ದ ಕಿತ್ತಲೆ ಹಣ್ಣನ್ನ ತಿಂದು ಮುಗಿಸಿದೆವು. ರಾಮನಗಿಂಡಿ ಬೀಚಿನ ಎರಡನೇ ಗುಡ್ಡವನ್ನೂ ಹತ್ತಿ ಆಚೆತುದಿಯಲ್ಲಿ ಇಳಿದಾಗ ಸಿಗುವುದೇ ಧಾರೇಶ್ವರ. ಕಣ್ಣು ಹಾಯೋವಷ್ಟು ದೂರನೂ ಮರಳು, ಒಂದು ಬದಿಗೆ ಗುಡ್ಡ. ಧಾರೇಶ್ವರದ ಸಮುದ್ರ ದಂಡೆಯಲ್ಲಿ ಕೆಲವು ಮನೆಗಳಿವೆ, ಒಬ್ಬರ ಮನೆಯಲ್ಲಿ ಸಿಹಿ ನೀರಿನ ಭಾವಿ ಸಿಕ್ಕಿತು. ಅಲ್ಲಿ ಚೆನ್ನಾಗಿ ನೀರು ಕುಡಿದು ನಮ್ಮ ಬಾಟಲಿಗಳನ್ನು ತುಂಬಿಸಿಕೊಂಡು ಮುಂದೆ ಹೊರಟೆವು.


ಸಮಯ ಮಧ್ಯಾನ್ಹ ೧೨.೪೫. ಇಲ್ಲಿಂದ ಮುಂದೆ ಕುಮಟ ಬೀಚಿನವರೆಗೆ ಮರಳದಂಡೆಯ ಮೇಲೆ, ಸಮುದ್ರದ ಪಕ್ಕದಲ್ಲೇ ನೆಡೆಯಬೇಕು, ಒಟ್ಟು ದೂರ ೬ ಕಿ.ಮೀ. ಸಮುದ್ರದ ದಂಡೆಯಲ್ಲಿ ನೆಡೆಯುವುದು ಸ್ವಲ್ಪ ವಿಚಿತ್ರ, ದೂರದಲ್ಲೆಲ್ಲೂ ಕೊನೆ ಇರುವಂತೆ ಕಂಡರೂ ಎಷ್ಟು ನೆಡೆದರೂ ಮುಗಿಯದ ದಾರಿಯಂತೆ ಅನ್ನಿಸುತ್ತದೆ. ಹಿತವಾಗಿ ಗಾಳಿ ಬೀಸುತ್ತಿದ್ದರಿಂದ ನೆಡೆಯುವುದು ಅಷ್ಟು ಆಯಾಸದಾಯಕವಾಗಿರಲಿಲ್ಲ. ಧಾರೇಶ್ವರದಿಂದ ಕುಮಟದವರೆಗೆ ಸಾಕಷ್ಟು ಹಕ್ಕಿಗಳನ್ನು ನೋಡಿದೆವು. ಕೆಲವು ಬೆಳ್ಳಗೆ ಹೊಳೆಯುತ್ತಿದ್ದರೆ ಕೆಲವು ಕಂದು ಮಿಶ್ರಿತ. ಕೆಲವು ಗುಬ್ಬಚ್ಚಿಯ ಹಾಗೆ ಸಣ್ಣಗಿದ್ದವು ಆದರೆ ಕಾಗೆಗಳಿಗಿಂತ ದಪ್ಪಗಿದ್ದ ಹಕ್ಕಿಗಳ ಗುಂಪು ಸಾಕಷ್ಟು ದೊಡ್ದದಿತ್ತು ಮತ್ತು ಬಹಳ ಚಾಣಾಕ್ಷವಾಗಿತ್ತು. ಈ ಹಕ್ಕಿಗಳು ಗುಂಪಿನ ಒಂದು ತುದಿಯಿಂದ ಇನ್ನೊಂದು ತುದಿಗೆ ಹಾರಿ ನಮ್ಮಿಂದ ಒಂದು ಸುರಕ್ಷಿತ ಅಂತರವನ್ನ ಕಾಪಾಡಿಕೊಳ್ಳುತ್ತಿದ್ದವು. ನಾವು ಒಂದು ಕಿಲೋ ಮೀಟರಿನಷ್ಟು ದೂರ ಇವುಗಳ ಜೊತೆಯಲ್ಲೇ ಬಂದಮೇಲೆ ಒಮ್ಮೆಲೆ ಹಿಂದಕ್ಕೆ ಹಾರಿ ಅವು ಮೊದಲಿದ್ದ ಜಾಗ ತಲುಪಿದವು.


ನಾವು ಕುಮಟ ಬೀಚ್ ತಲುಪಿದಾಗ ೨.೧೫. ಕುಮಟ ಬೀಚಿನಲ್ಲಿ ಒಂದು ಸಣ್ಣ ಹಳ್ಳ ಸಮುದ್ರವನ್ನು ಸೇರುತ್ತದೆ, ಇದು ಅಘನಾಶಿನಿ ನದಿಯ ಒಂದು ಕವಲು ಎಂದು ಕೆಲವರು ಹೇಳಿದರು. ನಮ್ಮ ಟೆಂಪೋ ಟ್ರಾವೆಲ್ಲರ್ ಒಡೆಯ ಬಾಬುನನ್ನು ಅಲ್ಲಿಗೆ ಬರಲು ಹಳದಿಪುರ ಬಿಟ್ಟಾಗಲೇ ತಿಳಿಸಿದ್ದೆವು. ಅವನು ಕುಮಟ ಬೀಚ್ ತಲುಪಿ ಅಲ್ಲಿ ನೆಡೆಯುತ್ತಿದ್ದ ಶೂಟಿಂಗ್ ಬಗ್ಗೆ ನಮಗೆ ವರದಿ ಒಪ್ಪಿಸಿದ್ದ. ಅಲ್ಲಿ ಭಯ.com ಚಿತ್ರದ ಒಂದು ಹಾಡಿನ ಚಿತ್ರೀಕರಣ ನೆಡೆಯುತ್ತಿತ್ತು. ನಾವು ಅಲ್ಲಿಗೆ ತಲುಪುವ ಹೊತ್ತಿಗೆ ಸರಿಯಾಗಿ ಅವರು ಪ್ಯಾಕ್ ಅಪ್ ಹೇಳಿದರು. ಗಾಡಿ ಹತ್ತಿ ಕುಮಟ ಪಟ್ಟಣಕ್ಕೆ ಹೋಗಿ ಊಟಮಾಡಿದೆವು. ಊಟದ ನಂತರ ಮಜ್ಜಿಗೆ, ಎಳನೀರು ಮತ್ತು ಕಬ್ಬಿನಹಾಲು ಇವುಗಳಲ್ಲಿ ನಮಗೆ ಬೇಕಾದುದನ್ನು ಆಯ್ದುಕೊಂಡು ಕುಡಿದೆವು. ಬಾಬು ನಮ್ಮನ್ನು ವಾಪಸ್ ಕರೆದುಕೊಂಡು ಬಂದು ಕುಮಟ ಬೀಚಿನಲ್ಲಿ ಬಿಟ್ಟ. ಶೂಟಿಂಗ್ ಮತ್ತೆ ಶುರುವಾಗಿತ್ತು.


ನಾವು ಕುಮಟ ಬೀಚ್ ಬಿಟ್ಟಾಗ ೪ ಗಂಟೆ. ಮೊದಲ ದಿನದ ಕೊನೆಗೆ ನಾವು ಬಾಡ ತಲುಪ ಬೇಕಿತ್ತು. ಕುಮಟ ಬೀಚಿನ ಕೊನೆಗೆ ಒಂದು ಗುಡ್ಡ ಇದೆ. ಈ ಬಾರಿ ಗುಡ್ಡವನ್ನು ಬಳಸಿಕೊಂಡು ಕಲ್ಲು ಬಂಡೆಗಳ ಮೇಲೆ ಹೋಗದೆ, ಗುಡ್ಡವನ್ನು ಹತ್ತಿ ಇಳಿದೆವು. ಅಷ್ಟೇನೂ ಕಡಿದಾಗಿರದೆ, ಜನರು ಓಡಾಡಿ ಕಾಲು ದಾರಿಗಳು ಇದ್ದಿದ್ದರಿಂದ ಸುಲಭವಾಗಿ ಈ ಗುಡ್ಡವನ್ನು ದಾಟಿದೆವು. ಗುಡ್ಡ ಇಳಿದ ಮೇಲೆ ಸಿಕ್ಕಿದ್ದು ವನ್ನಳ್ಳಿ ಬೀಚ್ ಮತ್ತು ವನ್ನಳ್ಳಿ ಗ್ರಾಮ. ಈ ಬೀಚ್ ಅರ್ದ ಚಂದ್ರಾಕ್ರುತಿಯಲ್ಲಿದ್ದು ಬಹಳ ಸುಂದರವಾಗಿದೆ. ಈ ಬೀಚಿನ ಇನ್ನೊಂದು ಕೊನೆಯಲ್ಲಿ ಮತ್ತೊಂದು ಗುಡ್ಡ ಇದೆ. ಅದನ್ನು ಹತ್ತಿ ಇಳಿದರೆ ಸಣ್ಣ ಬೀಚ್ -ಅದರ ಹೆಸರು ಮಂಗೊಡ್ಲು ಬೀಚ್- ಮತ್ತೊಂದು ಗುಡ್ಡ. ಈ ಗುಡ್ಡದ ಹೆಸರು ಕಡ್ಲೆ ಗುಡ್ಡ. ಕಡ್ಲೆ ಗುಡ್ಡವನ್ನು ಹತ್ತಿ ಇಳಿದರೆ ವಿಶಾಲವಾದ ಸಮುದ್ರ ದಂಡೆ. ಮಂಗೊಡ್ಲು ಬೀಚಿನಲ್ಲಿ ನಮಗೆ ಒಂದು ದೊಡ್ಡ ಮೀನಿನ ಮೂಳೆ ನೋಡಲು ಸಿಕ್ಕಿತು. ಅದು ತಿಮಿಂಗಿಲದ್ದೇ ಇರಬೇಕು ಅಷ್ಟು ದೊಡ್ಡ ಮೂಳೆ ಅದು. ಒಬ್ಬರು ಅದರ ಮೇಲೆ ಆರಾಮವಾಗಿ ಕೂರ ಬಹುದಿತ್ತು, ಅಷ್ಟು ದೊಡ್ಡ ಮೂಳೆ ಅದು.


ಕಡ್ಲೆ ಗುಡ್ಡವನ್ನು ಇಳಿದ ಮೇಲೆ ಮುಂದೆ ಹೊನಲಗದ್ದೆ, ಗುಡೇ ಅಂಗಡಿ ಆಮೆಲೆ ಬಾಡ ಸಿಗುತ್ತದೆ. ಕಡ್ಲೆ ಗುಡ್ಡ ಇಳಿದ ಮೇಲೆ ಬಾಡ ತಲುಪಲು ಮೂರರಿಂದ ನಾಲ್ಕು ಕಿಲೋ ಮೀಟರ್ ನೆಡೆಯ ಬೇಕು. ಸಂಜೆ ತಂಪು ಹಿತವಾಗಿತ್ತು. ಸಮತಟ್ಟಾದ ದಂಡೆಯಲ್ಲಿ ಕ್ಯಾಚ್ ಕ್ಯಾಚ್ ಆಟ ಆಡುತ್ತ ಹೆಜ್ಜೆ ಹಾಕಿದೆವು. ಬಾಡ ತಲುಪಲು ಇನ್ನೂ ಒಂದು ಕಿಲೋ ಮೀಟರಿನಷ್ಟು ದೂರ ಇರುವಾಗಲೆ ಸೂರ್ಯ ಮುಳುಗತೊಡಗಿದ. ಎಲ್ಲರೂ ಮುಳುಗುವ ಸೂರ್ಯನೊಟ್ಟಿಗೆ ಫೋಟೋ ತೆಗೆಸಿಕೊಂಡೆವು. ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದರೆ ಪೂರ್ವದಿಂದ ಚಂದ್ರ ಮೇಲೆ ಬಂದಿದ್ದ. ಹುಣ್ಣಿಮೆಗೆ ಇನ್ನು ಎರಡು ದಿನಗಳಿದ್ದವು.


ಸೂರ್ಯ ಮುಳುಗಿದರೂ ಸಾಕಷ್ಟು ಬೆಳಕಿತ್ತು. ಬಾಡ ತಲುಪಿ ಸ್ವಲ್ಪ ಹೊತ್ತು ಆಟ ಆಡುವುದರಲ್ಲಿ ಪೂರ್ತಿ ಕತ್ತಲಾಯಿತು. ಬಾಡದ ಸಮುದ್ರ ದಂಡೆಯಲ್ಲಿ ದೊಡ್ಡ ದೊಡ್ಡ ಬಂಡೆಗಳಿವೆ. ಎಲ್ಲರೂ ಒಂದೇ ಬಂಡೆ ಹತ್ತಿ ಕೂತೆವು. ಗಾಡಿಯೊಟ್ಟಿಗೆ ಬಾಬುಗೆ ಬಾಡಕ್ಕೆ ಬರಲು ಹೇಳಿದ್ದೆವು. ಆ ರಾತ್ರಿ ನಮಗೆ ಉಳಿಯಲು ಬಾಡದ ಶ್ರೀ ಪ್ರಮೋದ್ ಮಹಾಲೆಯವರು ತಮ್ಮ ಮನೆಯಲ್ಲಿ ವ್ಯವಸ್ತೆ ಮಾಡಿದ್ದರು. ಮಹಾಲೆಯವರು ನಮ್ಮ ತಂದೆಯವರ ಸ್ನೇಹಿತರು. ನಮ್ಮ ದೊಡ್ಡ ಗುಂಪು ಅವರ ಮನೆಯಲ್ಲಿ ಉಳಿಯುವುದು ಹೇಗೆಂದು ನಮಗೆ ಮುಜುಗರವಿತ್ತು. ಅವರ ಮನೆ ತಲುಪಿದಾಗ ೭.೩೦. ಸಿಹಿ ನೀರಿನಲ್ಲಿ ಕೈಕಾಲು ಮುಖ ತೊಳೆದು ಅವರು ಕೊಟ್ಟ ಶರಬತ್ತು ಕುಡಿದು ಅವರ ಮನೆಯ ಜಗುಲಿಯಲ್ಲಿ ಆಸಿನರಾದೆವು. ಮಹಾಲೆಯವರು ರಾತ್ರಿ ಭರ್ಜರಿ ಭೋಜನ ಮಾಡಿಸಿದ್ದರು. ಭೋಜನವಾದ ಮೇಲೆ ಬಾಳೆಹಣ್ಣು.

ಇಲ್ಲಿಂದ ಬೆಳಗ್ಗೆ ಮುಂಚೆ ಸೂರ್ಯ ಹುಟ್ಟುವುದರೊಳಗೆ ಹೊರಟು ಬೆಳದಿಂಗಳಿನಲ್ಲಿ ಸ್ವಲ್ಪ ನೆಡೆದು ಚಂದ್ರ ಮುಳುಗುವುದನ್ನು ನೋಡಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಆದರೆ ದಣಿದಿದ್ದ ದೇಹಗಳು ಬೆಳಗ್ಗೆ ಬೇಗ ಏಳಲಿಲ್ಲ. ನಾವು ಮಹಾಲೆಯವರಿಗೆ ಬೀಳ್ಕೊಟ್ಟು ಹೊರಟಾಗ ಬೆಳಗ್ಗೆ ೬ ಗಂಟೆ ೩೦ ನಿಮಿಷಗಳಾಗಿದ್ದವು. ಅಪರಿಚಿತ ಹಳ್ಳಿಯಲ್ಲಿ ನಮ್ಮನ್ನು ಮನೆಯಲ್ಲಿ ಉಳಿಸಿ, ಒಳ್ಳೆಯ ಊಟ ಹಾಕಿಸಿ ಮಹಾಲೆಯವರು ಅದ್ಭುತವಾಗಿ ನೋಡಿಕೊಂಡರು.


ಎರಡನೆಯ ದಿನ ಇಬ್ಬರು retired hurt ಆಗಿ ೧೩ ಜನರ ಗುಂಪು ೧೧ಕ್ಕೆ ಇಳಿದಿತ್ತು. ನಾವೆಲ್ಲರು ಜೇಷ್ಟಪುರದ ಸಮುದ್ರ ದಂಡೆ ತಲುಪುವುದರೊಳಗೆ ಸಂಪೂರ್ಣವಾಗಿ ಬೆಳಕಾಗಿತ್ತು. ವಾಲಿಬಾಲ್ ಆಡಿ, ಅದೇ ಬಾಲಿನಲ್ಲಿ ಫುಟ್ ಬಾಲ್ ಆಡುತ್ತ ಮುಂದೆ ಸಾಗಿದೆವು. ಮರಳಿನ ಮೇಲೆ ಓಡುತ್ತ beach jogging ಮಾಡಬೇಕೆನ್ನುವುದು ನನ್ನ ಮತ್ತು ಚಂದ್ರನ ಬಹಳ ದಿನಗಳ ಆಸೆ. ನಮ್ಮಿಬ್ಬರ beach joggingಗೆ ರಾಘವೇಂದ್ರನೂ ಸೇರಿಕೊಂಡ. ಅಘನಾಶಿನಿ ಗುಡ್ಡದವರೆಗೂ ಓಡಿ ನೆಡೆದು ಓಡಿದೆವು. ಅಘನಾಶಿನಿ ಗುಡ್ದದ ಮೇಲೆ ಕಿರಿ ಕೋಟೇಯಿದೆ. ಸಣ್ಣಗೆ ಕಾಂಪೌಂಡ್ ಎತ್ತರಕ್ಕೆ ಇರುವ ಕೋಟೆ ಗೋಡೆ ಬೆಟ್ಟದ ನೆತ್ತಿಯನ್ನು ಸುತ್ತಿಕೊಂಡು ಬರುತ್ತದೆ. ಅಘನಾಶಿನಿ ಬೆಟ್ಟದ ಮೇಲಿನಿಂದ ಅಘನಾಶಿನಿ ನದಿ ಸಮುದ್ರ ಸೇರುತ್ತಿರುವುದು ಕಾಣುತ್ತದೆ. ಇಲ್ಲಿ ನದಿ ಬಹಳ ವಿಶಾಲವಾಗಿ ಹರಿಯುತ್ತದೆ. ಒಂದು ದಂಡೆಯಿಂದ ಇನ್ನೊಂದು ದಂದೆಗೆ ದೋಣಿಯಲ್ಲಿ ಹೋಗಬೇಕು. ಬೆಟ್ಟವನ್ನು ಇಳಿದು ದೋಣಿಗಳಿದ್ದ ಜಾಗ ತಲುಪುವುದರೊಳಗೆ ಬೆಳಗಿನ ಹತ್ತು ಗಂಟೆಗಳ ಮೇಲಾಗಿತ್ತು. ದೋಣಿಯಲ್ಲಿ ನದಿ ದಾಟಲು ಬಹಳ ಜನರಿದ್ದರು ಮತ್ತು ನಮ್ಮ ತಂಡದವರೆಲ್ಲರಿನ್ನೂ ಬಂದಿರದ ಕಾರಣ ಸಣ್ಣದಾಗಿ ಒಂದು ಬೀಚ್ ವಾಲಿಬಾಲ್ ಆಡಿದೆವು.

ಎಲ್ಲರೂ ಬಂದು ದೋಣಿ ಹಿಡಿದು ಆಚೆಯ ದಡದಲ್ಲಿದ್ದ ತದಡಿ ಎಂಬ ಬಂದರು ಹಳ್ಳಿ ತಲುಪಿ ಒಂದು ಹೋಟೆಲ್ ಹೊಕ್ಕೆವು. ಬನ್ಸ್, ಇಡ್ಲಿ ಮತ್ತು ಕಾಫಿ ಸೇವಿಸಿದೆವು. ಹೊಟೆಲಿನ್ನ ಎದುರಿಗೆ ಒಂದು ಗಣಪತಿ ದೇವಸ್ತಾನ, ಪಕ್ಕದಲ್ಲಿ ಒಂದು ಆಟದ ಮೈದಾನವಿತ್ತು. ಮೈದಾನದಲ್ಲಿ ವಾಲಿಬಾಲ್ ಕೋರ್ಟ್ ಇದ್ದು ನೆಟ್ ಸಹ ಕಟ್ಟಿತ್ತು. ವಾಲಿಬಾಲ್ ಕೋರ್ಟ್ ನೋಡಿದ್ದೇ ಒಂದು ಆಟ ಆಡಲು ಇಳಿದೆವು. ಬೀಚಿನಲ್ಲಿ ಡೈವ್ ಹೋಡೆದು ವಾಲಿಬಾಲ್ ಆಡುತ್ತಿದ್ದವರಾರೂ ಇಲ್ಲಿ ಡೈವ್ ಹೊಡೆಯುವ ಉಮೇದಿ ತೋರಿಸಲಿಲ್ಲ. ನಮ್ಮ ಆಟ ನೋಡಲು ತಕ್ಕ ಮಟ್ಟಿಗೆ ಸ್ತಳೀಯ ಪ್ರೇಕ್ಷಕರು ನೆರೆಯತೊಡಗಿದರು. ರಾಘವೇಂದ್ರ ಮತ್ತು ಹರೀಶರಿದ್ದ ತಂಡ ಸೋತಿತು. ಆಟ ಮುಗಿದ ಮೇಲೆ ತದಡಿಯ ಜನರಿಗೆ ವಿದಾಯ ಹೇಳಿ ಪ್ಯಾರಡೈಸ್ ಬೀಚಿನ ಕಡೆಗೆ ಹೊರಟೆವು.

ತದಡಿಯಿಂದ ಮುಂದೆ ಬರುತ್ತಾ ಆಟದ ಬಗ್ಗೆ ವಿಶ್ಲೇಷಣೆ ಮಾಡುತ್ತಾ ಸೋಲನ್ನು ಯಾರಾದರೊಬ್ಬರ ತಲೆಗೆ ಕಟ್ಟಲು ಯತ್ನಿಸುತ್ತಿದ್ದರು. ರಾಘವೇಂದ್ರ ಮತ್ತು ಹರೀಶ ಸೋಲಿಗೆ ಪರಸ್ಪರರನ್ನು ದೂರಿದರೆ, ಇಬರೂ ಕಾರಣರೆನ್ನುವುದು ತಂಡದ ಸರ್ವಾನುಮತದ ತೀರ್ಮಾನವಾಗಿತ್ತು. ಆದರೆ ನಮ್ಮ ವಾಲಿಬಾಲ್ ಆಟದ ಫೋಟೋ ತೆಗಯದೆ ಜಾನಕಿರಾಮ ನಿಜವಾದ ಖಳನಾಯಕನಾಗಿದ್ದ.


ತದಡಿಯಿಂದ ಹೊರಟು ಬೆಲೆಕಾನ್ ಬೀಚ್ ದಾಟಿ ಒಂದು ಗುಡ್ಡವನ್ನು ಹತ್ತಿ ಇಳಿದರೆ ಪ್ಯಾರಡೈಸ್ ಬೀಚ್ ಸಿಗುತ್ತದೆ. ಇಲ್ಲಿ ಮರಳಿನ ದಂಡೆ ಅಷ್ಟೇನು ದೊಡ್ಡದಿಲ್ಲ ಆದರೆ ಬಹಳ ಸಂಖ್ಯೆಯಲ್ಲಿ ಚೂಪಾದ ಬಂಡೆಗಳಿದ್ದು ನೋಡಲು ತುಂಬಾ ಸುಂದರವಾಗಿದೆ. ಇಲ್ಲಿಂದ ಮುಂದೆ half moon beach ಇದೆ. ಪ್ಯಾರಡೈಸ್ ಬೀಚಿನಿಂದ ಹಾಲ್ಫ್ ಮೂನ್ ಬೀಚಿಗೆ ಬಂಡೆಗಳ ಮೇಲೆ ಹತ್ತಿ ಹೋಗಲು ಆಗುವುದಿಲ್ಲ. ಗುಡ್ಡವನ್ನು ಹತ್ತಿ ಹೋಗಬೇಕು. ಹಾಲ್ಫ್ ಮೂನ್ ಬೀಚಿನಲ್ಲಿ ಸಹ ಮರಳ ದಂಡೆ ಸಣ್ಣದೆ. ಆದರೆ ನೋಡಲು ಬಹಳ ಚೆನ್ನಾಗಿದೆ. ತದಡಿಯಿಂದ ಪ್ಯಾರಡೈಸ್ ಬೀಚ್ ತಲುಪಲು ೩೦ ರಿಂದ ೪೦ ನಿಮಿಷಗಳು ಬೇಕು. ಪ್ಯಾರಡೈಸ್ ಬೀಚಿನಿಂದ ಹಾಲ್ಫ್ ಮೂನ್ ಬೀಚ್ ತಲುಪಲು ಸುಮಾರು ೧೫ ನಿಮಿಷಗಳು ಸಾಕು.

ಈ ಎರಡೂ ಬೀಚುಗಳಿಗೆ ಕಾಲ್ನೆಡಿಗೆಯಲ್ಲಿ ಬರದೆ ಬೇರೆ ದಾರಿಯಿಲ್ಲ. ಬಹುಷಃ ಇದೇ ಕಾರಣದಿಂದಲೇ ಈ ಎರಡೂ ಬೀಚುಗಳಿಗೆ ಹೆಚ್ಚು ಜನರು ಬರದೆ ಬಹಳ ಶುಭ್ರವಾಗಿವೆ. ಈ ಎರಡೂ ಬೀಚುಗಳಲ್ಲಿ ವಿದೇಶೀ ಪ್ರವಾಸಿಗರು ತುಂಬಿದ್ದರು. ದೇಶೀಯರು ಇಲ್ಲಿ ಅಂಗಡಿಗಳನ್ನೂ ಹೋಟೆಲ್ಲುಗಳನ್ನು ನೆಡೆಸುತ್ತಾರೆ. ಆದರೆ ಅವರಿಗೆ ದೇಶೀ ಗ್ರಾಹಕರ ಕಡೆಗೆ ಒಲವಿಲ್ಲ. ಓಂ ಬೀಚಿನಲ್ಲಿಯೂ ಇದೇ ಕತೆ. ಇತ್ತೀಚಿಗೆ ಓಂ ಬೀಚಿನವರೆಗೂ ಟಾರ್ ರಸ್ತೆ ಮಾಡಿರುವುದರಿಂದ ಓಂ ಬೀಚಿನಲ್ಲಿ ವಿದೇಶಿಯರನ್ನಷ್ಟೇ ಅಲ್ಲದೇ ದೇಶಿಯರನ್ನೂ ಕಾಣಬಹುದಿತ್ತು. ಓಂ ಬೀಚಿನಲ್ಲಿ ದೇಶಿಯರ ಒಂದು ಗುಂಪು ಸುಮಾರು ೨-೩ ಗಂಟೆಗಳಕಾಲ ಕೂತು ಸಮಾರಾಧನೆ ನೆಡೆಸಿ ಸಾಕಷ್ಟು ಪ್ಲಾಸ್ಟಿಕ್ ಕಸ ಎಸೆದು ಹೋಯಿತು. ಪಕ್ಕದಲ್ಲೇ ಇದ್ದ ತೊಟ್ಟಿಯ ಮೇಲೆ 'ಗ್ರಾಮ ಪಂಚಾಯಿತಿ ಗೋಕರ್ಣ, ನನ್ನನ್ನು ಉಪಯೋಗಿಸಿ' ಎಂದಿದ್ದದ್ದು ಅವರಿಗೆ ಕಾಣಿಸಲೇ ಇಲ್ಲ. ಇದು ಬೀಚುಗಳದಷ್ಟೇ ಕತೆಯಲ್ಲ. ಮುಂಗಾರು ಮಳೆ ಚಿತ್ರದ ನಂತರದ ಜೋಗವನ್ನು ನೋಡಿ ನಾನು ನಡುಗಿ ಹೋಗಿದ್ದೆ. ಗಾಳಿಪಟದ ನಂತರ ಕೊಡಚಾದ್ರಿ ಹಾಗಾಗದಿರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ.

ಹಾಲ್ಫ್ ಮೂನ್ ಬೀಚಿನಿಂದ ಓಂ ಬೀಚಿಗೆ ೨೦ ನಿಮಿಷಗಳ ಹಾದಿ. ಒಂದು ಗುಡ್ಡವನ್ನು ಹತ್ತಿ ಇಳಿಯಬೇಕು. ಗುಡ್ಡದ ಮೇಲಿನಿಂದ ಒಂದು ಬದಿಗೆ ಕಾಣುವ ಸಮುದ್ರ, ಕೆಳಗಿನ ಬಂಡೆಗಳಿಗೆ ಬಂದು ಅಪ್ಪಳಿಸುವ ಅಲೆಗಳು, ಅವುಗಳನ್ನು ನೋಡುತ್ತಾ ದಿನವೆಲ್ಲಾ ಅಲ್ಲಿ ಕೂರಬಹುದು. ಈ ಗುಡ್ಡ ಇಳಿಮುಖವಾದಾಗ ಓಂ ಬೀಚ್ ಕಾಣುತ್ತದೆ. ಗುಡ್ಡದ ಮೇಲಿನಿಂದ ಸಮುದ್ರ ದಂಡೆ '3'ರ ಆಕಾರದಲ್ಲಿ ಕಾಣುತ್ತದೆ. ಇಲ್ಲಿ ಸಮುದ್ರ ಸಮತಟ್ಟಾಗಿದ್ದು ವಿಷಾಲವಾಗಿ ಹರಡಿಕೊಂಡಿದೆ. ನೀರು ತಿಳಿಯಾಗಿದೆ. ಅಲೆಗಳ ಹೊಡೆತ ಜೋರಾಗಿಲ್ಲ.

ನಾವು ಓಂ ಬೀಚ್ ತಲುಪಿದಾಗ ೩ ಗಂಟೆಗಳ ಮೇಲಾಗಿತ್ತು. ಬ್ಯಾಗುಗಳನ್ನು ಕಳಚಿ ಎಲ್ಲರೂ ನೀರಿಗೆ ಇಳಿದೆವು. ದಣಿದ ದೇಹಗಳಿಗೆ ನೀರು ಅಹ್ಲಾದಕರವಾಗಿತ್ತು. ಕರಿ ಮತ್ತು ಗುರು ಇಬ್ಬರನ್ನು ಹೊರತು ಪಡಿಸಿದರೆ ಈ ಎರಡು ದಿನದಲ್ಲಿ ಉಳಿದವರಾರೂ ಸಮುದ್ರಕ್ಕೆ ಇಳಿದಿರಲಿಲ್ಲ. ಕರಿ ಮಾತ್ರ ಮೊದಲ ದಿನದಿಂದಲೇ ಸಿಕ್ಕ ಸಿಕ್ಕ ಬೀಚಿನಲ್ಲೆಲ್ಲಾ ನೀರಿಗೆ ಬಿದ್ದು ಬಂದಿದ್ದ. ಒಂದು ಗಂಟೆಗೂ ಹೆಚ್ಚು ಹೊತ್ತು ನೀರಿನಲ್ಲಿ ಆಡಿ ಸಂತುಷ್ಟರಾದಮೇಲೆ ಗೋಕರ್ಣಕ್ಕೆ ಹೊರಟೆವು.



ಓಂ ಬೀಚಿನಿಂದ ಮುಂದೆ ಗುಡ್ಡವೊಂದನ್ನು ಹತ್ತಿಳಿದರೆ ಕುಡ್ಲೆ ಬೀಚ್ ಸಿಗುತ್ತದೆ. ಅಲ್ಲಿಂದ ಮುಂದೆ ಇನ್ನೊಂದು ಗುಡ್ಡ ಹತ್ತಿಳಿದರೆ ಗೋಕರ್ಣ. ನಾವುಗಳು ಓಂ ಬೀಚಿನಿಂದ ಕಾಲ್ನೆಡಿಗೆಯಲ್ಲಿ ಹೋಗದೆ ಗಾಡಿ ಹತ್ತಿ ಗೋಕರ್ಣ ತಲುಪಿದೆವು.

ಗೋಕರ್ಣದಲ್ಲಿ ಸ್ನಾನ ಮುಗಿಸಿ ದೇವರ ದರ್ಶನ ಮಾಡಿದೆವು. ಗೋಕರ್ಣದಿಂದ ಹೊರಟು ಕುಮಟದಲ್ಲಿ ರಾತ್ರಿ ಊಟಮಾಡಿ ಬೆಂಗಳೂರಿನೆಡೆಗೆ ಹೊರಟೆವು. ಗಾಡಿಯಲ್ಲಿ ಹರಟೆ ರಾತ್ರಿ ಬಹಳ ಹೊತ್ತಿನವರೆಗೆ ನೆಡೆದಿತ್ತು. ಒಟ್ಟಿನಲ್ಲಿ ಒಂದು ಅಹ್ಲಾದಕರವಾದ ಮತ್ತು ವಿಭಿನ್ನವಾದ ಚಾರಣಮುಗಿಸಿ ಸಂತೋಷದಿಂದ ಹಿಂದಿರುಗಿದೆವು.

ಕಾರ್ತಿಕ್ ಕಳಿಸಿದ್ದ ವರದಿಯಲ್ಲಿ ಒಂದು ಬೀಚಿನಿಂದ ಇನ್ನೊಂದು ಬೀಚಿನ ನಡುವಿನ ದೂರವನ್ನು ಕಿಲೋ ಮೀಟರುಗಳಲ್ಲಿ ತಿಳಿಸಿತ್ತು. ನಮಗಿದು ಉಪಯೋಗಕ್ಕೆ ಬಂತು. ಹೆಚ್ಚಿನ ಉಪಯೋಗಕ್ಕೆ ಬಂದಿದ್ದು 'wikimapia.org'ನಿಂದ ತೆಗೆದುಕೊಂಡು ಹೋಗಿದ್ದ ಚಿತ್ರಗಳು. ನನಗೆ ಕೊನೇ ಘಳಿಗೆಯಲ್ಲಿ ಈ ಚಿತ್ರಗಳ ಪ್ರಿಂಟ್ ತರಲು ಹೇಳಿದ್ದ ಜಾನಕಿರಾಮನಿಗೆ ಶಹಭಾಸ್ ಹೇಳೋಣ.

Friday, 1 February 2008

ಗೀತೆ-ಗಾಯನ

ಇದು ನಾನು ಬರೆದಿರುವ ಅತೀ ಸಣ್ಣಕತೆ.

ಹರೀಶ ಕವನ ಬರೆದ. "ಅಲೆಗಳ ತೀರದಲ್ಲಿ ಏನೀ ನಿನ್ನ ಮೌನ?".
ಉತ್ತರ ಭಾರತದ ಗಾಯಕ ಹಾಡಿದ. "ಹಲೆಗಳ ತೀರದಲಿ ಏನೀ ನಿಮ್ಮೌನ?"

Thursday, 3 January 2008

ಚಿಕ್ಕ ಊರಿಗೆ ಹೊರಟ


ಚಿತ್ರ: ನಮ್ಮೂರಲ್ಲಿ ಓಡಾಡೋ ಖಲೀಲ್ ಬಸ್ಸಲ್ಲಿ ಹಾಕಿದ್ದ ಫೋಟೋ

ವಿಶಾಲಾಕ್ಷಮ್ಮನವರು ಚಿಕ್ಕನನ್ನು ಒಬ್ಬಂಟಿಯಾಗಿ ಯಾವ ಊರಿಗೂ ಕಳಿಸಿರಲಿಲ್ಲ. ಒಬ್ಬಂಟಿಯಿರಲಿ ತಮ್ಮೊಟ್ಟಿಗೆ ಯಾವುದೇ ಮದುವೆ, ನಾಮಕರಣಗಳಿಗೆ ನೆಂಟರ ಮನೆಗೆ ಕರೆದುಕೊಂಡು ಹೋಗಿದ್ದರೂ ತಮ್ಮೊಡನೆಯೇ ಹಿಂದಕ್ಕೆ ಕರೆದುಕೊಂಡು ಬರುತ್ತಿದ್ದರು. ನೆಂಟರ ಮನೆಗಳಲ್ಲಿ ತನ್ನ ಓರಗೆಯವರೊಂದಿಗೆ ಆಡುತಿದ್ದ ಆಟಗಳನ್ನು ಅರ್ಧಕ್ಕೇ ಬಿಟ್ಟು ಹೋರಡುವಾಗಲಂತೂ ಚಿಕ್ಕನಿಗೆ ಜೀವವೇ ಹೋದಂತಾದರೂ ಅಮ್ಮನ ಹಿಂದೆ ಹೊರಡದೆ ಬೇರೆಯ ದಾರಿಯಿರುತ್ತಿರಲಿಲ್ಲ. ಆದರೆ ಈ ಬಾರಿ ಒಬ್ಬನೇ ದೊಡ್ಡಮ್ಮನ ಮನೆಗೆ ಹೊರಟಿದ್ದರಿಂದ ತಾನೂ ದೊಡ್ಡವನಾದೆನೆಂಬ ವೀರತ್ವದ ಭಾವ ಚಿಕ್ಕನನ್ನು ಆವರಿಸಿಕೊಂಡಿತ್ತು.

ಕಚೇರಿಗೆ ಹೊರಟಿದ್ದ ಚಿಕ್ಕನ ಅಪ್ಪ ದಾರಿಯಲ್ಲಿ ಇವನನ್ನು ಬಸ್ಸಿನಲ್ಲಿ ಕೂರಿಸಿ ಡ್ರೈವರ್ ರುದ್ರಯ್ಯನಿಗೆ ಹೇಳಿಹೋಗುವವರಿದ್ದರು. ಇವರು ಬಸ್ಟ್ಯಾಂಡಿಗೆ ಹೋಗುವ ಹೊತ್ತಿಗೆ ಸರಿಯಾಗಿ ರುದ್ರಯ್ಯನ ವಿರೂಪಾಕ್ಷ ಬಸ್ಸು ಬಂದಿತು. ಚಿಕ್ಕನನ್ನು ಬಸ್ಸಿನಲ್ಲಿ ಕೂರಿಸಿ ರುದ್ರಯ್ಯನಿಗೆ "ಇವನ ದೊಡ್ಡಪ್ಪಬಂದು ಇಳಿಸಿಕೊಳ್ಳುತ್ತಾರೆ" ಎಂದು ಹೇಳಿ, ಚಿಕ್ಕನಿಗ ಟಾಟಾ ಮಾಡಿ ಹೋದರು. ಹೋದಸಾರಿ ಊರಿನಲ್ಲಿ ದೊಡ್ದಮ್ಮನ ಮಕ್ಕಳೊಂದಿಗೆ ಬಾಡಿಗೆ ಸೈಕಲ್ಲಿನಲ್ಲಿ ಮಾವಿನ ತೋಪಿಗೆ ಹೋಗಿದ್ದನ್ನು, ವಾಪಸ್ಸು ಬಂದಾಗ ಅಮ್ಮ ಝಾಡಿಸಿದ್ದನ್ನೂ ಜ್ಞಾಪಿಸಿಕೊಂಡ. ಈ ಸಾರಿ ಅಮ್ಮ ಇಲ್ಲದಿದ್ದರಿಂದ ಮಾವಿನ ತೋಪಿನಲ್ಲಿ ಪೂರ್ತಿದಿನ ಕಳೆಯಬೇಕೆಂದುಕೊಂಡ.

"ಈಶ, ಹತ್ತಲಾ ಬೇಗ, ಮೂರ್ ಜನ ಕೂರೋ ಸೀಟ್ ಮ್ಯಾಗೆ ಟವೆಲ್ ಪೂರ್ತಿ ಹಳ್ಡು" ಎಂದು ಒಬ್ಬಳು ತಾಯಿ, ಜನಗಳ ಮಧ್ಯೆ ತೂರಿ ಸೀಟು ಮಾಡಲು ತನ್ನ ಮಗನನ್ನು ಪ್ರಚೋದಿಸುತ್ತಿದ್ದಳು. ಡ್ರೈವರ್ ರುದ್ರಯ್ಯನ ಕಡೆಯಿಂದ ಚಿಕ್ಕನಿಗೆ ಒಂದು ಸೀಟು ಸಿಕ್ಕಿತು. ಈಶ ಹಿಡಿದ್ದಿದ್ದ ಸೀಟಿನ ಅಡಿಯಲ್ಲಿ ಅವನಮ್ಮ ಸಾಮಾನುಗಳನ್ನು ತುಂಬಿಸಿದಳು. ಸೀಟು ಸಿಗದವರು ಮಕ್ಕಳನ್ನು ತೊಡೆಯ ಮೇಲೆ ಕೂರಿಸಿಕೊಳ್ಳುವಂತೆ ಹೇಳಿದ್ದಕ್ಕೆ ಅವರೀಗೂ ಅರ್ಧ ಟಿಕೇಕು ಮಾಡಿಸುವುದಾಗಿ ವಾದಮಾಡಿ ಯಾರಿಗೂ ಸೀಟು ಬಿಡಬಾರದೆಂದು ಈಶನಿಗೆ ಹೇಳಿದಳು. ಅವಳೊಡನೆ ವಾದ ಮಾಡಲಾಗದವರು ಗೊಣಗಿಕೊಂಡು ಸುಮ್ಮನಾದರು.

ಚಿಕ್ಕನಿಗಿಂತ ಸಣ್ಣವನಂತೆ ಕಾಣುತಿದ್ದ ಹುಡುಗನೊಬ್ಬ ಒಂದು ನಾಯಿಮರಿಯನ್ನು ಬಸ್ಸಿಗೆ ಹತ್ತಿಸಿ ಅದರ ಕುತ್ತಿಗೆಗೆ ಕಟ್ಟಿದ್ದ ಹುರಿಯನ್ನು ಭದ್ರವಾಗಿ ಹಿಡಿದು ನಿಂತಿದ್ದ.

ಬಿಳಿ ಪಂಚೆ, ಬಿಳಿ ಶರಟು, ಹಸಿರು ಟವೆಲ್ ಹೊದ್ದ ಯಜಮಾನರೊಬ್ಬರು ನಿಧಾನವಾಗಿ ಬಸ್ಸುಹತ್ತಿ ಯಾವುದಾದರೂ ಸೀಟಿದಿಯಾ ಎಂದು ಸುತ್ತಲೂ ಕಣ್ಣಾಡಿಸಿದರು. ಮುಂದಿನಿಂದ ಮೂರನೇ ಸೀಟಿನಲ್ಲಿ ಇವರಂತೆಯೇ ಹಸಿರು ಟವೆಲ್ ಹೊದ್ದಿದ್ದವನೋಬ್ಬನನ್ನು ನೋಡಿ
"ನಂಟ, ಏನೋ ಗಾಡನೇ ಹತ್ತಿ ಸೀಟ್ ಹಿಡಿದಿಯಾ, ನಂಗು ಒಂದು ಸೀಟ್ ಮಾಡದಲ್ಲೇನೋ" ಎಂದರು.
"ಸಂತೆ ಮುಗಿಸಿಕೊಂಡು ನೆನ್ನೆನೆ ಹೋಗಿರ್ತಿಯ ಅಂದುಕೊಂಡಿದ್ನಪ್ಪ. ಇನ್ನೂ ಇಲ್ಲೇ ಇದ್ದಿಯ ಅಂತ ನಂಗೇನು ಗೊತ್ತಿತ್ತು" ಎಂದು ರಾಗ ಎಳೆದ.
ಸೀಟಿ ಹೊಡೆಯುತ್ತಾ ಮೇಲೆ ಹತ್ತಿದ ಕಂಡಕ್ಟರ್ "ಮುಂದೆ ನಡಿರಿ ಪಂಚಾಯತಿನೆಲ್ಲಾ ಊರಿಗೆ ಹೊಗಿ ಮಾಡಿದ್ರಾಯಿತು" ಎಂದು ಒಳಗೆ ಕಳಿಸುತ್ತಾ ಇವರ ಮಾತುಗಳನ್ನು ತುಂಡರಿಸಿದ.
ಕಂಡಕ್ಟರನ ದೃಷ್ಟಿ ನಾಯಿಮರಿಯ ಮೇಲೆ ಬಿದ್ದಿತು. "ಯಾರುದ್ರಿ ಇದು ನಾಯಿಮರಿ" ಎಂದು ಅಬ್ಬರಿಸಿ "ನಿಂದೆನೋ?" ಎಂದು ಹುಡುಗನ ಕಡೆ ನೋಡಿದ.
"ಹೂ ಕಣ್ಣಣ್ಣ ನಂದೆಯ" ಎಂದ ಹುಡುಗ.
"ನಾಯಿ, ಕೋಳಿ, ಕುರಿನೆಲ್ಲ ಹತ್ತಿಸಲ್ಲ ಅಂತ ಗೊತ್ತಿಲ್ಲೇನೋ? ನಾಯಿ ತಗಂಡೋಗೋಹಂಗಿದ್ರೆ ಏಳ್ ಗಂಟೆ ಸಿದ್ರಾಮಕ್ಕ್ ಹೋಗು" ಎಂದು, ನಾಯಿ ಮತು ಹುಡುಗನನ್ನು ಇಳಿಸಲು ನೋಡಿದ.
"ಸುಂಕಿರಪ ಸಾಕು, ನಿನ್ ಬಸ್ಸೊಳಗೆ ಅರ್ದ ಗಂಟೆ ನಾಯಿಯಿದ್ರೆ ಏನು ಆಗಕಿಲ್ಲ. ನೋಡಕೆ ನಿನ್ಕಿಂತ ಅದೇ ಕ್ಲೀನಾಗಿ ಕಾಣ್ತಾಅಯ್ತಿ" ಎಂದು ಒಂದು ಮುದುಕಿ ಕಂಡಕ್ಟರಿಗೆ ತಗುಲಿಕೊಂಡಳು.
"ಓ ಭಾರಿ... ಅದು ಏನಾರ ಮಾಡಿಕೊಂಡ್ರೆ ನಿನ್ ಕೈಲೇ ಬಾಚುಸ್ತಿನಿ" ಎನ್ನುತ್ತಾ "ನಡಿರಿ ಮುಂದೆ" ಎನ್ನುತ್ತಾ ಒಳ ನಡೆದ.
ಚಿಕ್ಕ, ಊರಿಂದ ವಾಪಸ್ಸು ಬರುವಾಗ ಪಮ್ಮಿ ಮನೆಯಿಂದ ನಾಯಿಮರಿ ತರಬೇಕು ಎಂದು ಕೊಂಡಿದ್ದ. ಇವ್ರು ಬಸ್ಸಿಗೆ ಹತ್ತಿಸ್ದಿದ್ರೆ ಕಷ್ಟ, ದೊಡ್ಡಪ್ಪಂಗೆ ಹೇಳಿ ಡ್ರೈವರ್ ರುದ್ರಯ್ಯಂಗೆ ಹೇಳೋಕೆ ಹೇಳಬೇಕು ಎಂದು ಕೊಂಡ.

ಡ್ರೈವರ್ ರುದ್ರಯ್ಯನೂ ಬಸ್ಸು ಹತ್ತಿ, ಎರಡು ಸಾರಿ ಹಾರೆನ್ ಹೊಡೆದು, ಬಸ್ಸು ಸ್ಟಾರ್ಟ್ ಮಾಡಿದ. ನಿಧಾನವಾಗಿ ಬಸ್ಸು ಸರ್ಕಲ್ ಬಿಟ್ಟು ಕ್ಯಾಂಪಿನ ಕಡೆಗೆ ಹೊರಟಿತು.
ಟಿಕೇಟು ಮಾಡಿಕೊಂಡು ಕಂಡಕ್ಟರ್ ಈಶ, ಅವನಮ್ಮ ಕೂತಿದ್ದ ಸೀಟಿಗೆ ಬಂದ. "ಒಂದು ಫುಲ್, ಎಳ್ಡ್ ಆಫ್ ಎಂದು" ಈಶ ಮತ್ತು ಇನ್ನೋಬ್ಬ ಮಗನನು ತೋರಿಸಿದಳು.
"ಹೈಸ್ಕೂಲಿಗೆ ಹೋಗೋ ಹುಡುಗ್ರಿಗೆ ಫುಲ್ ಮಾಡಿಸ್ ಬೇಕು ಕಣಮ್ಮ" ಎಂದ ಕಂಡಕ್ಟರಿಗೆ, "ಸ್ಕೂಲ್ ಹೋಗ್ದೇ ಇರ್‍ಓ ಹುಡುಗ್ರಿಗೇನು ಪುಗ್ಸಟ್ಟೆ ಕರ್ಕೊಂಡು ಹೋಗ್ತಿಯಾ" ಎಂದು ಸವಾಲೆಸೆದಳು.
ಅಷ್ಟರಲ್ಲಿ ಬಸ್ಸು ಕ್ಯಾಂಪಿಗೆ ಬಂದಿದ್ದರಿಂದ ಹಾರನ್ ಮಾಡುತ್ತಾ ನಿಂತಿತು. ಓಡೊಡಿ ಬಸ್ಸು ಹತ್ತಿದ ಹುಡುಗನೋಬ್ಬ ಈಶ ಮತ್ತು ಅವರಮ್ಮನನ್ನು ನೋಡಿ "ಅತ್ತೆಮ್ಮ, ಅಮ್ಮ ಇನ್ನು ರೆಡಿಯಾಗಿಲ್ಲ ೧೦ ಗಂಟೆ ಬಸ್ಸಿಗೆ ಹೋಗೋದಂತೆ, ನೀನು ಇಳಿಬೇಕಂತೆ" ಎಂದು ಕೂಗಿ ಕೆಳಗಿಳಿದ. ಈ ತಾಯಿ ಅವಸರಮಾಡುತ್ತಾ ಈಶನಿಗೆ ೨ ಬ್ಯಾಗು ಕೊಟ್ಟು ಉಳಿದ ಬ್ಯಾಗುಗಳನ್ನು ಹಿಡಿದು ಇನ್ನೊಬ್ಬ ಮಗನನ್ನು ತಳ್ಳಿಕೊಂದು ಹತ್ತುತ್ತಿರುವವರಿಗೆ ಎದುರಾಗಿ ಇಳಿಯತೊಡಗಿದಳು. "ಸರ್ಕಲ್ಲಿಂದ ಕ್ಯಾಂಪಿಗೆ ಬರೋಕೆ ಇಷ್ಟೋಂದು ರಂಪ ಮಾಡಿದ ನೀನು, ಒಬ್ಬೊಬ್ಬರಿಗೆ ಎರೆಡೆರಡು ರುಪಾಯಿ ತೆಗಿ" ಎಂದ ಕಂಡಕ್ಟರನಿಗೆ ೫ ರೂಪಾಯಿ ಕೊಡುತ್ತಾ "ನೀನೆ ಇನ್ನು ೧ ರುಪಾಯಿ ಚಿಲ್ಲರೆ ಕೊಡಬೇಕು" ಎಂದಳು. "ಇನ್ನೇನು ಬ್ಯಾಡವೆ?" ಎಂದು ಚಿಲ್ಲರೆ ಕೊಡದೆ ರೈಟ್ ಹೇಳಿ "ರುದ್ರಣ್ಣ, ಸರ್ಕಲ್ಲಿಂದ ಕ್ಯಾಂಪಿಗೆ ಯಾರುನ್ನೂ ಹತ್ತಿಸೋದು ಬ್ಯಾಡಕಣ್ಣಣ್ಣ ಇನ್ನ್ ಮೇಲೆ" ಎನ್ನುತ್ತ ಟಿಕೇಟ್ ಮಾಡುತ್ತಾ ಮುಂದೆ ಹೋದನು.

ಕಂಡಕ್ಟರ್ ಹಸಿರು ಟವೆಲ್ ಯಜಮಾನರ ಬಳಿ ಬಂದು ಟಿಕೆಟ್, ಟಿಕೆಟ್ ಎಂದಾಗ "ನಂಟ ನಂದೂ ತಗಂಡಿದಿಯ ಅಲ್ಲೇನೋ?" ಎಂದು ಖಾತ್ರಿಯಾಗಿ ಕುಳಿತಿದ್ದ ಹಸಿರು ಟವೆಲ್ಲಿನವರ ಕಡೆಗೆ ನೋಡಿದರು, "ಯಾಕಪ್ಪ? ನೀನು ರಾತ್ರೆಲ್ಲ ಆಟ ಆಡಿ ದುಡ್ಡು ಕಳಕಂಡು ಬಂದಿದಿಯಾ ಅಂತ ನನಗೇನು ಗೊತ್ತಾಗಬೇಕು" ಎಂದು ತಣ್ಣಗೆ ಮರ್ಯಾದೆ ತೆಗೆಯಲು ಶುರು ಮಾಡಿದ್ದರಿಂದ ಗೊಣಗಿಕೊಳ್ಳುತ್ತಾ ಟಿಕೇಟಿಗೆ ದುಡ್ಡು ಕೊಡತೊಡಗಿದರು.

"ದೇವರಳ್ಳಿಗೆ ನಾಕುವರೆಗೆ ಕಮ್ಮಿ ಇಲ್ಲ... ಸರಿಯಾಗಿ ಕೊಡು ಇದೇನು ಸಂತೆ ವ್ಯಾಪಾರ ಕೆಟ್ಟೋತೆ? " ಎಂದು ಕಂಡಕ್ಟರ್ ಒಂದು ಮುದುಕಿಯ ಮೇಲೆ ರೇಗತೊಡಗಿದಾದ ಚಿಕ್ಕನ ಗಮನ ಆ ಕಡೆಗೆ ಹರಿಯಿತು. "ಸುಂಕೆ ಇಟ್ಟ್ಗಳಪ್ಪ ಒಂದು ರುಪಾಯಗೆ ಯಾರು ಎನ್ ಮನೆ ಕಟ್ಟಿ ಮದುವೆ ಮಾಡಕಿಲ್ಲ" ಎಂದಳು ಘಾಟಿ ಮುದುಕಿ.
"ಸಾರಿಯಾಗಿ ದುಡ್ಡು ತೆಗೆ, ಇಲ್ಲಾಂದ್ರೆ ಇಲ್ಲೇ ಇಳಿಸಿ ಹೋಗ್ತಿನಿ ನೋಡು" ಎಂದ ಕಂಡಕ್ಟರ್ ಎಂದರೂ ಮುದುಕಿ ಬಗ್ಗುವಂತೆ ಕಾಣಲಿಲ್ಲ. "ರುದ್ರಣ್ಣ ಗಾಡಿ ಸೈಡಿಗೆ ನಿಲ್ಲಿಸು ಈವಮ್ಮನ್ನ ಇಲ್ಲೇ ಇಳಿಸಿ ಹೋಗೋಣ... ಇವರತ್ರ ಯಾವನ್ ಬಡ್ಕ್ಂತನೆ" ಎಂದಿದ್ದಕ್ಕೆ, "ತಗಳೋ ಮಾರಯ, ಒಂದ್ ರುಪಾಯಿ ಮಕಾನೆ ಕಂಡಿಲ್ದಂಗೆ ಆಡ್ತನೆ ಇವನು" ಎಂದು ತನ್ನ ಎಲೆ ಚೀಲದಿಂದ ಒಂದು ರೂಪಾಯಿ ತೆಗೆದು ಕುಕ್ಕಿದಳು.

ಇಷ್ಟರಲ್ಲಿ ಹಿಂದಿನ ಬಾಗಿಲಿನ ಬಳಿ ನೆಡೆಯುತ್ತಿದ್ದ ಕುತೂಹಲಕಾರಿ ಮಾತುಕತೆಗಳ ಕಡೆಗೆ ಚಿಕ್ಕನ ಕಿವಿ ತಿರುಗಿದವು
ಒಂದು ಧ್ವನಿ "ಲೋ ಲೌಡೆ!! ಆವಾಗಿಂದ ಕಾಣ್ದಂಗೆ ಎಲ್ಲಿ ನಿಂತಿದ್ದೆ?" ಎಂದರೆ, "ಓ ನೀನು, ಏನ್ ಹೇಳಪ್ಪ" ಎಂದು ಇನ್ನೊಂದು ಧ್ವನಿ ಉತ್ತರಿಸಿತು.
"ನಾಳೆ ಗಿರೀಲಿ ನನ್ನ ಮದುವೆ, ಬರಬೇಕು ನೀನು"
"ಏ ಇದೇನೋ ಇದು ಇದ್ದುಕಿದ್ದಂಗೆ?"
"ಯಾಕೆ ನಂಗೇನು ಮೀಸೆ ಬಂದಿಲ್ವ, ಇಲ್ಲ ತೊಡೆ ಬಲ್ತಿಲ್ವ?"
"ಹಂಗಲ್ಲ ಕಣಲೆ, ಸಡನ್ ಆಗಿ ಹೇಳ್ತಿದಿಯಲ್ಲ ಅದುಕ್ಕೆ ಕೇಳಿದ್ದು"

"ದೇವರಳ್ಳಿ, ದೇವರಳ್ಳಿ ಯಾರ್ರಿ? ಇಳಿಯವ್ರು ಬರ್ರೀ ಬೇಗ" ಎಂದು ಕಂಡಕ್ಟರ್ ಕೂಗಿದಾಗ ಮದುವೆಗೆ ಕರೆಯುತ್ತಿದ್ದ ಮದಲಿಂಗ "ಮರಿದಲೆ ಬರಬೇಕಲೇ" ಎಂದು ಹೇಳಿ ಇಳಿದು ಹೋದ.

"ರೈಟ್ ರೈಟ್" ಎಂದೊಡನೆ ಬಸ್ಸು ಮುಂದಕ್ಕೆ ಹೊರಟಿತು, ಹಿಂದಿನ ಬಾಗಿಲಿನ ಬಳಿಯಿಂದ ಧ್ವನಿಗಳು ಬರುತ್ತಲೇ ಇದ್ದವು,
"ಮೂರು ಪ್ಯಾಕೆಟ್ ಹೊಡೆದ ಮೇಲೆ ನೆಟ್ಟಗೆ ನಿಂತ್ಗಳಕೆ ಬರಲ್ಲ ಇವ್ರಿಗೆಲ್ಲ ಮದುವೆ"
"ಬಿಡಲೆ, ಎಲ್ಲಾರಿಗೂ ಆಗ್ತಾಯ್ತಿ... ಇವ್ನಿಗೂ ಆಗ್ಲಿ... ನೀನು ಹೋಗಿ ಲಾಡ್ ತಿಂದ್ ಬಾ..."
"ಲಾಡ್ ಎಲ್ಲೆದು, ಪಾಯ್ಸ ಇದ್ದಾತು ಅಷ್ಟೆಯ"
"ಅಷ್ಟೆ ಅಂತಿಯ?"
"ಕಣಿ ಕೇಳು"

ಚಿಕ್ಕನಿಗಾಗಲೆ ಸಣ್ಣಗೆ ತೂಕಡಿಕೆ ಶುರುವಾಗಿದ್ದರಿಂದ, ಕಿಟಕಿಗೆ ಒರಗಿ ಕೊಂಡ.

Tuesday, 20 November 2007

2007 ಕರ್ನಾಟಕದ ರಾಜಕೀಯ

ಗೆಳೆಯರೆ,

youtube ನೋಡುತ್ತಿದ್ದಾಗ ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಒಂದು ವೀಡಿಯೋ ನೋಡಿದೆ. ಇದು ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನದ ವೀಡಿಯೊ ರೂಪ. ಬರೆದು ಪ್ರಸ್ತುತ ಪಡಿಸುವವರು ರವಿ ಕೃಷ್ಣ ರೆಡ್ಡಿ. ಈ ಲೇಖನಗಳನ್ನು ಅವರ ಬ್ಲಾಗಿನಲ್ಲಿಯೂ ನೋಡಬಹುದು. ಅವರ ಬ್ಲಾಗಿನ ಹಾದಿ ಕೆಳಗಿದೆ.

ಬ್ಲಾಗ್ - ಅಮೇರಿಕಾದಿಂದ ರವಿ